ಸುಮಾರು 3000 ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಕೇರಳಾದ ಕಿಳಾಕಿಕ್ಕರ ಶ್ರೀ ಕೃಷ್ಣ ದೇವಸ್ಥಾನವನ್ನು ಪುರಾತನ ದೇವಸ್ಥಾನ ಎಂದು ಹೇಳಲಾಗುತ್ತದೆ. ಕಣ್ಣೂರಿನಿಂದ ಸುಮಾರು 17 ಕಿ.ಮೀ.ದೂರದಲ್ಲಿರುವ ಕ್ಷೀರಕಾಲದಲ್ಲಿ ಈ ದೇವಾಲಯವಿದ್ದು ರಸ್ತೆ ಮಾರ್ಗದಲ್ಲಿ ಸುಲಭವಾಗಿ ಇಲ್ಲಿಗೆ ಸುಲಭವಾಗಿ ತಲುಪಬಹುದು. ಅನೇಕ ಶತಮಾನಗಳ ಚರಿತ್ರೆಯನ್ನು ಹೊಂದಿರುವ ಈ ದೇವಾಲಯವು, ಇತಿಹಾಸ ತಜ್ಙರು ಹಾಗೂ ಪ್ರಿಯರ ಆಸಕ್ತಿಗೆ ಪಾತ್ರವಾಗಿದೆ. ಇಲ್ಲಿ ದೊರೆತಿರುವ ದೇವಾಲಯದ ಕೈಬರಹ ಲಿಪಿಗಳು ಸುಮಾರು 2500 ವರ್ಷಗಳಷ್ಟು ಹಿಂದಿನದು ಎಂದು ಪುರಾತತ್ವ ಇಲಾಖೆ ತಿಳಿಸಿದೆ.
ಕಿಳಾಕಿಕ್ಕರ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಬಾಲ ಗೋಪಾಲನನ್ನು ಆರಾಧಿಸಲಾಗುತ್ತದೆ, ಕೃಷ್ಣನನ್ನು ಈ ರೀತಿಯಾಗಿ ಆರಾಧಿಸುವುದು ಅಪರೂಪವಾಗಿದೆ. ಈ ದೇವಸ್ಥಾನವು ಕ್ಷೀರಕಾಲ ಸರೋವರದ ಸಮೀಪದಲ್ಲೇ ಸುಮಾರು 5 ಎಕರೆ ಪ್ರದೇಶವನ್ನು ಹೊಂದಿದ್ದು ಅತ್ಯಂತ ಆಕರ್ಷಕವಾಗಿದೆ. ಕ್ಷೀರಕಾಲ ರಾಜ ಮನೆತನದವರ ಕಾಲದಲ್ಲಿ ಇದು ಪವಿತ್ರವಾದ ದೇವಸ್ಥಾನವಾಗಿದ್ದು, ಇಲ್ಲಿ ಈಗಲೂ ಜರುಗುವ ಅನ್ನಸಂತರ್ಪಣೆಯು ಅತ್ಯಂತ ವಿಶೇಷವಾದ ಕಾರ್ಯಕ್ರಮವಾಗಿದೆ. ದೇವಸ್ಥಾನದ ಸುತ್ತಲೂ ಆಧ್ಯಾತ್ಮಿಕ ವಾತಾವರಣವೇ ಇದ್ದು, ಇಲ್ಲಿಗೆ ಬರುವ ಭಕ್ತರು ಭಕ್ತಿ ಪೂರ್ವಕವಾಗಿ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಸಮರ್ಪಿಸುತ್ತಾರೆ.