ಕರ್ನಾಟಕದ ಕೊಡಗಿನ ತಲಕಾವೇರಿಯಲ್ಲಿ ಜನಿಸಿ, ತಮಿಳುನಾಡಿನಲ್ಲೂ ಹರಿದಿರುವ ಕಾವೇರಿ ನದಿಯು ಇಲ್ಲಿನ ಪ್ರಮುಖ ಆಕರ್ಷಣೆ. ರಾಷ್ಟ್ರದ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿರುವ ಕಾವೇರಿ ನದಿಯು 765 ಕಿ.ಮೀ. ಉದ್ದವಿದೆ. ಕಾವೇರಿಯ ಹಲವಾರು ಉಪನದಿಗಳು ತಮಿಳುನಾಡಿನಲ್ಲಿ ಹರಿಯುತ್ತದೆ. ಶಿಂಶಾ, ಅಮರಾವತಿ, ನೊಯಿಲ್ ಮತ್ತು ಭಾಬನಿ ಇದರಲ್ಲಿ ಪ್ರಮುಖವಾದದ್ದು.
ಈ ನದಿಯಿಂದಾಗಿ ತಮಿಳುನಾಡು ಹಲವಾರು ಜಲವಿದ್ಯುತ್ ಯೋಜನೆಗಳನ್ನು ನಿರ್ವಹಿಸುತ್ತಿದೆ. ಇಷ್ಟು ಮಾತ್ರವಲ್ಲದೆ ಕಾವೇರಿ ಹಿಂದೂಗಳಿಗೆ ಪೂಜ್ಯನೀಯ ನದಿಯಾಗಿದೆ. ಪುರಾಣಗಳಲ್ಲಿ ದೇವತೆ ಎಂದೇ ಕರೆದಿರುವ ಕಾವೇರಿ ನದಿಯಲ್ಲಿ ಹಿಂದುಗಳು ಹಲವಾರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ನೀರಿಗಾಗಿ ನಡೆಯುತ್ತಿರುವ ವಿವಾದದಿಂದಾಗಿ ಕಾವೇರಿ ನದಿ ರಾಷ್ಟ್ರೀಯ ಮಟ್ಟದಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತದೆ.