ಕಡಪಾಗೆ ಬಂದಾಗ ನೋಡಲೇ ಬೇಕಾದ ತಾಣ ಭಗವಾನ್ ಮಹಾವೀರ ಮ್ಯೂಸಿಯಂ. ಇದನ್ನು 1982 ರಲ್ಲಿ ನಿರ್ಮಿಸಲಾಗಿದೆ. ಜೈನ್ ಸಮುದಾಯದವರ ಶ್ರಮದಿಂದ ಇದು ನಿರ್ಮಾಣಗೊಂಡಿದೆ. ಇವರೇ ದೊಡ್ಡ ಪ್ರಮಾಣದ ಆರ್ಥಿಕ ಸಹಾಯವನ್ನು ಕೂಡ ನಿರ್ಮಾಣ ಕಾರ್ಯಕ್ಕೆ ನೀಡಿದರು. ಈ ಮ್ಯೂಸಿಯಂನಲ್ಲಿ ಜೈನ ಧರ್ಮೀಯರ ಚಿತ್ರಗಳು, ಅಪರೂಪದ ಕಲೆಗಳು ಹಾಗೂ ವಾಸ್ತುಶಿಲ್ಪ ವಿನ್ಯಾಸಗಳು ಇವೆ.
ಮ್ಯೂಸಿಯಂ ಒಳಭಾಗದಲ್ಲಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳು, ಜನಪ್ರಿಯ ವ್ಯಕ್ತಿಗಳ ಕಂಚಿನ ಪುತ್ತಳಿಗಳು, ಮಣ್ಣಿನ ಮೂರ್ತಿಗಳು, ಲಿಪಿಗಳು, ವಿದ್ವತ್ ಬರಹಗಳು ಹಾಗೂ ಸಂಗ್ರಹಗಳು ಇಲ್ಲಿ ಹೇರಳ ಪ್ರಮಾಣದಲ್ಲಿವೆ. ಭಾರತದಲ್ಲಿ ಜೈನ ಧರ್ಮ ಪ್ರಕಾಶಮಾನವಾಗಿದ್ದ ಸಂದರ್ಭದಲ್ಲಿ ತೆಗೆದ ಪುರಾತನ ಕಾಲದ ಚಿತ್ರಗಳು ಇಲ್ಲಿವೆ. ನಂದಲೂರು, ಗುಂಡಲೂರು, ತಿಮ್ಮಯ್ಯಪಲ್ಲೇಂ, ಅತ್ತಿರಾಲಾ, ಮಂಟಮಪಲ್ಲಿ, ಪೊಲಿ, ಕೊಲ್ತನೂರು ಹಾಗೂ ಇತರೆ ಪ್ರದೇಶ ಅಲ್ಲದೇ ದೇಶದ ವಿವಿಧ ಭಾಗಗಳಿಂದ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ಇಲ್ಲಿ ತಂದಿರಿಸಲಾಗಿದೆ. ಇಲ್ಲಿ ಸಂಗ್ರಹಿತವಾಗಿರುವ ಎಲ್ಲಾ ವಸ್ತುಗಳೂ 5ರಿಂದ 18ನೇ ಶತಮಾನದ ಸಂದರ್ಭದ ವಸ್ತುಗಳು. ಪ್ರಾಚ್ಯವಸ್ತು ಇಲಾಖೆ ಅಡಿ ಬರುವ ಈ ಮ್ಯೂಸಿಯಂ ಕಡಪಾಗೆ ದೊಡ್ಡ ಹೆಸರು ತಂದುಕೊಟ್ಟಿರುವುದು ಸುಳ್ಳಲ್ಲ.
ಗಣೇಶನ ಮೂರ್ತಿಯೂ ಸೇರಿದಂತೆ ಹಲವು ಅಪರೂಪದ ಕಲಾಕೃತಿಗಳು ಇಲ್ಲಿವೆ. ಈ ಮೂರ್ತಿಯ ಬೆನ್ನು ಬಾಗಿಸಿಕೊಂಡಿದ್ದು, ನೋಡಲು ಆನೆಯಂತೆ ಕಾಣಿಸುತ್ತದೆ. ಇನ್ನು ಹನುಮಾನ್ ವಿಗ್ರಹವೊಂದಿಲ್ಲಿದ್ದು ಅದರಲ್ಲಿ ಹನುಮಂತ ತನ್ನ ಕೂದಲನ್ನು ಹಿಂದೆ ಕಟ್ಟಿಕೊಂಡು ನಿಂತಿದ್ದಾನೆ. ಗಂಗಾ ನದಿಯನ್ನು ತನ್ನ ಜಡೆಯಿಂದ ಹರಿಸುತ್ತಿರುವ ರೂಪದಲ್ಲಿರುವ ಶಿವನ ವಿಗ್ರಹವೂ ಕೂಡ ಗಮನ ಸೆಳೆಯುತ್ತದೆ.