ಭಾರತದಲ್ಲಿ ಇಂತಹ ನೀರಿನ ರಾಷ್ಟ್ರೀಯ ಉದ್ಯಾನ ಮತ್ತೊಂದಿಲ್ಲ. ಇದೊಂದು ಇಲ್ಲಿ ಬಂದಾಗ ತಪ್ಪದೇ ಭೇಟಿ ನೀಡಬೇಕಾದ ಸ್ಥಳವಾಗಿದೆ. ಇದು ಜಾಮ್ ನಗರ ಜಿಲ್ಲೆಯ ಕಛ್ ಖಾರಿಯ ದಕ್ಷಿಣ ಕಿನಾರೆಯಲ್ಲಿದೆ. ಈ ನೀರಿನ ರಾಷ್ಟ್ರೀಯ ಉದ್ಯಾನ ಭಾರತದ ಮೊತ್ತ ಮೊದಲ ನೀರಿನ ಉದ್ಯಾನವಾಗಿದೆ. 1982 ರಲ್ಲಿ ನಿರ್ಮಾಣವಾದ ಈ ಉದ್ಯಾನವನ್ನು ಗುಜರಾತಿನ ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಈ ಉದ್ಯಾನ ಸುಮಾರು 42 ದ್ವೀಪಗಳನ್ನು ಒಳಗೊಂಡಿದ್ದು ಇವುಗಳನ್ನು ಹೆಚ್ಚಿನವು ಬಂಡೆಕಲ್ಲುಗಳಿಂದ ಆವೃತವಾಗಿದೆ.
ಇದು ಸುಂದರವಾದ ಉದ್ಯಾನವಾಗಿದ್ದರೂ ಬಹಳವೇ ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಇಲ್ಲಿ ನೀರಿನಲ್ಲಿ ಬೆಳೆದ ಗಿಡಗಳನ್ನು ಮತ್ತು ಜಲಜೀವಿಗಳನ್ನು ನಾವು ಹತ್ತಿರದಿಂದ ಕಾಣಬಹುದಾಗಿದೆ. ಆದರೆ ಈ ವಿಶೇಷ ಉದ್ಯಾನ ಇಂದು ಒಂದು ಭೀತಿಯನ್ನು ಎದುರಿಸುತ್ತಿದೆ. ಇಲ್ಲಿರುವ ತೈಲ ಶುದ್ಧೀಕರಣ ಘಖಕಗಳು, ಸಿಮೆಂಟ್ ಉದ್ಯಮ ನಡೆಸುವ ಮರಳು ಮತ್ತು ಹವಳದ ದಂಡೆಗಳ ಗಣಿಗಾರಿಕೆ, ಯಂತ್ರಗಳನ್ನು ಬಳಸಿ ಮೀನುಗಾರಿಕೆ ನಡೆಸುವುದು ಹಾಗೂ ನೀರಿನಲ್ಲಿ ಹೆಚ್ಚಿದ ಪ್ರಕ್ಷುಬ್ಧತೆಯೇ ಇದಕ್ಕೆ ಕಾರಣ.