ಇದು ಅರುಣಾಚಲಪ್ರದೇಶದಲ್ಲಿರುವ 8 ರಕ್ಷಿತಾರಣ್ಯಗಳಲ್ಲಿ ಒಂದಾಗಿದೆ. ಪಪುಂಪರೆ ಜಿಲ್ಲೆಯಲ್ಲಿರುವ ಈ ಅಭಯಾರಣ್ಯವು 140.30 ಚ. ಕಿ. ಮೀ. ನಷ್ಟು ವಿಸ್ತಾರವಾಗಿದೆ. ವೈವಿಧ್ಯಮಯವಾದ ಹವಾಮಾನ ಮತ್ತು ಭೌತಿಕ ಪರಿಸ್ಥಿತಿಯು ಇಲ್ಲಿನ ವಿಸ್ತಾರ ಶ್ರೇಣಿಯ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ದಾರಿಯನ್ನು ಸುಗಮವಾಗಿಸಿದೆ. ಪ್ರಕೃತಿಯ ಮಡಿಲಲ್ಲಿ, ಅಸಂಖ್ಯಾತ ಸಸ್ಯ, ಪ್ರಾಣಿ, ಮತ್ತು ಜೀವ ಜಂತುಗಳು ಈ ಅಭಯಾರಣ್ಯದ ಅಂದಕ್ಕೆ ತಮ್ಮ ಕಾಣಿಕೆಯನ್ನು ನೀಡಿವೆ. ಅಭಯಾರಣ್ಯದ ಗಡಿಭಾಗದಲ್ಲಿ ವಾಸವಿರುವ ಮಾನವ ಸಮುದಾಯವು ಇಲ್ಲಿನ ಜೀವಜಂತುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.
ಇಟಾನಗರದ ಜೀವಸಂಕುಲದ ಅಭಯಾರಣ್ಯವು ಹಿಂದೆ ಇಟಾನಗರದ ರಕ್ಷಿತಾರಣ್ಯ ಎಂದು ಕರೆಯಲ್ಪಡುತ್ತಿದ್ದು, ದಕ್ಷಿಣದಲ್ಲಿ ಪಚಿನ್ ನದಿ, ಈಶಾನ್ಯದಲ್ಲಿ ನಿಯೋರೊಚಿ, ಪೂರ್ವದಲ್ಲಿ ಪಾಮ್ ನದಿ, ಮತ್ತು ಉತ್ತರದಲ್ಲಿ ಚಿಂಗ್ ಕೆ ಪ್ರವಾಹವನ್ನು ಹೊಂದಿದೆ. ವನ್ಯಜೀವಿಗಳಿಂದ ಸಮೃದ್ಧವಾಗಿರುವ ಈ ಅಭಯಾರಣ್ಯವು ಸಾಂಬಾರ್, ಆನೆಗಳು, ಬೊಗಳುವ ಜಿಂಕೆ, ಕರಡಿ, ಹುಲಿ, ಮತ್ತು ಚಿರತೆಗಳನ್ನು ಹೊಂದಿದೆ. ನಾನಾ ವಿಧದ ಪಕ್ಷಿಗಳು, ಆರ್ಕಿಡ್ ಪ್ರಭೇದಗಳೂ ಸಹ ಇಲ್ಲಿವೆ. ದುರದೃಷ್ಟವಶಾತ್, ಅಭಿವೃದ್ಧಿಯ ಹೆಸರಿನಲ್ಲಿ ಈ ಅರಣ್ಯವು ಅತಿಕ್ರಮಣಕ್ಕೆ ಒಳಗಾಗುತ್ತಲೇ ಇದೆ.
ಇದರ ಪರಿಣಾಮವಾಗಿ, ಇಲ್ಲಿನ ಸಮೃದ್ಧ ವನ ಸಂಪತ್ತು ಗಣನೀಯವಾಗಿ ಕುಸಿದಿದೆ. ಹಾರ್ನ್ಬಿಲ್, ಅರುಣಾಚಲಪ್ರದೇಶದ ರಾಜ್ಯಪಕ್ಷಿಯ ಸಂಖ್ಯೆಯು ಇದರ ದುಷ್ಪರಿಣಾಮವನ್ನು ಅನುಭವಿಸಿದೆ. ಈ ಹಿಂದೆ, ಇವು ಅಭಯಾರಣ್ಯದ ಉದ್ದಗಲಕ್ಕೂ ಸಮಪ್ರಮಾಣದಲ್ಲಿ ನೆಲೆಸಿದ್ದವು. ಆದರೆ ಈಗ ಇವು ಅಭಯಾರಣ್ಯದ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಮಾತ್ರವೇ ಕಾಣಸಿಗುತ್ತವೆ.
ಸಸ್ಯಸಮೃದ್ಧಿಯು ಇಟಾನಗರದ ಅಭಯಾರಣ್ಯದ ಮತ್ತೊಂದು ವಿಶೇಷ. ಮುಖ್ಯವಾಗಿ, ಅರೆ ಉಷ್ಣವಲಯ ಪ್ರಕಾರದ ನಿತ್ಯಹರಿದ್ವರ್ಣ ಸಸ್ಯಗಳಿವೆ. ಅರಣ್ಯದಲ್ಲಿ ವಿವಿಧ ಪ್ರಭೇಧದ ಸಸ್ಯಜಾತಿಗಳಿವೆ. ಕಣಿವೆಗಳು ಮತ್ತು ಪರ್ವತದ ತಪ್ಪಲುಗಳು ಮಾತ್ರವಲ್ಲದೇ, ಸಂಪೂರ್ಣ ಪ್ರದೇಶವೇ ಪರ್ವತಮಯವಾಗಿದ್ದು, ಇದು ಇಲ್ಲಿ ಶುದ್ಧ ರೂಪದ ಬಿದಿರ ಮೆಳೆಗಳಿಗೆ ಎಡೆಮಾಡಿಕೊಟ್ಟಿದೆ.