ಎನ್ ಟಿ ಆರ್ ಉದ್ಯಾನವನವು ಹೈದರಬಾದಿನಲ್ಲಿರುವ ಒಂದು ಸಣ್ಣ ಉದ್ಯಾನವನವಾಗಿದ್ದು, ತನ್ನ ಭೌಗೋಳಿಕ ಸ್ಥಾನ ಮತ್ತು ಸೌಂದರ್ಯದಿಂದಾಗಿ ಅತ್ಯಂತ ಜನಪ್ರಿಯ ತಾಣವಾಗಿದೆ. ಎನ್ ಟಿ ಆರ್ ಉದ್ಯಾನವನವನ್ನು ಹುಸೇನ್ ಸಾಗರ್ ಪಕ್ಕದಲ್ಲಿಯೆ ನಿರ್ಮಾಣ ಮಾಡಿರುವುದರಿಂದಾಗಿ ಇಲ್ಲಿಗೆ ಭೇಟಿಕೊಡುವವರ ಸಂಖ್ಯೆ ಹೆಚ್ಚಾಗಿದೆ. ಸಂಜೆಯ ವೇಳೆಯಲ್ಲಿ ತಮ್ಮ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯುವ ಜನರಿಂದಾಗಿ ಇಲ್ಲಿ ಗೌಜು,ಗದ್ದಲ ಮತ್ತು ಸಂತಸದ ಕೇಕೆಗಳು ಮುಗಿಲು ಮುಟ್ಟಿರುತ್ತವೆ. ಅದನ್ನು ಇಲ್ಲಿ ಬಂದು ನೋಡಿದರೆ ಮಾತ್ರ ತಿಳಿಯಬಹುದು.
ಖ್ಯಾತ ನಟ ಮತ್ತು ರಾಜಕೀಯ ಧುರೀಣರಾದ ಎನ್ ಟಿ ಆರ್ ರವರ ಸ್ಮರಣಾರ್ಥವಾಗಿ ಈ ಉದ್ಯಾನವನವನ್ನು 1999 ರಲ್ಲಿ ನಿರ್ಮಾಣ ಮಾಡಲು ಪ್ರಾರಂಭಿಸಲಾಯಿತು. ಇವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಹಲವಾರು ಸುಧಾರಣೆಗಳನ್ನು ತಂದಿದ್ದರು. ಈ ರಾಜ್ಯ ಇಂದು ಇರುವ ಉತ್ತಮ ಸ್ಥಿತಿಗೆ ಇವರ ಕೊಡುಗೆಯನ್ನು ಯಾರು ತಳ್ಳಿಹಾಕುವಂತಿಲ್ಲ. ಈ ಉದ್ಯಾನವನದ ಕಾಮಗಾರಿಗಳನ್ನು ಹಲವು ಹಂತಗಳಲ್ಲಿ ಕೈಗೊಳ್ಳಲಾಯಿತು. ಇದಕ್ಕೆ ಕಾರಣ ಇದಕ್ಕೆ ಅಂಟಿಕೊಂಡ ವಿವಾದಗಳು. ಕಡೆಗು ವಿವಾದಗಳೆಲ್ಲ ಬಗೆಹರಿದು 2001ರಲ್ಲಿ ಇದನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು.