ಹುಸೇನ್ ಸಾಗರ್ ಕೆರೆಯು ಹೈದರಬಾದಿನಲ್ಲಿ ಭೌಗೋಳಿಕವಾಗಿ ಮತ್ತು ಪ್ರಮುಖ ಸ್ಥಳವಾಗಿ, ಎರಡುಬಗೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಕೃತಕ ಸರೋವರವನ್ನು ಹಝರತ್ ಹುಸೇನ್ ಷಾಹ್ ವಾಲಿಯು 1562ರಲ್ಲಿ ನಿರ್ಮಾಣ ಮಾಡಿದನು. ಈ ಕೆರೆಯನ್ನು ಮೂಸಿ ನದಿಗೆ ಪೂರಕ ಕೆರೆಯನ್ನಾಗಿ ನಿರ್ಮಿಸಲಾಗಿದೆ. ಹೈದರಬಾದಿಗೆ ನೀರು ಒದಗಿಸಲು ಮತ್ತು ನೀರಾವರಿ ಉದ್ದೇಶಗಳ ಈ ಕೆರೆಯನ್ನು ನಿರ್ಮಿಸಲಾಯಿತು. ಈ ಕೆರೆಯು ನಿರಂತರವಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದು ಅವಳಿ ನಗರಗಳಾದ ಹೈದರಬಾದ್ ಮತ್ತು ಸಿಕಂದರಬಾದ್ಗಳ ನಡುವೆ ಕೊಂಡಿಯಂತೆ ಉಳಿದಿದೆ.
ಈ ಕೆರೆಯ ಸುತ್ತಲು ಪ್ರಸಿದ್ಧ ನೆಕ್ಲೆಸ್ ರೋಡ್ ಇದೆ. ರಾತ್ರಿ ದೀಪಗಳ ಬೆಳಕಿನಲ್ಲಿ ಈ ರಸ್ತೆಯು ನೋಡಲು ನೆಕ್ಲೇಸಿನಂತೆಯೆ ಕಾಣುತ್ತದೆ. ರಾತ್ರಿ ಹೊತ್ತು ನೆಕ್ಲೆಸ್ ರಸ್ತೆ ಮತ್ತು ಹುಸೇನ್ ಸಾಗರ್ ಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. 1992ರಲ್ಲಿ ಈ ಕೆರೆಯಲ್ಲಿ ಮನಮೋಹಕವಾದ ಬುದ್ಧನ ಬೃಹತ್ ವಿಗ್ರಹವನ್ನು ( ಏಕಶಿಲೆಯಿಂದ ನಿರ್ಮಾಣ ಮಾಡಿದಂತಹದು) ಸ್ಥಾಪಿಸಲಾಯಿತು. ಈ ವಿಗ್ರಹದ ಬಳಿಗೆ ದೋಣಿಯಲ್ಲಿ ತಲುಪಬಹುದು. ನೀವೇನಾದರು ಹೈದರಬಾದಿನಲ್ಲಿ ಉಳಿದುಕೊಂಡರೆ ಖಂಡಿತವಾಗಿಯು ನೀವು ಹುಸೇನ್ ಸಾಗರ್ ಮತ್ತು ಅದರ ಸುತ್ತ- ಮುತ್ತಲಿನ ಪ್ರವಾಸಿ ಆಕರ್ಷಣೆಗಳನ್ನು ನೋಡಲು ಮರೆಯಲಾರಿರಿ.