ಚಾರ್ ಮಿನಾರ್ ಅನ್ನು ಮಹಮ್ಮದ್ ಖುಲಿ ಖುತುಬು ಷಾಹಿಯು 1591ರಲ್ಲಿ ನಿರ್ಮಿಸಿದನು. ಇಂದು ಇದು ಹೈದರಬಾದಿನ ಪ್ರಮುಖ ಹೆಗ್ಗುರುತಾಗಿ ಗುರುತಿಸಲ್ಪಡುತ್ತಿದೆ. ಈ ಐತಿಹಾಸಿಕ ರಚನೆಯು ಹೈದರಬಾದ್ನೊಂದಿಗೆ ದೊಡ್ಡ ಮಟ್ಟದ ಭಾಂದವ್ಯವನ್ನು ಹೊಂದಿದ್ದು, ವಿಶ್ವ ಮಟ್ಟದಲ್ಲಿ ಅತಿ ಹೆಚ್ಚಿನ ಮನ್ನಣೆಯನ್ನು ತಂದುಕೊಡುತ್ತಿದೆ. ಚಾರ್ ಮಿನಾರ್ ಎಂಬುದು "ಚಾರ್" ಮತ್ತು "ಮಿನಾರ್" ಎಂಬ ಎರಡು ಉರ್ದು ಪದಗಳಿಂದ ಉತ್ಪತ್ತಿಯಾದ ಪದವಾಗಿದೆ. ಇದರರ್ಥ ನಾಲ್ಕು ಗೋಪುರಗಳು. ಈ ಕಟ್ಟಡ ವಿನ್ಯಾಸ ಮತ್ತು ರಚನೆಯು ಗತಕಾಲದ ವಾಸ್ತುಶಿಲ್ಪಕಲೆಯನ್ನು ಪ್ರತಿನಿಧಿಸುತ್ತದೆ. ಈ ಕಟ್ಟಡವು ವಿಲಕ್ಷಣವಾದ ಮತ್ತು ಕಣ್ಣುಕೋರೈಸುವ ಮಿನಾರುಗಳನ್ನು ಮತ್ತು ನಾಲ್ಕು ಮೂಲೆಯಲ್ಲಿ ಭವ್ಯವಾಗಿ ತೋರುವ ಕಮಾನುಗಳಿಂದ ಕೂಡಿದೆ. ಈ ಕಮಾನುಗಳು ಮಿನಾರುಗಳಿಗೆ ಆಧಾರವನ್ನು ಒದಗಿಸಿವೆ. ಖುಲಿ ಖುತುಬ್ ಷಾಹಿಯು ಗೊಲ್ಕೊಂಡಾದಿಂದ ಹೈದರಬಾದಿಗೆ ರಾಜಧಾನಿಯನ್ನು ಸ್ಥಳಾಂತರಗೊಳಿಸಿದ ನಂತರ ಚಾರ್ ಮಿನಾರನ್ನು ಕಟ್ಟಲಾಯಿತು.
ಈ ಸ್ಮಾರಕವನ್ನು ನಗರದಿಂದ ಪ್ಲೇಗನ್ನು ನಿರ್ಮೂಲನೆಗೊಳಿಸಿದ್ದಕ್ಕಾಗಿ ದೈವಶಕ್ತಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ನಿರ್ಮಿಸಲಾಯಿತು. ಚಾರ್ ಮಿನಾರ್ ಕೇವಲ ತನ್ನ ಭವ್ಯತೆಯಿಂದಷ್ಟೇ ಅಲ್ಲದೆ ತನ್ನ ಗತಕಾಲದ ವರ್ಚಸ್ಸಿನಿಂದಾಗಿಯು ಸಹ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಐತಿಹಾಸಿಕ ವರ್ಚಸ್ಸನ್ನು ನಗರದ ಈ ಭಾಗದಲ್ಲಿ ನಾವು ಇಂದಿಗು ಕಾಣಬಹುದು.