ಜಾಗೃತ ಸ್ಥಳ ಶ್ರೀಕ್ಷೇತ್ರ ಹೊರನಾಡು ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯವು, ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನ ಭದ್ರಾ ನದಿಯ ದಂಡೆಯ ಸುಂದರ ಪರಿಸರದಲ್ಲಿದೆ. ಸುತ್ತಮುತ್ತಲೂ ದಟ್ಟ ಕಾಡುಗಳಿಂದ ಮತ್ತು ಹಚ್ಚ ಹಸರಿನಿಂದ ಸುತ್ತುವರೆದಿದೆ. ಇಲ್ಲಿದ್ದ ಹಳೆಯ ದೇವಾಲಯವನ್ನು ಮರುನಿರ್ಮಿಸಿ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಎಂದು ಮರುನಾಮಕರಣ ಮಾಡಲಾಗಿದೆ.
ಈ ದೇವಾಲಯದಲ್ಲಿ ದೇವತೆಯಾದ ದೇವಿ ಅನ್ನಪೂರ್ಣೇಶ್ವರಿಯು ಶ್ರೀಚಕ್ರ, ಚಕ್ರ, ಶಂಖ ಮತ್ತು ದೇವಿ ಗಾಯತ್ರಿಯನ್ನು ತನ್ನ ನಾಲ್ಕು ಹಸ್ತಗಳಲ್ಲಿ ಹಿಡಿದಿರುವ ಸುಂದರ ಬಂಗಾರದ ಮೂರ್ತಿಯನ್ನು ಕಾಣಬಹುದು.ಹಲವು ಶತಮಾನಗಳ ಹಿಂದೆ ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ಮೂರ್ತಿಯನ್ನು ಅಗಸ್ತ್ಯ ಮಹರ್ಷಿಗಳು ಈ ದೇವಾಲಯದಲ್ಲಿ ಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಈ ದೇವಾಲಯದ ಹೆಸರು ಅನ್ನಪೂರ್ಣೇಶ್ವರಿ, ಅಂದರೆ ಎಲ್ಲರ ಹಸಿವನ್ನು ನೀಗಿಸುವವಳು ಎಂದರ್ಥ ಅದೇ ಕಾರಣದಿಂದ ಇಲ್ಲಿಗೆ ಬರುವ ಭಕ್ತರಿಗೆ ದಿನಕ್ಕೆ ಮೂರು ಭಾರಿ ಭೋಜನ ಮತ್ತು ಉಳಿಯಲು ಜಾಗವನ್ನೂ ನೀಡಲಾಗುತ್ತದೆ.