ಭಾರತದಲ್ಲಿರುವ ಹಲವಾರು ಪ್ರವಾಸಿ ತಾಣಗಳಲ್ಲಿ ಮಧ್ಯ ಕರ್ನಾಟಕ ಜಿಲ್ಲೆಗಳೂ ಪ್ರಮುಖವಾದವುಗಳು. ಇಲ್ಲಿನ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳು ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಹಸಿಗರಿಗೆ, ಐತಿಹಾಸಿಕ ಪ್ರಿಯರಿಗೆ ಇಲ್ಲಿನ ಎಲ್ಲಾ ಸ್ಥಳಗಳೂ ಕುತೂಹಲ ಹುಟ್ಟಿಸುವಂತಹವು.ಅಲ್ಲದೇ ಚಾರಣವನ್ನು ನೆಚ್ಚಿಕೊಂಡವರಿಗೆ ಖುಷಿಯನ್ನು ನೀಡುವಂತಹ ಸ್ಥಳಕ್ಕೆ ಶಿವಮೊಗ್ಗ ಜಿಲ್ಲೆಯ ಹೊನ್ನೇಮರಡು ಉತ್ತಮ ಉದಾಹರಣೆಯಾಗಿದೆ. ಈ ಸ್ಥಳಕ್ಕೆ ನಿಮ್ಮ ಪ್ರವಾಸ ಕೈಗೊಂಡರೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೀವೇ ಮನಸಾರೆ ಮೆಚ್ಚಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಈ ಸ್ಥಳದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಯಾರು ಸಾಹಸವನ್ನು ಇಷ್ಟ ಪಡುತ್ತಾರೋ, ಜಲ ಕ್ರೀಡೆಗಳನ್ನು ಇಷ್ಟ ಪಡುತ್ತಾರೋ ಅಂತಹವರಿಗೆ ಹೊನ್ನೇಮರಡು ಅತ್ಯಂತ ಪ್ರಿಯ ಎನಿಸುವುದರಲ್ಲಿ ಸಂಶಯವಿಲ್ಲ. ಹೊನ್ನೇಮರಡು ಹಳ್ಳಿಯು, ಹೊನ್ನೇಮರಡು ಜಲಾಶಯದ ಹತ್ತಿರ ಬೆಟ್ಟದ ಇಳಿಜಾರಿನಲ್ಲಿದೆ. ಈ ಗ್ರಾಮವು ಶಿವಮೂಗ್ಗ ಜಿಲ್ಲೆಯಲ್ಲಿಯಲ್ಲಿದ್ದು, ಬೆಂಗಳೂರಿನಿಂದ 392 ಕೀ. ಮಿ ದೂರದಲ್ಲಿದೆ.
ಸ್ಥಳದ ಬಗ್ಗೆ ಒಂದಿಷ್ಟು ವಿಷಯಗಳು /ತುಣುಕುಗಳು
ಹೊನ್ನೇಮರಡು ಈ ಹೆಸರನ್ನು 'ಹೊನ್ನೆ' ಮರದಿಂದ ಪಡೆದಿದೆ. ಆದರೆ ಇದರ ಅಕ್ಷರಶಃ ಅರ್ಥ ಗೋಲ್ಡನ್ ಸರೋವರ ಎಂಬುದು. ಹೊನ್ನೇಮರಡು ಗ್ರಾಮವು ಶರಾವತಿಯ ಹಿನ್ನೀರಿನ ಪ್ರದೇಶವಾಗಿದೆ ಎಂಬ ಉಲ್ಲೇಖವಿದೆ.
ಹೊನ್ನೇಮರಡುವಿನ ಪ್ರಮುಖ ಆಕರ್ಷಣೆಯೆಂದರೆ, ಇದೊಂದು ದ್ವೀಪದಂತಿದ್ದು ಜಲಾಶಯದ ಮಧ್ಯ ಭಾಗದಲ್ಲಿದೆ. ಪ್ರವಾಸಿಗರಿಗೆ ರಾತ್ರಿಯ ಕ್ಯಾಂಪ್ ಗಳು ಕೂಡಾ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿಹಿ ನೀರಿನ ಈಜುಕೊಳ ಹಾಗೂ ದೊಡ್ಡ ಅರಣ್ಯ ಪ್ರದೇಶವಿದ್ದು ಇಲ್ಲಿ ಕ್ಯಾಂಪ್ ನಲ್ಲಿ ಪಾಲ್ಗೋಂಡವರಿಗಾಗಿ ರಾಫ್ಟಿಂಗ್ (ನೀರಿನಲ್ಲಿ ತೆಪ್ಪದ ಪ್ರಯಾಣ), ಈಜುವುದು ಹಾಗೂ ಚಾರಣ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಕಾರಣಕ್ಕಾಗಿ ಚಾರಣವನ್ನು ಇಷ್ಟ ಪಡುವ ಎಲ್ಲರೂ ವರ್ಷಕ್ಕೊಮ್ಮೆಯಾದರೂ ಈ ಸ್ಥಳಕ್ಕೆ ಬಂದು ಹೋಗುತ್ತಾರೆ. ಇಲ್ಲಿನ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಕಾಡಿನ ಕಾಲುದಾರಿಯಲ್ಲಿ ನಡೆಯುತ್ತಾ ಹೋದರೆ ಹಲವಾರು ಬೇರೆ ಬೇರೆ ಪ್ರಬೇಧಗಳ ಪಕ್ಷಿಗಳನ್ನು ನೋಡಬಹುದು. ಅಲ್ಲದೇ ಮನಸ್ಸಿಗೆ ಸಂತೋಷ ಆಗುವಂತಹ ವಾತಾವರಣವಿರುವುದರಿಂದ ಬೆಳಗಿನ ಜಾವ ಇಲ್ಲಿಗೆ ಬರುವುದು ಸೂಕ್ತ.
ಇಲ್ಲಿಯೇ ಹತ್ತಿರದಲ್ಲಿರುವ ವಿಶ್ಯ ವಿಖ್ಯಾತಿಯಾದ ಜೋಗ್ ಫಾಲ್ಸ್ ಗೆ ಭೇಟಿ ನೀಡದೇ ಇದ್ದರೆ ಹೊನ್ನೇಮರಡು ಪ್ರಯಾಣವು ಅಪೂರ್ಣವಾಗಬಹುದು! ಶರಾವತಿ ನದಿಯ ಮೂಲದಿಂದ ಹುಟ್ಟುವ ಈ ಜಲಪಾತವು ಶಿವಮೊಗ್ಗ ಜಿಲ್ಲೆಯಲ್ಲಿಯೇ ಇದೆ. ಇದು 829 ಅಡಿಯ ಎತ್ತರದ ಜಲಪಾತವಾಗಿದೆ. ಅಲ್ಲದೇ ಜೋಗ್ ಫಾಲ್ಸ್ ನಿಂದ 30 ಕಿ.ಮೀ ದೂರದಲ್ಲಿರುವ ದಬ್ಬೆ ಫಾಲ್ಸ್ ಕೂಡಾ ನೋಡಲೇ ಬೇಕಾದ ಜಲಪಾತವಾಗಿದೆ.
ಹೊನ್ನೇಮರಡುಗೆ ಅತ್ಯಂತ ಹತ್ತಿರದಲ್ಲಿರುವ ರೈಲ್ವೆ ನಿಲ್ದಾಣವೆಂದರೆ ಶಿವಮೊಗ್ಗ ರೈಲ್ವೆ ನಿಲ್ದಾಣ. ಅಲ್ಲದೇ ಬೆಂಗಳೂರಿನಿಂದ ಸ್ವಂತ ವಾಹನಗಳ ಮೂಲಕವೂ ಬರಬಹುದು. ಜೊತೆಗೆ ಸ್ಥಳೀಯ ವಾಹನಗಳಾದ ಬಸ್ ಅಥವಾ ಕ್ಯಾಬ್ ಸೌಲಭ್ಯಗಳೂ ದೊರೆಯುತ್ತವೆ. ಇದು ಪ್ರಯಾಣಿಕರಿಗೆ ಹೆಚ್ಚಿನ ಸಂತೋಷವನ್ನು ಕೊಡುತ್ತದೆ.