ಉತ್ತರಾಖಂಡ ರಾಜ್ಯದಲ್ಲಿರುವ ಒಂದು ಪುಟ್ಟ ಹಳ್ಳಿ ಹರಸಿಲ್. ಇದು ಸಮುದ್ರ ಮಟ್ಟದಿಂದ ಸುಮಾರು 2620 ಮೀ ಎತ್ತರದಲ್ಲಿದೆ. ಇದು ಭಾಗೀರಥಿ ನದಿಯ ದಂಡೆಯಲ್ಲಿದ್ದು ಉತ್ತರಕಾಶಿಯಿಂದ ಸುಮಾರು 72 ಕಿ.ಮೀ ದೂರದಲ್ಲಿದೆ.
ಒಂದು ನಂಬಿಕೆಯ ಪ್ರಕಾರ, ಒಮ್ಮೆ ಸತ್ಯಯುಗದಲ್ಲಿ ನದಿಗಳಾದ ಭಾಗೀರಥಿ ಮತ್ತು ಜಲಂಧರಿಯು ತಮ್ಮಲ್ಲಿ ಯಾರು ಶ್ರೇಷ್ಠರು ಎಂದು ಜಗಳವಾಡತೊಡಗಿದರು. ಇದನ್ನು ನೋಡಿದ ಹರಿಯು(ವಿಷ್ಣು ದೇವರು) ಒಂದು ಶಿಲೆಯಾಗಿ ಮಾರ್ಪಾಡಾಗಿ ಅವರ ನಡುವಿನ ಕ್ರೋಧವನ್ನು ಹೀರಿಕೊಂಡ. ಇದಕ್ಕಾಗಿ ಈ ಹಳ್ಳಿಗೆ ಹರಸಿಲ್ ಅಂದರೆ ‘ಹರಿಶಿಲೆ’ ಎಂಬ ಹೆಸರು ಬಂದಿತು ಹಾಗೂ ಅಂದಿನಿಂದ ಈ ಎರಡೂ ನದಿಗಳು ಕಡಿಮೆ ರಭಸವಾಗಿ ಹರಿಯುತ್ತಿವೆ ಎಂದು ನಂಬಲಾಗಿದೆ.
ಚಾರ್ ಧಾಮಗಳ ಒಂದು ಕೇಂದ್ರವಾದ ಗಂಗೋತ್ರಿಗೆ ಈ ಹಳ್ಳಿ ಸಮೀಪದಲ್ಲಿದೆ. ಇದು ಹಲವಾರು ಪ್ರವಾಸಿ ಆಕರ್ಷಣೆಗಳ ಕೇಂದ್ರವಾಗಿದೆ. ಗಂಗೋತ್ರಿ ರಾಷ್ಟ್ರೀಯ ಉದ್ಯಾನ ಅವುಗಳಲ್ಲಿ ಒಂದು. ಇದು ಸುಮಾರು 30 ಕಿ.ಮೀ ದೂರದಲ್ಲಿದೆ. ಇದಲ್ಲದೆ ಇಲ್ಲಿರುವ ಮುಖ್ಬಾ ಹಳ್ಳಿಕೂಡ ಪ್ರಮುಖ ಆಕರ್ಷಣೆ. ಸೈನಿಕ ಕೃಷಿ ಸಂಶೋಧನಾ ಪ್ರಯೋಗಾಲಯ (ಡಿ.ಎ.ಆರ್.ಎಲ್) ಮೇ 1973 ರಲ್ಲಿ ಇಲ್ಲಿ ಸ್ಥಾಪನೆಯಾಯಿತು.
ಹರಸಿಲ್ ಒಂದು ಸಣ್ಣ ಹಳ್ಳಿ ಆದ ಕಾರಣ ತನ್ನದೇ ಆದ ಒಂದು ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಮತ್ತು ರಿಷಿಕೇಶ ಸಮೀಪವಿರುವ ರೈಲ್ವೆ ನಿಲ್ದಾಣವಾಗಿದೆ. ಪ್ರವಾಸಿಗರು ಸಾಮಾನ್ಯವಾಗಿ ಏಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ತನಕ ಇಲ್ಲಿಗೆ ಭೇಟಿ ನೀಡುತ್ತಾರೆ.