ಮನಮಂದಿರ ಅರಮನೆಯು ಮಹಾನ್ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಮತಿಹೀನ ಅಧಿಕಾರ ಮದದ ಅನೇಕ ಹೃದಯ ಕಲುಕುವ ಕಥನಗಳನ್ನು ಇದು ಹೇಳುತ್ತದೆ ಎಂದು ಹೇಳಬಹುದು. ಮಧ್ಯಕಾಲೀನ ಯುಗದ ವಾಸ್ತುಶಿಲ್ಪದೊಂದಿಗೆ ಹಿಂದು ವಾಸ್ತುಶಿಲ್ಪ ಶೈಲಿಯು ಸಮ್ಮಿಳಿತಗೊಂಡ ಒಂದು ಅಪೂರ್ವ ಮತ್ತು ಅನನ್ಯ ಉದಾಹರಣೆ ಇದಾಗಿದೆ. ಇದು ನಾಲ್ಕು ಮಹಡಿಗಳ ಕಟ್ಟಡ ಆಗಿದ್ದು, ಎರಡು ಕಟ್ಟಡಗಳು ನೆಲದ ಅಡಿಯಲ್ಲಿ ಇವೆ, ಇದು ವೃತ್ತಾಕಾರದ ಆಕಾರವನ್ನು ಹೊಂದಿದೆ.
ಇದನ್ನು 15 ನೇ ಶತಮಾನದಲ್ಲಿ ತೋಮರ್ ವಂಶದ ರಾಜ ಮಾನ್ ಸಿಂಗ್ ತೋಮರ್ ನಿರ್ಮಿಸಿದರು. ನಂತರ ಇದು ರಜಪೂತರು, ದೆಹಲಿ ಸುಲ್ತಾನರು, ಮೊಘಲರು, ಮರಾಠರು, ಬ್ರಿಟಿಷರು ಮತ್ತು ಸಿಂಧ್ಯಾ ರಾಜರು ಹೀಗೆ ಅನೇಕ ರಾಜವಂಶಗಳ ಕೈ ವಶವಾಯಿತು. ಇದನ್ನು ಚಿತ್ರಿತ ಅರಮನೆ ಎಂದೇ ಕರೆಯಲಾಗುತ್ತದೆ. ಈ ಅರಮನೆಯ ಒಳಾಂಗಣ ವಿನ್ಯಾಸವನ್ನು ಹೂವುಗಳು, ಎಲೆಗಳು, ಪ್ರಾಣಿಗಳು, ಮನುಷ್ಯರ ಇತ್ಯಾದಿ ವರ್ಣರಂಜಿತ ವರ್ಣಚಿತ್ರಗಳಿಂದ ಮಾಡಲಾಗಿದೆ. ಈ ಅರಮನೆಯ ಒಳಗಡೆ ಒಂದು ವೃತ್ತಾಕಾರದ ಸೆರೆಮನೆ ಇದೆ. ಮೊಘಲ ದೊರೆಯಾದ ಔರಂಗಜೇಬನು ತನ್ನ ಸ್ವಂತ ಅಣ್ಣ ಮುರಾದನನ್ನು ಕೊಲೆ ಮಾಡಿಸಿದ್ದಕ್ಕೆ ಸಾಕ್ಷಿಯಾಗಿ ನಿಂತಿದೆ. ಇಲ್ಲಿ ಜೋಹರ್ ಎಂಬ ಕೊಳ ಇದ್ದು, ಇಲ್ಲಿ ರಜಪೂತ ವೀರರ ಪತ್ನಿಯರು ತಮ್ಮ ಪತಿಯ ಸಾವಿನ ನಂತರ ಈ ಕೊಳಕ್ಕೆ ಹಾರಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಿದ್ದರು. ಇದನ್ನು ಸತಿ ಎಂದು ಕರೆಯುತ್ತಾರೆ.