ನೀವು ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡದ ಹೊರತು,ಗುವಾಹಾಟಿಯ ನಿಮ್ಮ ಪ್ರವಾಸವು ಪರಿಪೂರ್ಣವೆನಿಸದು. ಹಿಂದೂ ಧರ್ಮದ ಪ್ರಕಾರ, ಇದು 51 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅತಿ ಪ್ರಮುಖವಾದ ಯಾತ್ರಾಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ನಗರದ ಹೃದಯ ಭಾಗದಿಂದ ಸುಮಾರು 7 ಕಿ. ಮೀ. ದೂರದಲ್ಲಿರುವ ನೀಲಾಚಲ ಬೆಟ್ಟಗಳ ತುದಿಯಲ್ಲಿದ್ದು, ಇಲ್ಲಿ "ಮಹಾವಿದ್ಯ" ಗಳಿಗೆ ಮೀಸಲಾಗಿರುವ 10 ಪ್ರತ್ಯೇಕ ದೇವಾಲಯಗಳಿವೆ. ತ್ರಿಪುರಸುಂದರಿ, ಮಾತಂಗಿ, ಮತ್ತು ಕಮಲಾ ಮೂರ್ತಿಗಳು ಮುಖ್ಯ ದೇವಸ್ಥಾನದ ಒಳಗಿದ್ದರೆ, ಇತರ 7 ರೂಪಗಳು, ಮುಖ್ಯ ದೇವಸ್ಥಾನದ ಸುತ್ತಲೂ ಇರುವ ಪ್ರತ್ಯೇಕ ದೇವಾಲಯಗಳಲ್ಲಿವೆ.
ಅಂಬುಬಾಚಿ ಮೇಳವು ಕಾಮಾಖ್ಯ ದೇವಸ್ಥಾನದಲ್ಲಿ ಜರುಗುವ ಧಾರ್ಮಿಕ ಹಬ್ಬಗಳಲ್ಲಿ ಒಂದಾಗಿದ್ದು, ಇದು ಜೂನ್ ತಿಂಗಳ ಮಧ್ಯ ಭಾಗದಲ್ಲಿ ನಡೆಯುತ್ತದೆ. ಈ ಹಬ್ಬವನ್ನು ದೇವಿ ಕಾಮಾಖ್ಯಳ ( ಕಾಳಿ ದೇವಿಯ ಮತ್ತೊಂದು ರೂಪ) ವಾರ್ಷಿಕ ಋತುಚಕ್ರದ ಸ್ಮರಣಾರ್ಥ ಆಚರಿಸಲಾಗುತ್ತದೆ. ತಂತ್ರಜ್ಞ ಸಂತರು ಈ ಸಮಯದಲ್ಲಿ ದೇಶದ ನಾನಾ ಮೂಲೆಗಳಿಂದ ಈ ದೇವಸ್ಥಾನವನ್ನು ಸಂದರ್ಶಿಸುತ್ತಾರೆ. ದುರ್ಗಾ ಪೂಜೆ ಮತ್ತು ಮನಶಾ ಪೂಜೆಗಳನ್ನೂ ಸಹ ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ.
ಪ್ರವಾಸಿಗರು ತಿಳಿದಿರಬೇಕಾದ ವಿಷಯವೇನೆಂದರೆ, ಹಿಂದೂಗಳಿಗೆ ಮಾತ್ರವೇ ಕಾಮಾಖ್ಯ ದೇವಸ್ಥಾನಕ್ಕೆ ಪ್ರವೇಶವು ಲಭ್ಯವಾಗಿದೆ.