ಮಾನಸಿ ಗಂಗಾ ಸರೋವರವನ್ನು ರಾಜಾ ಭಗವಾನ್ ದಾಸ್ ಮತ್ತು ರಾಜಾ ಮಾನ್ ಸಿಂಗ್ ರಿಂದ ನಿರ್ಮಾಣವಾಗಿದೆ. ಮಾನಸಿ ಗಂಗಾ ಗೋವರ್ಧನ ನಗರದ ಮಧ್ಯಭಾಗದ್ಲಲಿದೆ. ಮಾನಸಿ ಎಂದರೆ ಮನಸ್ಸು ಎಂದರ್ಥ. ಪುರಾಣದ ಪ್ರಕಾರ, ಒಮ್ಮೆ ತನ್ನ ಕೃಷ್ಣನ ಸಾಕು ತಾಯಿ ಮತ್ತು ತಂದೆಯಾದ ಯಶೋಧೆ ಮತ್ತು ನಂದರು ಗಂಗಾ ಸ್ನಾನ ಮಾಡಬೇಕೆಂದು ಬಯಸುತ್ತಾರೆ. ಆದರೆ ಅವರಿರುವ ಜಾಗವು ಗಂಗಾ ನದಿಯಿಂದ ದೂರವಿರುವುದರಿಂದ, ಬ್ರಿಜ್ ಗ್ರಾಮದ ನಿವಾಸಿಗಳು ಅವರು ವೃಂದಾವನವನ್ನು ಬಿಟ್ಟು ಹೋಗುವುದನ್ನು ಬಯಸುವುದಿಲ್ಲ.
ಆದರೆ ತಾಯಿ ಸ್ವರೂಪಿಯಾದ ಗಂಗೆಯು ಇವರಿರುವ ಜಾಗಕ್ಕೆ ಬಂದರೆ ಒಳ್ಳೆಯದು ಎಂದು ಆಶಿಸುತ್ತಾರೆ. ಇವರ ಪ್ರಾರ್ಥನೆಯನ್ನು ಕೇಳಿಸಿಕೊಂಡ ಕೃಷ್ಣ, ತನ್ನ ಇಚ್ಚಾಶಕ್ತಿಯ ಮೂಲಕ ಗಂಗೆಯನ್ನು ಇವರಿರುವ ಜಾಗಕ್ಕೆ ಕರೆ ತರುತ್ತಾನೆ. ಹಾಗಾಗಿ ಇದನ್ನು ಮಾನಸಿ ಗಂಗಾ ಎಂದು ಕರೆಯಲಾಗುತ್ತದೆ. ನಂದ, ಯಶೋಧ ಮತ್ತು ಬ್ರಿಜ್ ನಿವಾಸಿಗಳು ಗಂಗೆಯಲ್ಲಿ ಸ್ನಾನ ಮಾಡಲು ಹೋದಾಗ ಗಂಗೆಯು ಮೊಸಳೆಯನ್ನು ವಾಹನವನ್ನಾಗಿ ಮಾಡಿಕೊಂಡು ಸಾಗುತ್ತಿರುವುದನ್ನು ಗಮನಿಸುತ್ತಾರೆ.
ಪುರಾಣದ ಪ್ರಕಾರ, ಮಾನಸಿ ಗಂಗೆಯಲ್ಲಿ ಸ್ನಾನ ಮಾಡಿದರೆ ಕೋಟಿ ಕೋಟಿ ಪುಣ್ಯ ಬರಲಿದ್ದು ಶ್ರೀಕೃಷ್ಣನಿಗೆ ಹೆಚ್ಚಿನ ಒಲವು ತೋರುತ್ತದೆ ಎನ್ನುವುದು ನಂಬಿಕೆ. ಗೋವರ್ಧನ್ ಪಟ್ಟಣದಿಂದ ಆರಂಭಿಸಲಾದ ಪರಿಕ್ರಮವು ಮಾನಸಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ಅಂತ್ಯವಾಗುತ್ತದೆ.