ಹಿಂದೂಗಳಿಗೆ ಪವಿತ್ರವಾದ ಶ್ರೀ ಭಗವದ್ಗೀತೆಯನ್ನು ಮುದ್ರಿಸುವ ಗೀತಾ ಪ್ರೆಸ್ 1923 ರಲ್ಲಿ ಆರಂಭವಾಗಿತ್ತು. ಆಗ ಬಾಡಿಗೆಯ ಕೋಣೆಯೊಂದರಲ್ಲಿ ಕೇವಲ ಮೂರು ಮುದ್ರಣ ಯಂತ್ರಗಳ ಮೂಲಕ ಹಾಗೂ ದೇವರ ಸೇವೆಗೆ ಸಮಯವನ್ನು ಮುಡುಪಾಗಿಟ್ಟ ಕೆಲವು ಭಕ್ತರ ಮೂಲಕ ಭಗವದ್ಗೀತೆಯ ಪ್ರತಿಗಳನ್ನು ಮುದ್ರಿಸಿ ದೇಶದಾದ್ಯಂತ ವಿತರಿಸಲಾಗುತ್ತಿತ್ತು. ಅಂದಿನಿಂದ ಪ್ರತಿವರ್ಷ ಹೆಚ್ಚುತ್ತಾ ಹೋದ ಬೇಡಿಕೆಗೆ ಅನುಗುಣವಾಗಿ 1955 ರಲ್ಲಿ ಗೀತಾ ಪ್ರೆಸ್ ಗೆ ನೂತನ ಕಟ್ಟಡವನ್ನು ನಿರ್ಮಿಸಿ ರಾಷ್ಟ್ರದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ರವರಿಂದ ಉದ್ಘಾಟನೆ ಕಂಡಿತು. ವಿಶ್ವದಲ್ಲಿಯೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಗುಣಮಟ್ಟದ ಭಗವದ್ಗೀತೆಯ ಪ್ರತಿಗಳನ್ನು ಮುದ್ರಿಸುವ ಈ ಮುದ್ರಣಾಲಯ ನಗರ ರೈಲ್ವೇ ನಿಲ್ದಾಣದಿಂದ ನಾಲ್ಕು ಕಿ.ಮೀ ದೂರವಿದ್ದು ಪ್ರತಿದಿನ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.