ಪ್ರಪಂಚದಲ್ಲಿ ಅಪಾರ ಪಾಕೃತಿಕ ಸಂಪತ್ತಿಗೆ ಹೆಸರಾದ ದೇಶವೊಂದಿದ್ದರೆ ಅದು ಭಾರತ. ಭಾರತದ ಪ್ರತಿಯೊಂದು ಭಾಗದಲ್ಲೂ ಅಪಾರವಾದ ನೈಸರ್ಗಿಕ ಸಂಪತ್ತು, ತಾಣಗಳಿವೆ. ಈ ನೈಸರ್ಗಿಕ ಸೌಂದರ್ಯಕ್ಕೆ ಕಾರಣವಾಗಿರುವುದು ನಮ್ಮ ದೇಶದಲ್ಲಿರುವ ಗಿರಿ ಶಿಖರಗಳು, ಪರ್ವತ ಶ್ರೇಣಿಗಳು, ನದಿ ತೊರೆಗಳು, ಪ್ರಾಣಿ-ಪಕ್ಷಿ ಧಾಮಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ಈ ಪ್ರಾಕೃತಿಕ ಸಂಪತ್ತು ಹಂಚಿಹೋಗಿದೆ. ಹೀಗಾಗಿ ಪ್ರತಿಯೊಂದು ರಾಜ್ಯ ಕೂಡಾ ಒಂದಿಲ್ಲೊಂದು ಪಾಕೃತಿಕ ವೈಶಿಷ್ಟ್ಯತೆಯನ್ನು ಹೊಂದಿ ವಿಶ್ವವಿಖ್ಯಾತವಾಗಿದೆ. ಇಂತಹುದೇ ರಾಜ್ಯಕ್ಕೆ ಒಂದು ಉದಾಹರಣೆ ಗುಜರಾತ್. ಹೌದು, ಗುಜರಾತ್ನಲ್ಲಿ ಹಲವಾರು ನೈಸರ್ಗಿಕ, ಪ್ರಾಕೃತಿಕ, ಪ್ರವಾಸಿ ತಾಣಗಳಿವೆ. ಇಂತಹ ತಾಣಗಳ ಪೈಕಿ ಮುಂಚೂಣಿಯಲ್ಲಿರುವುದು ’ಗಿರ್ನಾರ್ ಗಿರಿಧಾಮ’.
ಗಿರ್ನಾರ್ ಗುಜರಾತ್ ರಾಜ್ಯದಲ್ಲಿರುವ ಪ್ರಮುಖ ಪ್ರವಾಸಿತಾಣ. ಇದನ್ನು ’ಗಿರಿ ನಗರ’ ಅನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಹೆಸರೇ ಸೂಚಿಸುವಂತೆ ಇದು ಗಿರಿಗಳ, ಬೆಟ್ಟಗಳ ಧಾಮ. ಸಾಲಾಗಿ ಕಂಡುಬರುವ ಪರ್ವತ ಶ್ರೇಣಿಗಳು ಈ ಹೆಸರು ಬರಲು ಕಾರಣವಾಗಿದೆ. ಇದು ಹಿಂದೂ ಮತ್ತು ಜೈನಧರ್ಮದ ಪ್ರಮುಖ ತೀರ್ಥಯಾತ್ರಾ ಸ್ಥಳವೂ ಹೌದು. ಈ ತಾಣವು ಉತ್ತಮ ಇತಿಹಾಸವನ್ನು ಹೊಂದಿದೆ. ವೇದಗಳಲ್ಲೂ ಈ ಧಾಮದ ಬಗ್ಗೆ ಉಲ್ಲೇಖಗಳಿವೆ. ಅಲ್ಲದೆ ಪ್ರಾಚೀನ ನಾಗರಿಕತೆಯಾದ ಸಿಂಧೂ ನಾಗರಿಕತೆಯ ಗ್ರಂಥಗಳಲ್ಲಿ ಗಿರ್ನಾರ್ ಪ್ರದೇಶವು ಪವಿತ್ರ ಸ್ಥಳವಾಗಿ ಗೌರವಿಸಲ್ಪಡುತ್ತಿತ್ತು ಎನ್ನುವ ಬಗ್ಗೆ ಸಾಕ್ಷ್ಯಗಳು ದೊರೆಯುತ್ತವೆ.
ದೇವಾಲಯಗಳು
ಗಿರ್ನಾರ್ನ ಪರ್ವತ ಶ್ರೇಣಿಗಳ ಪೈಕಿ ಐದು ಪ್ರಮುಖ ಶಿಖರಗಳಿವೆ. ಈ ಒಂದೊಂದು ಶಿಖರಗಳು ಕೂಡಾ ಪ್ರತ್ಯೇಕ ಹೆಸರಿನಿಂದ ಗುರುತಿಸಲ್ಪಟ್ಟಿವೆ. ಈ ಐದೂ ಶಿಖರಗಳಲ್ಲೂ ಜೈನ ಹಾಗೂ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪುರಾತನ ದೇವಾಲಯಗಳಿವೆ. ಇಲ್ಲಿರುವ ಪ್ರಮುಖ ಜೈನ ದೇವಾಲಯಗಳೆಂದರೆ ತೀರ್ಥಂಕರ ನೇಮಿನಾಥ ದೇವಾಲಯ, ಮಲ್ಲಿನಾಥ ದೇವಾಲಯ, ವೃಷಭದೇವ ದೇವಾಲಯ ಮತ್ತು ಪಾರ್ಶ್ವನಾಥ ದೇವಾಲಯ.
ಇನ್ನು, ಬೆಟ್ಟಗಳ ಮೇಲಿರುವ ಹಿಂದೂ ದೇವಾಲಯಗಳೆಂದರೆ ಭವನಾಥ ಮಹಾದೇವ ದೇವಾಲಯ, ದತ್ತಾತ್ರೇಯ ದೇವಸ್ಥಾನ, ಅಂಬಾ ಮಾತಾ ದೇವಾಲಯ, ಕಾಳಿಕಾ ದೇವಾಲಯ, ರಾಮಚಂದ್ರ ದೇವಾಲಯ, ಜಟಾಶಂಕರ ಮಹಾದೇವ ದೇವಾಲಯ, ಮತ್ತು ಗೌಮುಖಿ ಗಂಗಾ ದೇವಾಲಯ ಹೀಗೆ ಹಲವಾರು ದೇವಾಲಯಗಳು ಈ ಬೆಟ್ಟಗಳ ತಪ್ಪಲಿನಲ್ಲಿವೆ.
ಇಷ್ಟು ದೇವಾಲಯಗಳು ಕೂಡಾ ಎಲ್ಲ ಶಿಖರಗಳಲ್ಲೂ ಹಂಚಿಕೆಯಾಗಿವೆ. ಮೊದಲ ಶಿಖರದ ತುದಿಯಲ್ಲಿ ನೇಮಿನಾಥ ಹಾಗೂ ಅಂಬಾ ಮಾತಾ ದೇವಾಲಯಗಳಿವೆ. ಇನ್ನು ’ಗೋರಖ್ನಾಥ್’ ಎಂದು ಕರೆಸಿಕೊಳ್ಳುವ ಎರಡನೇ ಶಿಖರದಲ್ಲೂ ದೇವಾಲಯಗಳಿವೆ. ಇಲ್ಲಿರುವ ಐದು ಶಿಖರಗಳ ಪೈಕಿ ಮೂರನೇ ಶಿಖರವು ಓಘಾಡ್ ಶಿಖರ ಅಂತ ಕರೆಯಿಸಿಕೊಳ್ಳುತ್ತಿದೆ. ಮುಂದಿನ ಎರಡು ಶಿಖರಗಳೆಂದರೆ ದತ್ತಾತ್ರೇಯ ಹಾಗೂ ಕಾಳಿಕಾ ಬೆಟ್ಟ.
ಇನ್ನು ಈ ದೇವಾಲಯಗಳಿಗೆ ತೆರಳಬೇಕಾದ್ರೆ ಸುಲಭವೇನಿಲ್ಲ. ದೇವಾಲಯಗಳಿಗೆ ತೆರಳಬಯಸುವ ಯಾತ್ರಾರ್ಥಿಗಳು ದೇವಾಲಯಗಳನ್ನು ಸಂದರ್ಶಿಸಬೇಕಾದರೆ ಬೆಟ್ಟದಲ್ಲಿ ನಿರ್ಮಿಸಿರುವ ಸಾವಿರಾರು ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಆದರೂ ಇಲ್ಲಿಗೆ ಭೇಟಿ ಕೊಡುವ ಯಾತ್ರಾರ್ಥಿಗಳ ಸಂಖ್ಯೆಗೇನೂ ಕೊರತೆಯಿಲ್ಲ.
ಪ್ರವಾಸಕ್ಕೆ ಸೂಕ್ತ ಸಮಯ
ಬೇಸಿಗೆಯಲ್ಲಿ ಗಿರ್ನಾರ್ ತಪ್ಪಲಿನಲ್ಲಿ ತೇವಾಂಶವಿರುವ ವಾತಾವರಣ ಕಂಡು ಬಂದರೆ ಅಪರಾಹ್ನದ ವೇಳೆಗೆ ತಾಪಮಾನ ಬಹಳಷ್ಟು ಏರಿಕೆಯಾಗುತ್ತದೆ. ಹೀಗಾಗಿ ಈ ವೇಳೆ ಭೇಟಿ ಕೊಟ್ಟರೆ ಯಾತ್ರಿಕರು ಬೆಳ್ಳಂಬೆಳಗ್ಗೆ ತಮ್ಮ ಯಾತ್ರೆಯನ್ನು ಆರಂಭಿಸಬೇಕಾಗುತ್ತದೆ. ಇನ್ನು ಇಲ್ಲಿರುವ ದೇವಾಲಯಗಳನ್ನು ಸಂದರ್ಶಿಸಬೇಕಾದ್ರೆ ಸಾವಿರಾರು ಮೆಟ್ಟಿಲುಗಳನ್ನು ಏರಬೇಕಾಗಿರುವುದರಿಂದ ಮಳೆಗಾಲದಲ್ಲಿ ಇಲ್ಲಿಬೆ ಭೇಟಿ ಕೊಡುವುದು ಅಷ್ಟೊಂದು ಸೂಕ್ತವಲ್ಲ. ಹೀಗಾಗಿ ಇಲ್ಲಿಗೆ ಭೇಟಿ ಕೊಡಲು ಚಳಿಗಾಲವೇ ಸೂಕ್ತ. ಡಿಸೆಂಬರ್ನಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಸಾಕಷ್ಟು ಪ್ರವಾಸದ ಮಜಾವನ್ನು ಅನುಭವಿಸಬಹುದು.
ಸಾರಿಗೆ ವ್ಯವಸ್ಥೆ
ಗಿರ್ನಾರ್ಗೆ ತೆರಳಲು ಸಾಕಷ್ಟು ಉತ್ತಮ ಸಾರಿಗೆ ವ್ಯವಸ್ಥೆಯಿದೆ. ಗುಜರಾತ್ನ ಜುನಾಗಢ ನಗರಕ್ಕೆ ಈ ತಾಣವು ಸಮೀಪದಲ್ಲಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಅಥವಾ ರೈಲಿನ ಮುಖಾಂತರ ಸುಲಭವಾಗಿ ತೆರಳಬಹುದು. ಇಷ್ಟು ಮಾತ್ರವಲ್ಲದೆ ಏರ್ಪೋರ್ಟ್ಗಳು ಸಮೀಪದಲ್ಲೇ ಇರುವುದರಿಂದ ಶೀಘ್ರ ಪ್ರಯಾಣಕ್ಕಾಗಿ ವಿಮಾನದ ಮೂಲಕ ಕೂಡಾ ತೆರಳಬಹುದಾಗಿದೆ.