ಖಂಡೋಲೀ ಜಾರ್ಖಂಡಿನಲ್ಲಿ ಸಾಹಸೀ ಕ್ರೀಡಾಪ್ರಿಯರಿಗೆ ಒಂದು ಆಕರ್ಷಕ ಪ್ರವಾಸೀ ತಾಣ ವಾಗಿದೆ. ಗಿರಿಡೀಹ್ ಗೆ ಈಶಾನ್ಯ ದಿಕ್ಕಿನಲ್ಲಿ 10 ಕಿ.ಮೀ. ದೂರದಲ್ಲಿರುವ ಖಂಡೋಲೀ ಅಣೆಕಟ್ಟು ವಿವಿಧ ಜಲಕ್ರೀಡೆಗಳು ಮತ್ತು ಸಾಹಸಗಳಿಗೆ ಕಟ್ಟಿರುವ ಒಂದು ನೀರಿನ ಜಲಾಶಯ. ಪಕ್ಷಿ ಉತ್ಸಾಹಿಗಳೂ ಸಹ ಅಸಂಖ್ಯಾತ ಜಾತಿಗಳ ಪಕ್ಷಿಗಳನ್ನು ಇಲ್ಲಿ ಅನ್ವೇಶಿಸಬಹುದು. ಇಡೀ ಖಂಡೋಲೀ ಅಣೆಕಟ್ಟನ್ನು 600 ಅಡಿಎತ್ತರದ ದಿಣ್ಣೆಯಮೇಲಿರುವ ವೀಕ್ಷಣಾಗೋಪುರದಿಂದ ಕಾಣಬಹುದು. ಇಲ್ಲಿ ಪ್ರವಾಸಿಗರು ಬೋಟಿಂಗ್, ಪರ್ವತಾರೋಹಣ, ರಾಕ್ ಕ್ಲೈಂಬಿಂಗ್ ಪ್ಯಾರಾಸೈಲಿಂಗ್ ಮತ್ತು ಆನೆ ಮತ್ತು ಒಂಟೆ ಸಫಾರಿ ಹಾಗೂ ಕಯಾಕಿಂಗ್ ಆನಂದಿಸಬಹುದು.
ಗಿರಿಡೀಹ್ ರೈಲು ನಿಲ್ದಾಣವು ಖಂಡೋಲೀಗೆ ಅತಿ ಸಮೀಪದ ರೈಲು ನಿಲ್ದಾಣವಾಗಿದೆ. ರೈಲು ನಿಲ್ದಾಣದಿಂದ ಅಣೆಕಟ್ಟಿಗೆ ಹೋಗಲು ಬಸ್ ಮತ್ತು ಟ್ಯಾಕ್ಸಿ ಸೌಕರ್ಯಗಳಿವೆ. ಖಂಡೋಲೀ ಬೆಟ್ಟದ ಬುಡದಲ್ಲಿ ಖಂಡೋಲೀಹಳ್ಳಿಯಿದೆ. ಒಂದುಲಕ್ಷಕ್ಕೂ ಹೆಚ್ಚು ಜನರಿಗೆ ಈ ಜಲಾಶಯದಿಂದ ನೀರಿನ ಪೂರೈಕೆಯಾಗುತ್ತಿದೆ. ಮೇಲಿನಿಂದ ನೋಡಿದರೆ ಖಂಡೋಲೀ ಬೆಟ್ಟವು ಒಂದು ಬೈಸಿಕಲ್ ಸೀಟಿನ ಆಕಾರದಲ್ಲಿರುವಂತಿದೆ ಮತ್ತು ಶಿಖರದ ತುದಿಯು ಒಂದು ಅಗ್ನಿಪರ್ವತದ ತುದಿಯಂತೆ ಕಾಣುತ್ತದೆ.
ಖಂಡೋಲೀ ಸರೋವರದ ಸುತ್ತ ವಲಸೆ ಹಕ್ಕಿಗಳು ಹಿಮಾಲಯಪರ್ವತಸರಣಿ ಆಫ್ರಿಕ, ಉತ್ತರ ಏಶ್ಯಾ ಮತ್ತು ಆಸ್ಟ್ರೇಲಿಯ ಪ್ರದೇಶಗಳಿಂದ ಬರುವುದನ್ನು ಕಾಣಬಹುದು. ದೊಡ್ಡ ನೀರುಕಾಗೆ (Great Cormorant), ಸೈಬೀರಿಯನ್ ಬಾತುಕೋಳಿ, ಬ್ರಾಹ್ಮಿನಿ ಹೆಣ್ಣು ಬಾತು ಮತ್ತು ನಲವತ್ತು ಅಂತಹ ವಿವಿಧ ಪಕ್ಷಿಗಳು ಇಲ್ಲಿಗೆ ಹಾರಿ ಬಂದು ಇಲ್ಲಿನ ಪರಿಸರದಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಇತ್ತೀಚೆಗೆ ಪರಿಸರ ಮಾಲಿನ್ಯದ ಕಾರಣದಿಂದ ವಲಸೆಬರುವ ಹಕ್ಕಿಗಳ ಸಂಖ್ಯೆ ಕಡಿಮೆಯಾಗತೊಡಗಿದೆ. ಕೆಲವು ಸಣ್ಣ ಪಕ್ಷಿಗಳು ಮತ್ತು ಪ್ರಾಣಿಗಳನ್ನು 6 ಎಕರೆಯಲ್ಲಿ ಹರಡಿರುವ ಒಂದು ಮನೋರಂಜನ ಉದ್ಯಾನದಲ್ಲಿ ಪಂಜರದಲ್ಲಿಟ್ಟಿದ್ದಾರೆ.
ಪ್ರವಾಸಿಗಳು ಸಾಧಾರಣವಾಗಿ ಚಳಿಗಾಲದಸಮಯದಲ್ಲಿ ಈ ಅದ್ಭುತ ವಲಸೆಹಕ್ಕಿಗಳನ್ನು ವೀಕ್ಷಿಸಲು ಬಹಳಸಂಖ್ಯೆಯಲ್ಲಿ ಬರುತ್ತಾರೆ. ಟಾಯ್ಟ್ರೈನ್ ಮತ್ತ್ತು ಸುತ್ತುವ ಜೋಕಾಲಿಗಳು ಪ್ರವಾಸಿಗಳಿಗೆ ಮನರಂಜನೆಯನ್ನು ಕೊಡುತ್ತವೆ. ಬೆಟ್ಟಹತ್ತಲು ಬಯಸುವವರು (Rock climbers), ಮೇಲಿನಿಂದ ಜಾರುವವರು (Rappelling), ನದಿ ದಾಟುವುದು ಮತ್ತು ಇತರ ಸವಾಲಿನ ಚಟುವಟಿಕೆಗಳನ್ನು ಖಂಡೋಲೀ ಬೆಟ್ಟದ ಬೆಣಚುಕಲ್ಲಿನ ಮೇಲೆ ಪ್ರಯತ್ನಿಸಬಹುದು. ಪೆಡಲ್ ದೋಣಿಗಳು, ವೇಗದ ದೋಣಿಗಳು ಮತ್ತು ನೀರಿನಮೇಲೆ ಹೋಗುವ ಸ್ಕೂಟರ್ಗಳು ಇವೇ ಕೆಲವು ಖಂಡೋಲೀಅಣೆಕಟ್ಟಿನಲ್ಲಿ ಆನಂದದಿಂದ ಮಾಡಬಹುದಾದ ನೀರಿನ ಚಟುವಟಿಕೆಗಳು. ಸ್ಕೂಬಾ ಡೈವಿಂಗ್, ತೆಪ್ಪದಲ್ಲಿ ಹೋಗುವುದು(Rafting), ಕ್ಯಾನೊಯಿಂಗ್, ದೋಣಿಯಲ್ಲಿ ಹೋಗುವುದು, ರಿಂಗೋರೈಡ್, ವಾಟರ್ಸ್ಕೈಯಿಂಗ್ ಮತ್ತು ಸರ್ಫ಼ಿಂಗ್ ಇವುಗಳು ಭಾರತದ ಎಲ್ಲಾ ಮೆಟ್ರೊಪಟ್ಟಣಗಳಿಂದ ಪ್ರವಾಸಿಗಳನ್ನು ಆಕರ್ಷಿಸುತ್ತವೆ. ಈ ಚಟುವಟಿಕೆಗಳು ಜಾರ್ಖಂಡಿನ ಪ್ರವಾಸೋದ್ಯಮವನ್ನು ಇನ್ನೂ ಹೆಚ್ಚಿಸುವಂತೆ ಮಾಡಿವೆ.
ಗಿರಿಡೀಹ್ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದ್ದು, ಅಲ್ಲಿಂದ ಪ್ರವಾಸಿಗಳು ಮೂರುಚಕ್ರದ ಆಟೊರಿಕ್ಷಾ, ಟ್ಯಾಕ್ಸಿ ಅಥವಾ ಟಾಂಗಾಗಳನ್ನು ಬಳಸಬಹುದು. ಬಸ್ಸ್ಟಾಂಡಿನಲ್ಲಿ ಬಸ್ಸುಗಳು ಅಗತ್ಯ ಸ್ಥಳಗಳಿಗೆ ಹೋಗಲು ಸುಲಭವಾಗಿ ಸಿಗುತ್ತವೆ. ರಾಜ್ಯ ಸರ್ಕಾರವು ಉಸ್ರಿ ಜಲಪಾತ, ಖಂಡೋಲೀ ಅಣೆಕಟ್ಟು ಮತ್ತು ಪಾರ್ಸನಾಥ್ ಇವುಗಳನ್ನು ಮತ್ತಷ್ಟು ಸುಲಭವಾಗಿ ಸೇರಲು ಸೂಕ್ತಕಾರ್ಯಕ್ರಮಗಳನ್ನು ಆರಂಭಿಸಿದ್ದಾರೆ.