ಗಾಂಧಿಧಾಮ, ಹೆಸರು ಕೇಳಿದರೆ ಗಾಂಧೀಜಿಯವರ ಮನೆ ಎಂಬ ಭಾವನೆ ಬಂದರೂ ಇದು ಗಾಂಧೀಜಿಯವರ ಔದಾರ್ಯದ ಒಂದು ಕೊಡುಗೆಯೇ ಹೌದು. ಭಾರತಕ್ಕೆ ಸ್ವಾತಂತ್ಯ ದೊರೆತ ಬಳಿಕ ಪಾಕಿಸ್ತಾನದಲ್ಲಿರುವ ಸಿಂಧಿ ಜನರನ್ನು ಭಾರತದ ನೆಲದಲ್ಲಿ ಪುನರ್ವಸತಿ ನೀಡಲು ಗಾಂಧೀಜಿಯವರು ಹಲವು ಕ್ರಮ ಕೈಗೊಂಡರು. ಅವರ ಮನವಿಯ ಮೇರೆಗೆ ಕಛ್ ಪ್ರದೇಶದ ಮಹಾರಾಜರಾದ ಮಹಾರಾವ್ ಶ್ರೀ ವಿಜಯರಾಜೇ ಖೇಂಗರ್ಜಿ ಜಡೇಜಾರವರು ತಮ್ಮ ಮನೆತನದ ಒಡೆತನದಲ್ಲಿದ್ದ ಹದಿನೈದು ಸಾವಿರ ಎಕರೆ ಜಾಗವನ್ನು ಈ ಕಾರ್ಯಕ್ಕಾಗಿ ದಾನರೂಪದಲ್ಲಿ ನೀಡಿದರು.
ಗಾಂಧೀಜಿಯವರ ಕೋರಿಕೆಯ ಮೇರೆಗೆ ಭಾಯಿ ಪ್ರತಾಪ್ ದಯಾಳ್ ದಾಸ್ ರವರು ಪಾಕಿಸ್ತಾನದಲ್ಲಿದ್ದ ಸಿಂಧಿ ಜನರನ್ನು ಗುರುತಿಸಿ ಈ ಸ್ಥಳದಲ್ಲಿ ಪುನರ್ವಸತಿ ಕಂಡುಕೊಳ್ಳಲು ನೆರವು ನೀಡಿದರು. ಸಿಂಧಿಗಳು ಮೊದಲಿದ್ದ ಪ್ರದೇಶವನ್ನು ಹೋಲುವ ಹಾಗೂ ಸೂಕ್ತವಾದ ಖಾಲಿ ಜಾಗದಲ್ಲಿ ಪುಟ್ಟ ನಗರವೊಂದನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಯಿತು. ಈ ಸ್ಥಳದಲ್ಲಿ ಅವರಿಗೆ ತಮ್ಮ ಭಾಷೆಯಲ್ಲಿ ವ್ಯವಹರಿಸಲು ಹಾಗೂ ಉತ್ತಮ ಜೀವನವನ್ನು ಪ್ರಾರಂಭಿಸಲು ಸಕಲ ಏರ್ಪಾಡುಗಳನ್ನು ಒದಗಿಸಲಾಯಿತು. ಈ ನಿಟ್ಟಿನಲ್ಲಿ ಸಿಂಧೂ ಪುನರ್ವಸತಿ ನಿಗಮ (The Sindhu Resettlement Corporation Ltd) ವನ್ನೂ ಸ್ಥಾಪಿಸಲಾಯಿತು. ಗಾಂಧೀಜಿಯವರ ಗೌರವಾರ್ಥ ಈ ನಗರಕ್ಕೆ ಗಾಂಧಿಧಾಮ ಎಂಬ ಹೆಸರನ್ನೂ ಇಡಲಾಯಿತು.
ಸಿಂಧಿಗಳು ತಮ್ಮ ವ್ಯವಹಾರವನ್ನು ಸಮೀಪದ ರೇವುಪಟ್ಟಣವಾದ ಕಾಂಡ್ಲಾದ ಮೂಲಕ ಪ್ರಾರಂಭಿಸಿದರು. ವಾಣಿಜ್ಯ ವ್ಯವಹಾರಕ್ಕೆ ಉತ್ತೇಜನ ನೀಡಲು ಕಾಂಡ್ಲಾ ಪ್ರದೇಶಕ್ಕೆ ಭಾರತದಲ್ಲಿ ಮಾತ್ರವಲ್ಲಿ ಏಷಿಯಾ ಖಂಡದಲ್ಲಿಯೇ ಪ್ರಥಮವಾಗಿ ’ವಿಶೇಷ ಆರ್ಥಿಕ ವಲಯ’ದ ದರ್ಜೆಯನ್ನು ನೀಡಲಾಯಿತು. ಕಾಂಡ್ಲಾದ ನಿಸರ್ಗ ಸೌಂದರ್ಯ, ಗಾಂಧಿಧಾಮದ ಭರ್ದೇಶ್ವರ ದೇವಾಲಯ, ಜೈನರಿಗೆ ಪವಿತ್ರವಾದ ಶ್ರೀ ಚಂದ್ರ ಪ್ರಭೂಜಿ ಭಗವಾನ್ ಮಂದಿರ ಮೊದಲಾದವು ಗಾಂಧಿಧಾಮದ ಪ್ರಮುಖ ಆಕರ್ಷಣೆಗಳಾದರೆ ಅಕ್ಷರಧಾಮ, ಪೂರ್ಣೇಶ್ವರ ದೇವಾಲಯ ಇತರ ಪ್ರೇಕ್ಷಣೀಯ ಸ್ಥಳಗಳಾಗಿವೆ.
ಈ ನಗರದ ವಿಶೇಷತೆಯೆಂದರೆ ಸಂಪೂರ್ಣ ನಗರವನ್ನು ವಾಸ್ತುವನ್ನು ಪರಿಗಣಿಸಿ ನಿರ್ಮಿಸಿರುವುದು. ಇಡಿಯ ನಗರ ಪೂರ್ವಕ್ಕೆ ಅಭಿಮುಖವಾಗಿರುವಂತೆ ನಿರ್ಮಿಸಲಾಗಿದೆ. ರಾಜಸ್ತಾನದ ಹವಾಗುಣವನ್ನು ಹೋಲುವ ಇಲ್ಲಿ ಬೇಸಿಗೆಯಲ್ಲಿ ನಲವತ್ತೈದು ಡಿಗ್ರಿ ಸೆಖೆಯಿದ್ದರೆ ಚಳಿಗಾಲದಲ್ಲಿ ಮೂರು ಡಿಗ್ರಿಯ ಕೊರೆವ ಚಳಿ ಇರುತ್ತದೆ.
ಹವಾಮಾನ:
ಗಾಂಧಿಧಾಮದಲ್ಲಿ ಬೇಸಿಗೆ ಬಿರುಸಾಗಿರುತ್ತದೆ. ಮಳೆಗಾಲದಲ್ಲಿ ವರುಣನ ಆರ್ಭಟವಿದ್ದರೆ ಚಳಿಗಾಲದಲ್ಲಿ ಕುಳಿರ್ಗಾಳಿ ಬೀಸುತ್ತಿರುತ್ತದೆ. ಆದುದರಿಂದ ಗಾಂಧಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರು ಆಯಾ ಸಮಯಕ್ಕನುಗುಣವಾದ ದಿರಿಸುಗಳನ್ನು ಧರಿಸಬೇಕಾಗುತ್ತದೆ.