ರಾಷ್ಟ್ರೀಯ ಹುತಾತ್ಮರ ಸ್ಮಾರಕವು ಭಾರತ-ಪಾಕ್ ಗಡಿಯಿಂದ ಒಂದು ಕಿ.ಮೀ. ದೂರದಲ್ಲಿದ್ದು, ಸಟ್ಲೆಜ್ ನದಿ ತಟದಲ್ಲಿರುವ ಇದನ್ನು 1968ರಲ್ಲಿ ನಿರ್ಮಿಸಲಾಗಿತ್ತು. ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರುವನ್ನು ವಿಚಾರಣೆ ಮುಗಿಯುವ ಒಂದು ದಿನ ಮೊದಲೇ ಗಲ್ಲಿಗೇರಿಸಲಾಯಿತು. ಲಾಹೋರ್ ನ ಜನರ ಪ್ರತಿರೋಧ ಮತ್ತು ಘರ್ಷಣೆಯನ್ನು ತಡೆಯಲು ಬ್ರಿಟಿಷರು ಈ ಮೂವರ ಶವಗಳನ್ನು ಜೈಲಿನಿಂದ ಗುಪ್ತವಾಗಿ ಸಾಗಿಸಿ ಈ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಬಿ.ಕೆ. ದತ್ ಅವರ ಅಂತಿಮ ಇಚ್ಛೆಯಂತೆ ಅವರ ಅಂತ್ಯಕ್ರಿಯೆಯನ್ನು ಕೂಡ ಇದೇ ಸ್ಥಳದಲ್ಲಿ ನಡೆಸಲಾಗಿತ್ತು.
1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಪಾಕಿಸ್ತಾನದ ಸೇನೆ ಈ ಸ್ಮಾರಕದಲ್ಲಿದ್ದ ರಾಷ್ಟ್ರೀಯ ಹೀರೋಗಳ ಮೂರ್ತಿಗಳನ್ನು ಕಿತ್ತೆಸೆದಿತ್ತು. ಆದರೆ 1973ರಲ್ಲಿ ಪಂಜಾಬ್ ನ ಅಂದಿನ ಮುಖ್ಯಮಂತ್ರಿ ಗಿಯಾನಿ ಜೈಲ್ ಸಿಂಗ್ ಅವರ ಪರಿಶ್ರಮದ ಫಲವಾಗಿ ಮೂರ್ತಿಗಳನ್ನು ಮರುಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗಾಗಿ ಪ್ರತೀ ವರ್ಷ ಮಾರ್ಚ್ 23ರಂದು ಮಾಡುವ ಶಹೀದಿ ಮೇಳದಲ್ಲಿ ಭಾಗವಹಿಸಲು ಸಾವಿರಾರು ಮಂದಿ ಆಗಮಿಸುತ್ತಾರೆ.