ಫತೇಹಾಬಾದ್ ಪ್ರಾಂತದಲ್ಲಿ, ಬತ್ತಿಹೋಗಿರುವ ಸರಸ್ವತಿ ನದಿ ದಂಡೆಯ ಮೇಲಿರುವ ಐತಿಹಾಸಿಕ ಬೆಟ್ಟವೊಂದಕ್ಕೆ ಕುನಾಲ್ ಪ್ರಸಿದ್ಧವಾಗಿದೆ. ಇದು ಹರಿಯಾಣ ರಾಜ್ಯದ ಅತಿ ಪ್ರಾಚೀನ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಕುನಾಲ್ ನಲ್ಲಿ ಕೈಗೊಳ್ಳಲಾದ ಉತ್ಖನನಗಳು ಹರಪ್ಪನ್ ಮತ್ತು ಹರಪ್ಪನ್ ಪೂರ್ವ ಕಾಲಕ್ಕೆ ಸಂಬಂಧಿಸಿದ ಅಪೂರ್ವ ಮಾಹಿತಿ ಕಣಜವನ್ನು ತೆರೆದಿಡುತ್ತವೆ.
ಇತಿಹಾಸಕಾರರು ಮಣ್ಣಿನ ವಸ್ತುಗಳು, ತ್ರಿಭುಜಾಕೃತಿಯ ಟೆರಾಕೊಟಾ, ಕೇಕ್ ಗಳು, ಲಿಪಿಗಳು, ಬೆಳ್ಳಿಯ ನಾಣ್ಯಗಳು, ಒಂದು ಕಿರೀಟ, ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ಅರೆ ಬೆಲೆಬಾಳುವ ಕಲ್ಲುಗಳಿಂದ ಮಾಡಲಾದ ಆಭರಣಗಳನ್ನೊಳಗೊಂಡಂತೆ ಹಲವಾರು ಅರಸರಿಗೆ ಸಂಬಂಧಿಸಿದ ವಸ್ತುಗಳು, ಹಾಗೂ ಇನ್ನೂ ಬಹಳಷ್ಟು ಆಸಕ್ತಿಕರ ವಸ್ತುಗಳನ್ನೊಳಗೊಂಡಂತೆ, ಆಗಿನ ಕಾಲದ ಅನೇಕ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
ಕುನಾಲ್ ಬೆಟ್ಟದಲ್ಲಿ ಕೈಗೊಳ್ಳಲಾದ ಮೇಲಿನ ಎಲ್ಲಾ ಉತ್ಖನನಗಳು ಹರಪ್ಪನ್ ಪೂರ್ವ ಕಾಲದ ಸಂಸ್ಕೃತಿಯ, 3 ಹಂತಗಳ ವಿಕಾಸದ ಕುರಿತು ಬಹಳ ಮಹತ್ತರವಾದ ಸಾಕ್ಷಿಯನ್ನು ತೆರೆದಿಡುತ್ತವೆ. ಈ ಉತ್ಖನನಗಳು, ಹೇಗೆ ಜನರು ಮೊದಮೊದಲು ಗುಂಡಿಗಳಲ್ಲಿ ವಾಸಿಸುತ್ತಿದ್ದರು, ನಂತರ ಮಣ್ಣಿನ ಇಟ್ಟಿಗೆಗಳಿಂದ ಮನೆಗಳನ್ನು ಕಟ್ಟಿದರು, ನಂತರ ಕಟ್ಟಕಡೆಯದಾಗಿ, ಚಚ್ಚೌಕ ಮತ್ತು ಆಯತಾಕಾರದ ಮನೆಗಳನ್ನು ಕಟ್ಟಲು ಅವರು ಒಲೆಗಳಲ್ಲಿ ಸುಟ್ಟ ಇಟ್ಟಿಗೆಗಳನ್ನು ಹೇಗೆ ಬಳಸಿಕೊಂಡರು ಎಂಬುದನ್ನು ತೋರಿಸುತ್ತವೆ.
ವೇದ ಕಾಲದ ಸಂಸ್ಕೃತಿ ಮತ್ತು ಹರಪ್ಪನ್ ಪೂರ್ವ ಕಾಲದ ಸಂಸ್ಕೃತಿಗಳೆರಡರ ತಿರುಳೂ ಒಂದೇ ಎಂಬ ಖಚಿತವಾದ ತೀರ್ಮಾನಕ್ಕೆ ಇತಿಹಾಸಕಾರರು ಬಂದಿದ್ದಾರೆ. ತ್ರಿಭುಜಾಕೃತಿಯ ಟೆರಾಕೊಟಾ ಕೇಕ್ ಗಳು ಫಲವತ್ತತೆಯ ಸಂಕೇತ ಎಂಬ ಋಗ್ವೇದದ ನಂಬಿಕೆಯನ್ನು ಅವುಗಳ ಶೋಧನೆಯು ಪುಷ್ಟಿಕರಿಸುತ್ತದೆ. ಈಗಿನ ಬತ್ತಿಹೋಗಿರುವ ಸರಸ್ವತಿ ನದೀ ತೀರದ ಮೇಲಿರುವ ಕುನಾಲ್ ನ ಉಲ್ಲೇಖವು ಋಗ್ವೇದದಲ್ಲಿಯೂ ಇದೆ.