ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿರುವ ಎಲಿಫೆಂಟಾ ಗುಹೆಗಳು ಮುಂಬೈನ ಕಡಲ ತೀರದಲ್ಲಿವೆ. ಎಲಿಫೆಂಟಾ ದ್ವೀಪಕ್ಕೆ ಪೋರ್ಚುಗೀಸರು ಮೊದಲು ಬಂದಾಗ ಆನೆಯ ಅನೇಕ ವಿಗ್ರಹಳಗಳನ್ನು ಇಲ್ಲಿ ನೋಡಿದ್ದರಿಂದ ಇದಕ್ಕೆ ಎಲಿಫೆಂಟಾ ಕೇವ್ಸ್ ಎಂದು ಹೆಸರಿಟ್ಟರು. ಈ ಸ್ಥಳವನ್ನು ಗರಪೂರಿ ಎಂದೂ ಕರೆಯುತ್ತಾರೆ, ಇದರ ಅರ್ಥ 'ಗುಹೆ' ಎಂಬುದಾಗಿದೆ. ಇಲ್ಲಿ ಎರಡು ವಿಭಿನ್ನವಾದ ಗುಂಪಿನ ಗುಹೆಗಳಿದ್ದು, ಒಂದು ಹಿಂದೂ ಹಾಗೂ ಮತ್ತೊಂದು ಬೌದ್ಧ ಧರ್ಮಕ್ಕೆ ಸೇರಿದ್ದಾಗಿದೆ.
ಈ ಎರಡೂ ಗುಹೆಗಳ ಶುಚಿತ್ವವನ್ನು ಕಾಪಾಡಲು ಮತ್ತು ಉತ್ತಮವಾಗಿ ನಿರ್ವಹಿಸಲು ಪ್ರತಿ ಸೋಮವಾರ ಇಲ್ಲಿಗೆ ಪ್ರವೇಶವಿರುವುದಿಲ್ಲ.
ದ್ವೀಪಕ್ಕೆ ದೋಣಿವಿಹಾರ
ಮುಂಬೈ ನಗರದ ಗೇಟ್ ವೇ ಸಮೀಪದ ಕೊಲಾಬಾದಿಂದ ಈ ದ್ವೀಪಕ್ಕೆ ದೋಣಿ ಅಥವಾ ಫೆರ್ರಿಗಳಲ್ಲಿ ಪ್ರಯಾಣಿಸಬಹುದು. ಹೆಚ್ಚು ಶುಲ್ಕವಿಲ್ಲದೆ ಸಾಮಾನ್ಯ ಟಿಕೆಟ್ ದರ ಹೊಂದಿರುವ ಫೆರ್ರಿ ಬೋಟುಗಳು ಸದಾ ಲಭ್ಯವಿರುತ್ತದೆ. ಇಲ್ಲಿಂದ ದ್ವೀಪಕ್ಕೆ ಸುಮಾರು ಒಂದು ಗಂಟೆಗಳ ಪ್ರಯಾಣವಿದ್ದು ಪ್ರವಾಸಿಗರು ಈ ಯಾನವನ್ನು ಖಂಡಿತವಾಗಿ ಎಂಜಾಯ್ ಮಾಡಬಹುದು ಹಾಗೂ ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯ, ಮುಂಬೈ ಬಂದರು ಪ್ರವಾಸಿಗರಿಗೆ ಖುಷಿ ಕೊಡುವುದರಲ್ಲಿ ಅನುಮಾನವಿಲ್ಲ.
ಗೇಟ್ ವೇ ಆಫ್ ಇಂಡಿಯಾ ಟರ್ಮಿನಲ್ ಮುಂದೆ ಹೋಗುತ್ತಿರುವಾಗ ವಿಶ್ವ ವಿದ್ಯಾನಿಲಯದ ಟವರ್, ವಿಕ್ಟೋರಿಯಾ ಟರ್ಮಿನಸ್ ಟವರ್ ಹಾಗೂ ತಾಜ್ ಹೋಟೆಲ್ ಕಟ್ಟಡಗಳು ಆಕಾಶದ ಎತ್ತರಕ್ಕೆ ನಿಂತು ಆಕರ್ಷಿಸುತ್ತದೆ.
ಫೆರ್ರಿ ನಿಮ್ಮನ್ನು ದ್ವೀಪದ ತೀರದಲ್ಲಿ ಇಳಿಸುತ್ತಿದ್ದಂತೆ ಮುಖ್ಯ ಗುಹೆಯು ನಿಮ್ಮನ್ನು ತನ್ನತ್ತ ಸೆಳೆಯುತ್ತದೆ. ಗುಹೆಯ ಒಳಭಾಗಕ್ಕೆ ಕರೆದುಕೊಂಡು ಹೋಗಲು 'ಗೌಗಿ ಮಿನಿ ಟ್ರೇನ್' ಅಥವಾ 'ಎಲಿಫೆಂಟಾ ಎಕ್ಸ್ ಪ್ರೆಸ್ ಟ್ರೇನ್' ಇದೆ. ಎಲಿಫೆಂಟಾ ಕೇವ್ ಸೃಷ್ಠಿಕರ್ತರು ಯಾರು ಎಂದು ಈವರೆಗೂ ತಿಳಿಯದೇ ಇದ್ದರೂ ಇದರ ಮೂಲ ಸುಮಾರು ಕ್ರಿ.ಶ.5 ರಿಂದ 8 ನೇ ಶತಮಾನ ಎಂದು ತಿಳಿದುಬಂದಿದೆ.
ಗುಹೆಗಳು ಮತ್ತು ಯೋಗ
ಈ ಮಹಾ ಗುಹೆಗಳಲ್ಲಿರುವ ಪ್ರಮುಖ ದೇವಸ್ಥಾನವು ಇತರ ಗುಹಾಲಯಗಳಿಗಿಂತಲೂ ಹೆಸರುವಾಸಿಯಾಗಿದ್ದು, ಅತಿಹೆಚ್ಚು ಪ್ರವಾಸಿಗರಿಂದ ವೀಕ್ಷಿಸಲ್ಪಟ್ಟದ್ದಾಗಿದೆ. ಇಲ್ಲಿನ ಎಲಿಫೆಂಟಾ ತ್ರಿಮೂರ್ತಿ ಹಾಗೂ ನಟರಾಜನ ಕಲಾಕೃತಿಗಳು ಹೆಚ್ಚು ಜನಪ್ರಿಯವಾದವುಗಳು. ಶಿವನ ನರ್ತನದ ವಿಗ್ರಹವನ್ನು ತಪ್ಪದೆ ನೋಡಿಕೊಂಡು ಬರಲೇ ಬೇಕು. ಇದಲ್ಲದೆ ಗುಹೆಯ ಒಳಭಾಗದಲ್ಲಿ ಶಿವನ ನರ್ತನದ ವಿವಿಧ ಭಂಗಿಯ ಅನೇಕ ವಿಗ್ರಹಗಳನ್ನು ಇಲ್ಲಿ ಕಾಣಬಹುದು. ದ್ವೀಪದ ಆಡಳಿತ ವರ್ಗದವರು ಎಲ್ಲ ವಿಗ್ರಹಗಳನ್ನು ಸಂಗ್ರಹಿಸಿ ಒಂದು ಸಂಗ್ರಹಾಲಯವನ್ನೆ ಮಾಡಿದ್ದಾರೆ.
ಸ್ವಲ್ಪ ಕಷ್ಟ.. ಸ್ವಲ್ಪ ಧೈರ್ಯ.. ಇವೆರಡನ್ನೂ ಒಟ್ಟಾಗಿ ಸೇರಿಸಿ ಗುಹೆಯ ಮೇಲ್ಭಾಗಕ್ಕೆ ಏರಿದರೆ ಅಲ್ಲೊಂದು ಎತ್ತರದ ಬುರುಜನ್ನು ಕಾಣಬಹುದು. ಅದರ ಮೇಲೆ ನಿಂತರೆ ಅದೊಂದು ಮುಂಬೈ ನಗರದ ವಿಶಾಲವಾದ ಸಮುದ್ರ ತೀರ ಸುಂದರವಾದ ವಿಹಂಗಮ ನೋಟವನ್ನು ನೋಡುಗರಿಗೆ ಉಣಬಡಿಸುತ್ತದೆ. ಅನೇಕ ಪ್ರವಾಸಿಗರ ಅನುಭವದ ಪ್ರಕಾರ, ಮೇಲ್ಭಾಗಕ್ಕೆ ಹತ್ತುವುದು ಬಹಳ ಕಷ್ಟವಾಗಿದ್ದು ಒಮ್ಮೆ ಹತ್ತಿದರೆ ಅದು ನಿಜಕ್ಕೂ ಲಾಭದಾಯಕವೆ ಹೌದು ಎನ್ನುತ್ತಾರೆ.