ಧಾರ್ಚೂಲಾ ಎನ್ನುವುದು ಉತ್ತರ್ ಖಂಡ್ ರಾಜ್ಯದಲ್ಲಿರುವ ಭಾರತ - ನೇಪಾಳ ಗಡಿಯ ಪಿಥೋರಗಡ್ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಈ ಸ್ಥಳದ ಹೆಸರು "ಧಾರ್" ಮತ್ತು "ಚೂಲಾ" ಎಂಬ ಎರಡು ಹೆಸರುಗಳಿಂದ ಸೃಷ್ಟಿಯಾಗಿದೆ. ಹಿಂದಿ ಭಾಷೆಯಲ್ಲಿ ಧಾರ್ ಎಂದರೆ ಶಿಖರವೆಂದು, ಚೂಲಾ ಎಂದರೆ ಒಲೆ ಎಂದರ್ಥವಾಗುತ್ತದೆ. ಈ ಗಿರಿ ಪಟ್ಟಣವು ನೋಡಲು ಒಲೆಯ ಆಕಾರದಲ್ಲಿ ಕಾಣುವುದರಿಂದ ಈ ಹೆಸರು ಬಂದಿದೆ. ಹಿಮಾಚ್ಛಾದಿತವಾದ ಪಂಚ್ಚುಲಿ ಶಿಖರವು ಧಾರ್ಚೂಲಾದ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿದೆ. ಇದು ಧಾರ್ಚೂಲಾವನ್ನು ಜೋಹರ್ ಕಣಿವೆಯಿಂದ ಬೇರ್ಪಡಿಸಿದೆ. ಈ ಪಟ್ಟಣವು ಕೆಲವು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಅವುಗಳಲ್ಲಿ ಮಾನಸ ಸರೋವರ ಅಥವಾ ಮಾನಸ್ ಕೆರೆ ಇವುಗಳಲ್ಲಿ ಪ್ರಸ್ತಾಪಿಸಲೇಬೇಕಾದ ಸ್ಥಳವಾಗಿದೆ.
ಮಾನಸ ಸರೋವರವು ಒಂದು ಸ್ವಚ್ಛ ನೀರಿನ ಸರೋವರವಾಗಿದ್ದು, ಚೀನಾದಲ್ಲಿರುವ ಟಿಬೇಟ್ ಸ್ವಾಯತ್ತ ಪ್ರಾಂತ್ಯದಲ್ಲಿ ನೆಲೆಗೊಂಡಿದೆ. ಈ ಕೆರೆಯು ಹಿಂದೂಗಳ ಮತ್ತು ಬೌದ್ಧರ ಧಾರ್ಮಿಕ ಪ್ರಾಮುಖ್ಯತೆಯಿಂದಾಗಿ ಎಲ್ಲರ ಗಮನ ಸೆಳೆದಿದೆ. ನಂಬಿಕೆಗಳ ಪ್ರಕಾರ, ಈ ಸರೋವರದಲ್ಲಿನ ನೀರು ಎಲ್ಲ ಪಾಪಗಳನ್ನು ನಾಶಗೊಳಿಸಿ, ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆಯೆಂದು ಭಾವಿಸಲಾಗಿದೆ. ಬೌದ್ಧರ ಪ್ರಕಾರ, ಮಾನಸ ಸರೋವರದಲ್ಲಿಯೆ ಭಗವಾನ್ ಬುದ್ಧನು ಗರ್ಭರೂಪದಲ್ಲಿ ತನ್ನ ತಾಯಿಯ ಹೊಟ್ಟೆ ಸೇರಿದನಂತೆ. ಹಾಗಾಗಿ ಈ ಸರೋವರವು ಬೌದ್ಧರ ವಲಯದಲ್ಲಿ ಭಾರೀ ಧಾರ್ಮಿಕ ಮಹತ್ವ ಪಡೆದಿದೆ. ಇದರ ದಂಡೆಯಲ್ಲಿ ಕೆಲವೊಂದು ಬೌದ್ಧ ಮಠಗಳು ನಿರ್ಮಾಣಗೊಂಡಿವೆ. ಇವುಗಳಲ್ಲಿ ಚಿವು ಗೊಂಪ ಬೌದ್ಧ ಮಠವನ್ನು ಕಡಿದಾದ ಬೆಟ್ಟದ ಮೇಲೆ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಇದು ಎಲ್ಲರ ಗಮನ ಸೆಳೆಯುತ್ತದೆ.
ಈ ಸರೋವರವು ಪ್ರಮುಖ ನದಿಗಳಾದ ಬ್ರಹ್ಮಪುತ್ರ, ಕರ್ನಾಲಿ, ಸಿಂಧೂ ಮತ್ತು ಸಟ್ಲೆಜ್ ನದಿಗಳ ಉಗಮ ಸ್ಥಾನವಾಗಿ ಸಹ ಸೇವೆಸಲ್ಲಿಸುತ್ತದೆ. ಪ್ರವಾಸಿಗರು ಇಲ್ಲಿ ಮಾನಸ ಸರೋವರದ ಪಶ್ಚಿಮ ದಿಕ್ಕಿನಲ್ಲಿರುವ 'ರಕ್ಷಾಸ್ಥಲ್' ಕೆರೆಯನ್ನೂ ಸಹ ನೋಡಬಹುದು. ಇದರ ಜೊತೆಗೆ ಗ್ರೇಟರ್ ಹಿಮಾಲಯದಲ್ಲಿನ ಕಾಲಾಪಾನಿಯಲ್ಲಿ ಹುಟ್ಟುವ ಕಾಳಿ ನದಿಯಲ್ಲಿ ರಾಫ್ಟಿಂಗ್ನ ಮೋಜನ್ನು ಸಹ ಅನುಭವಿಸಬಹುದು. ಚಿರ್ಕಿಲ ಜಲಾಶಯವನ್ನು ಈ ಸರೋವರಕ್ಕೆ ಬಂದು ಸೇರುವ ಒಂದು ನದಿಯ ಮೇಲೆ ನಿರ್ಮಿಸಲಾಗಿದೆ. ಇದೊಂದು ಜನಪ್ರಿಯ ವಿಹಾರ ತಾಣವಾಗಿದೆ. ಪ್ರವಾಸಿಗರು ಧಾರ್ಚೂಲಾಗೆ ಭೇಟಿಕೊಟ್ಟಾಗ ಓಂ ಪರ್ವತ್, ಆದಿ ಕೈಲಾಷ್, ಭಾರತ-ನೇಪಾಳ ಮತ್ತು ಭಾರತ-ಸಿನೊ ಗಡಿ ಹಾಗು ನಾರಾಯಣ್ ಆಶ್ರಮವನ್ನು ಸಹ ನೋಡಬಹುದು.
ಪ್ರವಾಸಿಗರು ಪಂತನಗರ್ ವಿಮಾನ ನಿಲ್ದಾಣದಿಂದ ಇಲ್ಲಿಗೆ ಕ್ಯಾಬ್ನ್ನು ಬಾಡಿಗೆಗೆ ಪಡೆದು ತಲುಪಬಹುದು. ಈ ವಿಮಾನ ನಿಲ್ದಾಣವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಧಾರ್ಚೂಲಾಗೆ ಸಮೀಪದಲ್ಲಿರುವ ರೈಲು ನಿಲ್ದಾಣವು ತಾನಕ್ಪುರದಲ್ಲಿದೆ. ಪಿಥೋರಗಡ್ ನಿಂದ ಧಾರ್ಚೂಲಾಗೆ ಸರ್ಕಾರಿ ಬಸ್ಸುಗಳು ಹೋಗಿ ಬರುತ್ತಿರುತ್ತವೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಬಯಸುವುದಾದರೆ ಚಳಿಗಾಲದಲ್ಲಿ ಹೋಗುವುದು ಉತ್ತಮ. ಏಕೆಂದರೆ ಆಗ ಇಲ್ಲಿನ ಹವಾಮಾನವು ಅತ್ಯಂತ ಪ್ರಶಸ್ತವಾಗಿರುತ್ತದೆ.