1321ರಲ್ಲಿ ಈ ಕೋಟೆ ನಿರ್ಮಾಣ ಮಾಡಲಾಗಿದೆ. ಇಂದು ಬಹುತೇಕವಾಗಿ ನಾಶವಾಗಿರುವ ಈ ಕೋಟೆಯನ್ನು, ತುಘಲಖ್ ಸಂಸ್ಥಾನದ ಸ್ಥಾಪಕ ಗಿಯಾಸ್-ಉದ್-ದಿನ್-ತುಘಲಖ್ ನಿರ್ಮಾಣ ಮಾಡಿದ್ದ.
ಈ ಕೋಟೆಯ ನಿರ್ಮಾಣವೇ ಒಂದು ಆಸಕ್ತಿಕರವಾದ ಐತಿಹಾಸಿಕ ವಿಷಯವಾಗಿದೆ. ಗಾಝೀ ಮಲ್ಲಿಕ್ (ಮುಂದೆ ಆತನು ಗಿಯಾಸ್-ಉದ್-ದಿನ್-ತುಘಲಖ್ ಎಂಬ ಹೆಸರಿನಲ್ಲಿ ಕರೆಯಲ್ಪಪಟ್ಟನು)ಎಂಬಾತನು ದೆಹಲಿ ಸಂಸ್ಥಾನದ ರಾಜನಾದ ಖಿಲ್ಜಿಯ ಸಾಮಂತ ರಾಜನಾಗಿದ್ದನು. ಅವನು ರಾಜನಾದಾಗ ಇತರ ರಾಜರುಗಳಲ್ಲೊಬ್ಬನು ಅವನನ್ನು ಟೀಕಿಸುತ್ತಾ ನೀನು ಸಮರ್ಥನಾಗಿದ್ದರೆ ಒಂದು ಕೋಟೆಯನ್ನು ಕಟ್ಟು ಎಂದು ಹೇಳಿದ್ದ. ಗಾಝೀ ಮಲ್ಲಿಕ್ ಅದನ್ನು ಲಘುವಾಗಿ ಪರಿಗಣಿಸಲಿಲ್ಲ, ಅದರ ಪ್ರತಿಫಲವೆ ಈ ಕೋಟೆ.
ಮುಂದೆ 1321ರಲ್ಲಿ ಎಲ್ಲಾ ಖಿಲ್ಜಿ ರಾಜರುಗಳನ್ನು ಸೋಲಿಸಿ ಗಾಝೀ ಮಲ್ಲಿಕನೇ ರಾಜನಾದ ಹಾಗೂ ಅವನಿಗೆ ಗಿಯಾಸ್-ಉದ್-ದೀನ್-ತುಘಲಖ್ ಎಂಬ ಹೆಸರೂ ಬಂತು. ತನ್ನದೆ ಆದ ಸ್ವತಃ ವಿಶೇಷ ವಿನ್ಯಾಸವುಳ್ಳ ಅದ್ಭುತವಾದ ಕೋಟೆಯನ್ನು ನಿರ್ಮಿಸಲು ಅವನು ಪ್ರಾರಂಭಿಸಿದ.
ಆದರೆ ಆತನು ಅಂದುಕೊಂಡಂತೆ ಕೋಟೆಯನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಗಿಯಾಸನಿಗೆ ಸಂತನೊಬ್ಬನು ಶಾಪ ಕೊಟ್ಟಿದ್ದರಿಂದ ಕೋಟೆಯನ್ನು ಅಂದುಕೊಂಡ ರೀತಿಯಲ್ಲಿ ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ ದೆಹಲಿಯಲ್ಲೇ ಇದು ಅತ್ಯಂತ ದೊಡ್ಡದಾದ ಕೋಟೆಯಾಗಿದ್ದು ಅದರ ವಿಶೇಷ ವಿನ್ಯಾಸವು ಇದರಲ್ಲಿರುವ ಮಸೀದಿ, ಅರಮನೆ, ಗೋಪುರಗಳು, ಕಟ್ಟಡಗಳು ಹಾಗೂ ಸರೋವರಗಳಲ್ಲಿ ಕಂಡುಬರುತ್ತದೆ. ರಾಜ ವಂಶಸ್ಥರ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೋಟೆ ನಿರ್ಮಿಸಲಾಗಿತ್ತು. ಭಾರತದ ಇತರೆ ಕೋಟೆಗಳ ಗೋಡೆಗಳಿಗಿಂತಲೂ ಇಲ್ಲಿನ ಗೋಡೆಗಳು ಅಗಲ ಹಾಗೂ ದಪ್ಪವಾಗಿದೆ.
ದೆಹಲಿಯಲ್ಲಿ ನಾಶವಾಗಿರುವ ಕೋಟೆ ನಗರಗಳಲ್ಲಿ ತುಘಲಖ್ ಬಾದ್ ಮೂರನೇ ನಗರವಾಗಿದೆ. ಪಟ್ಟಣದ ರಸ್ತೆ ಮತ್ತು ಬೀದಿಗಳಿಗೆ ಅನುಗುಣವಾಗಿ ಇಲ್ಲಿನ ಬಡಾವಣೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕೋಟೆಯು ಕುತುಬ್ ಕಾಂಪ್ಲೆಕ್ಸ್ ಸಮೀಪದಲ್ಲಿಯೇ ಇದೆ.