ದೆಹಲಿಯಲ್ಲಿರುವ ಅಕ್ಷರಧಾಮ ಅಥವಾ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ಭಾರತೀಯ ಸಂಸ್ಕೃತಿ, ಕಲೆ ಹಾಗೂ ಧಾರ್ಮಿಕತ್ವದ ಪ್ರತೀಕವಾಗಿದೆ. ಬೋಚಾಸನವಾಸಿ ಶ್ರೀ ಅಕ್ಷರಾ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆಯ ಧಾರ್ಮಿಕ ನಾಯಕರಾದ ಪ್ರಮುಖ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸುಮಾರು 5 ವರ್ಷಗಳ ಅವಧಿಯಲ್ಲಿ ಈ ದೇವಾಲಯದ ಕಟ್ಟಡವನ್ನು ನಿರ್ಮಿಸಲಾಯಿತು.
ಅಕ್ಷರಧಾಮ ದೇವಾಲಯ ಕಟ್ಟಡ ನಿರ್ಮಾಣದಲ್ಲಿ ಒಟ್ಟಾರೆಯಾಗಿ ಸುಮಾರು 11,000 ಕಾರ್ಮಿಕರು ದುಡಿದಿದ್ದು ಅವರಲ್ಲಿ ಸುಮಾರು 3,000 ಮಂದಿ ಸ್ವಯಂಸೇವಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಕಟ್ಟಡವು 2005 ನವೆಂಬರ್ 5 ರಂದು ಅಧಿಕೃತವಾಗಿ ಆರಂಭಗೊಂಡಿತು. ಈ ದೇವಾಲಯವನ್ನು ವಾಸ್ತುಶಾಸ್ತ್ರ ಹಾಗೂ ಪಂಚರಾತ್ರ ಶಾಸ್ತ್ರದ ಅನುಗುಣವಾಗಿ ನಿರ್ಮಾಣ ಮಾಡಲಾಗಿದೆ.
ದೇವಾಲಯದ ಇಡೀ ಕಟ್ಟಡವನ್ನು 5 ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಕಾಂಪ್ಲೆಕ್ಸ್ ನ ಮಧ್ಯಭಾಗದಲ್ಲಿ ದೇವಾಲಯವಿದೆ. ಇದು ಸುಮಾರು 141 ಅಡಿ ಎತ್ತರವಿದ್ದು ಆಕರ್ಷಕ ಕಲಾಕೃತಿಗಳಿರುವ 234 ಕಂಬಗಳನ್ನು ಹೊಂದಿದ್ದು 9 ಅಲಂಕಾರಿಕ ಗೋಪುರಗಳಿವೆ, 20 ಮೂಲೆ ಗೋಪುರಗಳಿದ್ದು ಆನೆ ರೂಪದ ಗದ್ದಿಗೆ ಕಲ್ಲುಗಳಿವೆ. ಸುಮಾರು 20,000 ಕ್ಕೂ ಹೆಚ್ಚು ದೇವಾನು-ದೇವತೆಗಳು, ಭಕ್ತರು ಹಾಗೂ ಸಂತರ ಮುರ್ತಿಗಳಿಲ್ಲಿವೆ. ಕಬ್ಬಿಣ, ಸಿಮೆಂಟ್ ಬಳಸದೆ ಬಿಳಿ ಮಿಶ್ರಿತ ಗುಲಾಬಿ ಬಣ್ಣದ ಮರಳು ಕಲ್ಲು ಹಾಗೂ ಬಿಳಿ ಮಾರ್ಬಲ್, ಇವುಗಳಿಂದಲೇ ದೇವಾಲಯವನ್ನು ವಿಶೇಷವಾದ ವಿನ್ಯಾಸದಿಂದ ನಿರ್ಮಾಣ ಮಾಡಲಾಗಿದೆ.
ಇಲ್ಲಿನ "ಹಾಲ್ ಆಫ್ ವ್ಯಾಲ್ಯೂ" ಅಥವಾ ಸಹಜಾನಂದ್ ಪ್ರದರ್ಶನ ಕೊಠಡಿಯಲ್ಲಿ ಸ್ವಾಮಿನಾರಾಯಣ ಅವರ ಜೀವನದ ಬಗ್ಗೆ ನಿರ್ಮಿಸಿರುವ ಅನಿಮೇಶನ್ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಈ ಚಿತ್ರದ ಮೂಲಕ ಶಾಂತಿ, ಅನ್ಯೋನ್ಯತೆ, ಸಹಬಾಳ್ವೆ, ಮಾನವೀಯತೆ, ಇತರರನ್ನು ಸತ್ಕರಿಸುವುದು ಹಾಗೂ ಸರ್ವಶಕ್ತನ ಆರಾಧನೆಯ ಬಗ್ಗೆ ತಿಳಿಸಲಾಗುತ್ತದೆ.
'ನೀಲಕಂಠ ಕಲ್ಯಾಣ ಯಾತ್ರಾ' ಎಂಬ ಚಲನಚಿತ್ರವು ಈ ಕಟ್ಟಡದ ಆಕರ್ಷಣೆಗಳಲ್ಲಿ ಪ್ರಮುಖವಾದದ್ದು. ಈ ಚಿತ್ರದಲ್ಲಿ ಭಾರತದ ಅನೇಕ ಧಾರ್ಮಿಕ ಸ್ಥಳಗಳು, ಅಲ್ಲಿನ ಸಂಸ್ಕೃತಿ, ಹಬ್ಬಗಳು ಹಾಗೂ ಪೂಜಾ ವಿಧಿವಿಧಾನಗಳು ಮುಂತಾದವುಗಳನ್ನು ತೋರಿಸಲಾಗಿದೆ. ಇದನ್ನು 'ಮಿಸ್ಟಿಕ್ ಇಂಡಿಯಾ' ಎಂಬುದಾಗಿ ಕರೆಯಲಾಗಿದೆ.
ಭಾರತದ ಖುಷಿ ಮುನಿಗಳ ಚಿತ್ರಗಳು ಹಾಗೂ ಮಾದರಿಗಳ ಮೂಲಕ ಭಾರತದ ಪಾರಂಪರಿಕ ಇತಿಹಾಸವನ್ನು ಇಲ್ಲಿ ಕಾಣಬಹುದು. ಇದು ಭಾರತದ ಸಂಸ್ಕೃತಿಯ ಬಗ್ಗೆ ಒಂದು ವಿಸ್ತಾರವಾದ ವಿವರಣೆಯನ್ನು ನೀಡುತ್ತದೆ.
ಈ ಕಟ್ಟಡದ ಮತ್ತೊಂದು ಆಕರ್ಷಣೆ ಎಂದರೆ ಯಜ್ಞಪುರುಷ ಕುಂಡದಲ್ಲಿರುವ ಮ್ಯೂಜಿಕಲ್ ಫೌಂಟೇನ್. ವೇದಗಳ ಕಾಲದ ಯಜ್ಞ ಕುಂಡ ಹಾಗೂ ಮ್ಯೂಜಿಕ್ ಫೌಂಟೆನ್ನಿನ ಮಿಶ್ರಣವೇ ಇಲ್ಲಿನ ಒಂದು ವಿಶೇಷ. ಇದು ವಿಶ್ವದಲ್ಲೇ, ಅತ್ಯಂತ ದೊಡ್ಡದಾದ ಕುಂಡವಾಗಿದ್ದು ಸಂಜೆಯ ವೇಳೆಯಲ್ಲಿ ಸಂಗೀತಕ್ಕೆ ತಕ್ಕಂತೆ ನೀರಿನ ಚಿಲುಮೆಗಳು ಉಕ್ಕಿ ಉಕ್ಕಿ ಬರುವುದನ್ನು ನೋಡುವುದೇ ಚೆಂದ. ಈ ಕುಂಡದ ಮಧ್ಯಭಾಗದಲ್ಲಿ ಎಂಟು ದಳಗಳುಳ್ಳ ಕಮಲವಿದೆ. ಆಧುನಿಕ ಭಾರತೀಯ ಗಣಿತ ಶಾಸ್ತ್ರಕ್ಕೆ ತಕ್ಕಂತೆ ಇದರ ದಳಗಳನ್ನು ಅದರ ಅಳತೆಗೆ ತಕ್ಕಂತೆ ಸರಿಸಮಾನವಾಗಿ ವಿನ್ಯಾಸ ಮಾಡಲಾಗಿದೆ.
ಇಲ್ಲಿನ 'ಭಾರತ್ ಉಪವನ್' ಅಥವಾ 'ಗಾರ್ಡನ್ ಆಫ್ ಇಂಡಿಯಾ' ದಲ್ಲಿ ಕಂಚಿನ ಲೋಹದಲ್ಲಿ ನಿರ್ಮಾಣ ಮಾಡಿರುವ ಮಕ್ಕಳ ತಂಡ, ಮಹಿಳೆಯರು, ಸ್ವಾತಂತ್ರ ಹೋರಾಟಗಾರರು, ಪ್ರಮುಖ ವ್ಯಕ್ತಿಗಳು ಹಾಗೂ ಭಾರತದ ಧೀಮಂತ ನಾಯಕರ ಶಿಲ್ಪಗಳು ಎಲ್ಲರನ್ನು ಆಕರ್ಷಿಸುತ್ತದೆ.
ಯೋಗಿ ಹೃದಯ ಕಮಲ, ನೀಲಕಂಠ ಅಭಿಷೇಕ, ನಾರಾಯಣ ಸರೋವರ, ಪ್ರೇಮಾವತಿ ಆಹಾರಗೃಹ ಹಾಗೂ ಆರ್ಶ್(AARSH) ಕೇಂದ್ರ ಇಲ್ಲಿನ ಇತರೆ ಆಕರ್ಷಕ ತಾಣಗಳಾಗಿವೆ.
ನೀವು ದೆಹಲಿಗೆ ಹೋದರೆ ಇಲ್ಲಿಗೆ ಭೇಟಿ ನೀಡದೆ ಹಿಂದಿರುಗಲೇ ಬಾರದು, ನೋಡಲೇ ಬೇಕಾದ ಸ್ಥಳ ಇದಾಗಿದೆ.