ದೆಹಲಿಯ ಜನಪ್ರಿಯ ಕಿಲ್ಲಾ-ಇ-ಮೊಲ್ಹಾ ಇದರ ಹೊಸ ಹೆಸರೇ ರೆಡ್ ಫೋರ್ಟ್ ಅಥವಾ ಕೆಂಪು ಕೋಟೆ(ಲಾಲ್ ಕಿಲಾ). ಅಂದಿನ ಹೊಸ ರಾಜಧಾನಿಯಾಗಿದ್ದ ಷಾಜಹಾನ್ ಬಾದಿನ ಕೇಂದ್ರ ಸ್ಥಾನವಾಗಿ ಈ ಕೋಟೆಯನ್ನು ನಿರ್ಮಾಣ ಮಾಡಲಾಗಿತ್ತು. 17ನೇ ಶತಮಾನದ ಮಧ್ಯಭಾಗದಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು. ಉಸ್ತಾದ್ ಅಹಮ್ಮದ್ ಎಂಬುವರು ಈ ಕೋಟೆಯ ವಿನ್ಯಾಸಕಾರರು,1639 ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ 1648 ರಲ್ಲಿ ಪೂರ್ಣಗೊಂಡಿತು. ಆದಾಗ್ಯೂ 19ನೇ ಶತಮಾನದಲ್ಲೂ ಸಹ ಹೆಚ್ಚುವರಿ ಕೆಲಸಗಳನ್ನು ಮಾಡಲಾಗಿತ್ತು.
ಈ ವಿಶಾಲವಾದ ಕೋಟೆಯನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದ್ದು ವಿಶ್ವದಲ್ಲೇ ಅದ್ಭುತವಾದ ಅರಮನೆಯೊಂದು ಇದರಲ್ಲಿದೆ. ಈ ಕೋಟೆಯು ಸುಮಾರು 2.41ಕಿಮೀ.ವಿಸ್ತೀರ್ಣ ಹೊಂದಿದ್ದು, ಇದರ ಎರಡು ಪ್ರಮುಖ ದ್ವಾರಗಳನ್ನು ಲಾಹೋರ್ ಹಾಗೂ ದೆಹಲಿ ಗೇಟ್ ಎಂದು ಹೆಸರಿಸಲಾಗಿದೆ. ಲಾಹೋರ್ ದ್ವಾರವು ಚಟ್ಟಾ ಚೌಕ ಎಂಬ ದ್ವಾರವು ಅಂದಿನ ರಾಜ ವಂಶಸ್ಥರ ಮಾರುಕಟ್ಟೆಗೆ ಕೊಂಡೊಯ್ಯುತ್ತದೆ.
ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ರೆಡ್ ಫೋರ್ಟ್ ಅನ್ನು ಗುರುತಿಸಲಾಗಿದೆ. ಈ ಸುಂದರ ಸ್ಮಾರಕದಲ್ಲಿ ಅನೇಕ ಅದ್ಭುತವಾದ ಕಲಾಕೃತಿಗಳಿವೆ. ದಿವಾನ್-ಐ-ಆಮ್ ಎಂಬುದು ಅವುಗಳಲ್ಲೊಂದು ಭವ್ಯವಾದ ಕಟ್ಟಡವಾಗಿದೆ. ಇಲ್ಲೇ ರಾಜನು ತನ್ನ ಪ್ರಜೆಗಳ ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದನು.
ದಿವಾನ್-ಐ-ಖಾಸ್ ಎಂಬ ಮಹಲಿನಲ್ಲಿ ರಾಜನ ಖಾಸಗಿ ಸಭೆ ಹಾಗೂ ಸಮಾರಂಭಗಳು ನಡೆಯುತ್ತಿದ್ದವು. ಮೋತಿ ಮಸೀದಿಯನ್ನು ಇತ್ತೀಚೆಗೆ ಕೋಟೆಗೆ ಸೇರಿಸಲಾಯಿತು. ಈ ಮಸೀದಿಯು ಖಾಸಗಿ ಮಸೀದಿಯಾಗಿದ್ದು ಮುಘಲ್ ರಾಜ ಜೌರಂಗಜೇಬನು ತನಗಾಗಿ ನಿರ್ಮಿಸಿಕೊಂಡಿದ್ದನು.
ದೆಹಲಿಯ ರೆಡ್ ಫೋರ್ಟ್ ಸಮೀಪದಲ್ಲಿರುವ ಮಾರುಕಟ್ಟೆ ಸ್ಥಳವನ್ನು ಚಟ್ಟಾ ಚೌಕ್ ಎಂದು ಕರೆಯುತ್ತಾರೆ. ಇಲ್ಲಿ ರೇಷ್ಮೆ, ಒಡವೆಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಮುಘಲರ ಕಾಲದಲ್ಲಿ ರಾಜ ವಂಶಸ್ಥರಿಗಾಗಿ ಮಾರಲ್ಪಡುತ್ತಿತ್ತು.
ಕೆಂಪು ಕೋಟೆಯಲ್ಲಿರುವ ದಿವಾನ್-ಐ-ಆಮ್ ಅಥವಾ ಸಾರ್ವಜನಿಕ ಹಜಾರದಲ್ಲಿ ರಾಜ ಷಾಜಹಾನ್ ತನ್ನ ಪ್ರಜೆಗಳ ಕಷ್ಟ-ಸುಖಗಳ ಬಗ್ಗೆ ಇಲ್ಲಿ ವಿಚಾರಣೆ ಮಾಡುತ್ತಿದ್ದನು. ಹಜಾರದ ಮೇಲ್ಭಾಗದ (ಝಾರೋಕ)ಲ್ಲಿ ಕುಳಿತು ಪ್ರಜೆಗಳ ಅಹವಾಲುಗಳನ್ನು ಅವನು ಆಲಿಸುತ್ತಿದ್ದನು.
ದೆಹಲಿಯ ಕೆಂಪು ಕೋಟೆ ಒಳಭಾಗದಲ್ಲಿ ದಿವಾನ್-ಐ-ಖಾಸ್(ಖಾಸ್ ಮಹಲ್)ಇದೆ. ಇಲ್ಲಿ ಖಾಸಗಿ ಸಭೆ, ರಾಜ್ಯದ ಮಂತ್ರಿ ಮಂಡಲಿಯವರು ಹಾಗೂ ಅಥಿತಿಗಳೊಂದಿಗೆ ರಾಜ ಷಾಜಹಾನ್ ಸಂವಾದ ನಡೆಸುತ್ತಿದ್ದನು.
ಕೆಂಪು ಕೋಟೆಯ ಪಶ್ಚಿಮ ಭಾಗದಲ್ಲಿರುವ ಹಮಾಮ್(ರಾಜ ವಂಶಜರ ಸ್ನಾನ ಗೃಹ)ಸಮೀಪದಲ್ಲಿ ಮೋತಿ ಮಸೀದಿ ಇದೆ.
ಕೆಂಪು ಕೋಟೆಯಲ್ಲಿರುವ ಮುಮ್ತಾಜ್ ಮಹಲ್, ಅದು ಮಹಿಳೆಯರ ಸಭಾಂಗಣವಾಗಿದ್ದು ಇಂದು ವಸ್ತುಸಂಗ್ರಹಾಲಯವಾಗಿದೆ. ಅರಮನೆಯ ದಕ್ಷಿಣ ಭಾಗದ ಕೊನೆಯ ಸಾಲಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಕೆಂಪು ಕೋಟೆಯ ಒಳಭಾಗದಲ್ಲಿ ಷಾಜಹಾನ್ ನಿರ್ಮಿಸಿದ ಭವ್ಯ ಅರಮನೆಗಳಲ್ಲಿ ಮುಮ್ತಾಜ್ ಮಹಲ್ ಕೂಡ ಅದ್ಭುತವಾದದ್ದಾಗಿದೆ.
ರೆಡ್ ಫೋರ್ಟ್ ನಲ್ಲಿರುವ ರಂಗ್ ಮಹಲಿಗೆ ನಖಾರ್ ಖಾನ ಎಂಬ ಅದ್ಭುತ ದ್ವಾರವಿದೆ. ಈ ಮೂರು ಅಂತಸ್ತಿನ ಕಟ್ಟಡದಲ್ಲಿ ಪ್ರತಿನಿತ್ಯ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ವಾದ್ಯ ಸಂಗೀತಗಳು ಮೊಳಗುತ್ತಿದ್ದವು. ಈ ಕಟ್ಟಡದ ವಿನ್ಯಾಸವೂ ಆನೆಯ ಆಕಾರದಲ್ಲಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕೆಂಪು ಕೋಟೆಯಲ್ಲಿರುವ ರಾಗ ಮಹಲ ಅನ್ನು ಬೇಗಂ ಮಹಲ್ ಎಂದೂ ಕರೆಯುತ್ತಾರೆ. ಇಲ್ಲಿ ಷಾಜಹಾನನ ಪತ್ನಿ ಹಾಗೂ ಉಪ ಪತ್ನಿಯರು ವಾಸವಾಗಿದ್ದರು.
ಈ ದಿನಗಳಲ್ಲಿ, ಪ್ರತಿ ವರ್ಷ ಪ್ರಧಾನ ಮಂತ್ರಿಗಳು ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಇಲ್ಲಿ ಧ್ವಜಾರೋಹಣ ಮಾಡುತ್ತಾರೆ. ಮುಘಲರ ಇತಿಹಾಸವನ್ನು ತಿಳಿಸುವ ಶಬ್ಧ ಮತ್ತು ಬೆಳಕಿನ ಕಾರ್ಯಕ್ರಮವನ್ನು ಸಂಜೆ ಆಯೋಜಿಸಲಾಗುತ್ತದೆ. ಭಾರತೀಯ ಯುದ್ಧ ಸ್ಮಾರಕ ವಸ್ತುಸಂಗ್ರಹಾಲಯ ಹಾಗೂ ಪಾಚ್ಯವಸ್ತು ಸಂಗ್ರಹಾಲಯವೂ ಇಲ್ಲಿದೆ.
ಸೋಮವಾರ ಹೊರತು ಪಡಿಸಿ ವಾರದ ಉಳಿದೆಲ್ಲಾ ದಿನವೂ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಪ್ರವಾಸಿಗರಿಗೆ ಈ ಕೋಟೆ ತೆರೆದಿರುತ್ತದೆ. ನಿಮಗೆ ಬೇಕಾದಲ್ಲಿ ಗೈಡ್ ನೇಮಿಸಿಕೊಳ್ಳಬಹುದು. ಇಲ್ಲಿ ಕ್ಯಾಂಟೀನ್, ಶೌಚಾಲಯ ಹಾಗೂ ಪ್ರವಾಸಿಗರಿಗೆ ಬೇಕಾದ ಅನುಕೂಲಗಳನ್ನು ಮಾಡಲಾಗಿದೆ.