ಬಿರ್ಲಾ ಮಂದಿರ ಕೂಡ ದಿಲ್ಲಿಯ ಅತ್ಯಂತ ಜನಪ್ರಿಯ ಧಾರ್ಮಿಕ ತಾಣವಾಗಿದ್ದು, ಲಕ್ಷ್ಮೀನಾರಾಯಣ ಮಂದಿರ ಅಂತಲೂ ಕರೆಸಿಕೊಳ್ಳುತ್ತದೆ. ಮಹಾನಗರಿಯ ಪ್ರಮುಖ ಆಕರ್ಷಣೆಯ ಪ್ರವಾಸಿ ತಾಣ ಎನ್ನುವ ಕೀರ್ತಿಗೂ ಪಾತ್ರವಾಗಿದೆ. 1939 ರಲ್ಲಿ ಉದ್ಯಮಿ ಜಿ.ಡಿ. ಬಿರ್ಲಾರಿಂದ ನಿರ್ಮಾಣಗೊಂಡಿರುವ ಈ ಮಂದಿರವನ್ನು ಮಹಾತ್ಮಗಾಂಧಿಯು ಉದ್ಘಾಟಿಸಿದ್ದರು.
ಇಂದು ದಿಲ್ಲಿಯ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಬಿರ್ಲಾ ಮಂದಿರವೂ ಒಂದು. ಇಲ್ಲಿನ ಮುಖ್ಯ ಗುಡಿ, ದೇವಿ ಲಕ್ಷ್ಮಿ ಹಾಗೂ ನಾರಾಯಣನಿಗೆ ಮೀಸಲಾಗಿದೆ. ಈ ಮುಖ್ಯ ದೇವಾಲಯದ ಸುತ್ತ ಅನೇಕ ಚಿಕ್ಕ ಮಂದಿರಗಳು ಇವೆ. ಇವು ಕೃಷ್ಣ, ಶಿವ, ಗಣೇಶ, ಹನುಮಂತ, ಬುದ್ಧ ಮತ್ತಿತರರ ಆಲಯವಾಗಿದೆ. ಶಕ್ತಿ ದೇವತೆಯಾದ ದುರ್ಗೆಗೆ ಮೀಸಲಾದ ದೇವಾಲಯವೂ ಇಲ್ಲೊಂದಿದೆ.
ಬಿರ್ಲಾ ಮಂದಿರವನ್ನು ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ಹಿಂದು ಮಂದಿರಗಳ ವಾಸ್ತುಶಿಲ್ಪ ಹೊಂದಿದೆ. ಈ ದೇವಾಲಯವನ್ನು ಜನಪ್ರಿಯ ವ್ಯಕ್ತಿಯಾದ ಪಂಡಿತ್ ವಿಶ್ವನಾಥ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ನಿರ್ಮಿಸಲಾಗಿದೆ. ಇದರ ನಿರ್ಮಾಣದ ನಂತರ ಉದ್ಘಾಟಿಸುವ ಕಾರ್ಯಕ್ಕೆ ಮಹಾತ್ಮಗಾಂಧಿ ಒಪ್ಪಿಕೊಂಡರು. ಈ ಉದ್ದೇಶದಿಂದಲೇ ಈ ದೇವಾಲಯಕ್ಕೆ ಎಲ್ಲಾ ಧರ್ಮ, ವರ್ಣ ಹಾಗೂ ಪಂಥಿಯರಿಗೆ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ. 7.5 ಎಕರೆ ವಿಶಾಲ ಜಾಗದಲ್ಲಿ ಇದು ಆವರಿಸಿಕೊಂಡಿದೆ. ದೇವಾಲಯದ ಆವರಣದಲ್ಲಿ ಹಸಿರು ಉದ್ಯಾನ ಹಾಗು ಕಾರಂಜಿ ಇದ್ದು, ಸಾವಿರಾರು ಪ್ರವಾಸಿಗರನ್ನು, ಭಕ್ತರನ್ನು ಸೆಳೆಯುತ್ತದೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಜನರ ಆಗಮನ ಹೆಚ್ಚುತ್ತಲೇ ಇದೆ. ಸಾಮಾನ್ಯವಾಗಿ ಹಿಂದು ಉತ್ಸವಗಳಾದ ದೀಪಾವಳಿ ಹಾಗೂ ಜನ್ಮಾಷ್ಟಮಿ ಅತ್ಯಂತ ಅದ್ದೂರಿಯಾಗಿ ಇಲ್ಲಿ ಆಚರಣೆ ಮಾಡಲಾಗುತ್ತದೆ.
ಮಂದಿರ ಮಾರ್ಗವು ಕೊನಗಟ್ಟ ತಾಣಕ್ಕೆ ಅತ್ಯಂತ ಸಮೀಪವಾಗಿದೆ. ಅಲ್ಲದೇ ಸಾರಿಗೆ ವ್ಯವಸ್ಥೆಯೂ ಅನುಕೂಲಕರವಾಗಿದೆ. ಮಂದಿರವು ಬೆಳಗ್ಗೆ 6 ರಿಂದ ಸಂಜೆ 10 ರವರೆಗೆ ತೆರೆದಿರುತ್ತದೆ. ವಾರದ ಎಲ್ಲಾ ದಿನವೂ ಮುಕ್ತ ಪ್ರವೇಶಾವಕಾಶ ಇದೆ.