ಪಾಪನಾಶಂ ತಂಜಾವೂರು ಜಿಲ್ಲೆಯ ದಾರಾಸುರಂನಿಂದ 10 ಕಿ.ಮೀ ದೂರದಲ್ಲಿದೆ. ತಂಜಾವೂರಿನಿಂದ 25 ಕಿಮೀ ಮತ್ತು ಕುಂಬಕೋಣಂನಿಂದ 15 ಕಿಮೀ ದೂರದಲ್ಲಿದೆ. ಪಾಪನಾಶಂನಲ್ಲಿ ಪಳೈವನಾಥ ಸ್ವಾಮಿ ದೇವಾಲಯವು ಪ್ರಸಿದ್ಧವಾದದ್ದು. ಇದನ್ನು ಚೋಳರು ಕಟ್ಟಿಸಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿ ನಾಯಕರು ಕಟ್ಟಿಸಿದ ದೊಡ್ಡದೊಂದು ಧಾನ್ಯಾಗಾರವಿದೆ. ಇದು 3000 ಕಳಂ ಸಾಮರ್ಥ್ಯವನ್ನು ಹೊಂದಿದ್ದು 36 ಅಡಿ ಉದ್ದ ಮತ್ತು 86 ಅಡಿ ಅಗಲವಿದೆ. ಇದು ಸುಣ್ಣದ ಕಲ್ಲಿನಿಂದ ನಿರ್ಮಾಣಗೊಂಡಿದೆ. ಇದು ಕ್ರಿಶ 1600 ಮತ್ತು 1634ರ ನಡುವೆ ನಿರ್ಮಾಣಗೊಂಡಿದೆ ಎಂದು ಹೇಳಲಾಗಿದೆ. ಭಾರತೀಯ ಪುರಾತತ್ವ ಇಲಾಖೆಯವರು ಇದನ್ನು ಪಾರಂಪರಿಕ ಸ್ಮಾರಕ ಎಂದು ಘೋಷಿಸಿದ್ದಾರೆ.