ದಾರಾಸುರಂ ಪಟ್ಟಣವು ಇಲ್ಲಿರುವ ಐರಾವತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇದು ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳವಾದ ತಂಜಾವೂರಿನ ಕುಂಭಕೋಣಂನ ಹತ್ತಿರವಿದೆ. ದಾರಾಸುರಂ ತಮಿಳು ನಾಡಿನ ರಾಜಧಾನಿ ಚೆನೈನಿಂದ 380 ಕಿ.ಮೀ ದೂರದಲ್ಲಿದೆ. ಮೂಲತಃ ಇದನ್ನು ರಾಜರಾಜಪುರಂ ಎಂದು ಕರೆಯುತ್ತಿದ್ದರು. 2001ರಲ್ಲಿ ಈ ಪ್ರದೇಶದ ಜನಸಂಖ್ಯೆ 15000.
ದಾರಾಸುರಂನ ಸುತ್ತಮುತ್ತಲ ಪ್ರವಾಸಿ ತಾಣಗಳು
ದಾರಾಸುರಂನಲ್ಲಿನ ಪ್ರಮುಖ ಆಕರ್ಷಣೆ ಇಲ್ಲಿನ ಐರಾವತೇಶ್ವರ ದೇವಾಲಯ. ಇದನ್ನು ಚೋಳರ ದೊರೆ ಎರಡನೇ ರಾಜರಾಜ ಚೋಳನ ಕಾಲದಲ್ಲಿ ನಿರ್ಮಿಸಲಾಯಿತು. 12 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ತಮಿಳು ದೇವಾಲಯ ವಾಸ್ತುಶಿಲ್ಪದ ಸುವರ್ಣಯುಗದ ಹೆಮ್ಮೆಯ ಕುರುಹಾಗಿ ನಿಂತಿದೆ. ಯುನೆಸ್ಕೋ ಇದನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಐರಾವತೇಶ್ವರ ದೇವಾಲಯವು ತಂಜಾವೂರಿನಿಂದ 35 ಕಿ.ಮೀ ದೂರದಲ್ಲಿದೆ. ತಂಜಾವೂರು ಮತ್ತು ದಾರಾಸುರಂನಲ್ಲಿನ ದೇವಾಲಯಗಳನ್ನು ಚೋಳರ ಕಾಲದಲ್ಲೇ ನಿರ್ಮಿಸಿರುವುದರಿಂದ ಇವುಗಳ ವಾಸ್ತುಶಿಲ್ಪವು ಒಂದೇ ರೀತಿಯಲ್ಲಿದೆ.
ದಾರಾಸುರಂನ ಹವಾಮಾನ
ದಾರಾಸುರಂನಲ್ಲಿ ಸೂರ್ಯರಶ್ಮಿಗಳು ತೀಕ್ಷ್ಣವಾಗಿದ್ದು, ಇಲ್ಲಿನ ಹವಾಮಾನವು ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ಆದ್ದರಿಂದ ಧಗೆಯನ್ನು ಸಹಿಸುವುದು ಅಸಾಧ್ಯ. ಬೇಸಿಗೆಯಲ್ಲಿ ಇದು ಹೆಚ್ಚಾಗಿರುತ್ತದೆ. ಉಳಿದ ಸಮಯಗಳಲ್ಲಿ ಕೂಡ ಇಲ್ಲಿ ಧಗೆ ಇದ್ದೇ ಇರುತ್ತದೆ. ಆದ್ದರಿಂದ ನೀವೇನಾದರೂ ಇಲ್ಲಿಗೆ ಪ್ರವಾಸಕ್ಕೆಂದು ಹೋದರೆ ಹತ್ತಿಯ ಬಟ್ಟೆಗಳನ್ನು ಕೊಂಡೊಯ್ಯುವುದು ಉತ್ತಮ.
ದಾರಾಸುರಂ ತಲುಪುವುದು ಹೇಗೆ?
ದಾರಾಸುರಂಗೆ ಕುಂಭಕೋಣಂನಿಂದ ಬಸ್ಸು ಮತ್ತು ರೈಲಿನ ಸೌಕರ್ಯವಿದೆ. ಈ ಪಟ್ಟಣದಲ್ಲಿ ರೈಲ್ವೇ ನಿಲ್ದಾಣವಿದ್ದು ಕುಂಭಕೋಣಂ ಮತ್ತು ತಂಜಾವೂರಿಗೆ ನಿಯಮಿತವಾಗಿ ರೈಲು ಸಂಚಾರವಿದೆ.