ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ವನ್ಯ ಜೀವಿ ಆಸಕ್ತರ ಸ್ವರ್ಗವೆಂದೆ ಪರಿಗಣಿಸಲ್ಪಟ್ಟಿದೆ. ಪ್ರಕೃತಿ ಮಾತೆಯ ಮಡಿಲಲ್ಲಿ ಪ್ರಶಾಂತವಾಗಿ ಕಾಲ ಕಳೆಯುತ್ತ ವಿಶ್ರಾಂತಿ ಪಡೆಯಲು ಬಯಸುವವರು ತಪ್ಪದೆ ಭೇಟಿ ಕೊಡಬೇಕಾದ ಸ್ಥಳವಾಗಿ ಇದು ಗುರುತಿಸಲ್ಪಟ್ಟಿದೆ. ಮೊದಲಿಗೆ ಇದನ್ನು ರಾಮ್ಗಂಗಾ ರಾಷ್ಟ್ರೀಯ ಉದ್ಯಾನವನವೆಂದು ಕರೆಯಲಾಗುತ್ತಿತ್ತು. 1957ರಲ್ಲಿ ಇದನ್ನು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವೆಂದು ಪುನರ್ ನಾಮಕರಣ ಮಾಡಲಾಯಿತು. ಈ ಉದ್ಯಾನವನಕ್ಕೆ ಪ್ರಖ್ಯಾತ ಬೇಟೆಗಾರ, ಪ್ರಾಕೃತಿಕ ತಜ್ಞ ಮತ್ತು ಛಾಯಾಗ್ರಾಹಕರಾದ ಜಿಮ್ ಕಾರ್ಬೆಟ್ರ ಹೆಸರನ್ನು ಇಡಲಾಗಿದೆ. ಅವರ ಪ್ರಖ್ಯಾತ ಪುಸ್ತಕವಾದ " ಕುಮಾವ್ನ ನರಭಕ್ಷಕಗಳು" ಭಾರತದ ಕುಮಾವೂನ್ ಪ್ರಾಂತ್ಯದಲ್ಲಿ ಇವರು ನಡೆಸಿದ ಶಿಕಾರಿಯ ಅನುಭವಗಳನ್ನು ವಿವರವಾಗಿ ತಿಳಿಸುತ್ತದೆ. ಈ ಪುಸ್ತಕದಲ್ಲಿ ಕಾರ್ಬೆಟ್ರವರು 400 ಮಂದಿಯನ್ನು ಬಲಿ ತೆಗೆದುಕೊಂಡ ಹುಲಿಯನ್ನು ಹೇಗೆ ಬೇಟೆಯಾಡಿದರೆಂದು ವಿಸ್ತ್ರುತವಾಗಿ ತಿಳಿಸಿದ್ದಾರೆ.
ಈ ರಾಷ್ಟ್ರೀಯ ಉದ್ಯಾನವನವು ಹಿಮಾಲಯದ ಬೃಹತ್ ಪರ್ವತ ಶ್ರೇಣಿಯ ತಪ್ಪಲಲ್ಲಿ ನೆಲೆಸಿದ್ದು, ಸುತ್ತಲು ಹಚ್ಚ ಹಸಿರಿನ ವನರಾಶಿಯನ್ನು ಹೊಂದಿದೆ. ಭಾರತವು ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಸುಮಾರು 160 ಹುಲಿಗಳನ್ನು ಹೊಂದಿದೆ. ಈ ಉದ್ಯಾನವನವು ರಾಮ್ಗಂಗಾ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಸಿಗುವ ಅನುಪಮವಾದ ಸ್ಥಳಗಳನ್ನು ಮತ್ತು ಸಾಹಸಮಯ ಸಫಾರಿಯ ಸಲುವಾಗಿ ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ.
ಈ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ, ಚಿರತೆ, ಆನೆ, ಚುಕ್ಕೆಗಳಿರುವ ಜಿಂಕೆ, ಸಾಂಬಾರ್, ಕಡವೆ, ಕರಡಿ, ಕಾಡು ಹಂದಿ, ಘುರಲ್, ಲಂಗೂರ್ ಮತ್ತು ಮುಂಗುಸಿಗಳಂತಹ ಪ್ರಾಣಿಗಳನ್ನು ಕಾಣಬಹುದು. ಈ ಉದ್ಯಾನವನದಲ್ಲಿ ಸುಮಾರು 600 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ನಾವು ಕಾಣಬಹುದು. ಇವುಗಳಲ್ಲಿ ನವಿಲು, ಹೊಂಬಣ್ಣದ ನವಿಲು, ಪಾರಿವಾಳ, ಗೂಬೆ, ಮಂಗಟ್ಟೆ ಹಕ್ಕಿ, ಬಾರ್ಬೆಟ್, ಟಿಟ್ಟಿಭ, ಮೈನಾ, ನೀಲಕಂಠ, ಮಿನಿವೆಟ್, ಕೌಜುಗ, ತ್ರಷ್, ಟಿಟ್, ನಟ್ಹ್ಯಾಚ್, ವ್ಯಾಗ್ ಟೇಲ್, ಹೂವಿನ ಹಕ್ಕಿ, ಬಂಟಿಂಗ್, ಓರಿಯಲ್ ( ಕಾಮಾಲೆ ಹಕ್ಕಿ), ಮಿಂಚುಳ್ಳಿ, ಡ್ರೊಂಗೊ, ಬಿಳಿ ಪಾರಿವಾಳ, ಮರಕುಟುಕ, ಬಾತುಕೋಳಿ, ಟೀಲ್, ಗಿಡುಗ, ಕೊಕ್ಕರೆ, ಕಾರ್ಮೊರಂಟ್, ಡೇಗೆ ಹಕ್ಕಿ, ಬುಲ್ ಬುಲ್ ಮತ್ತು ನೊಣ ಹಿಡುಕಗಳಂತಹ ಪಕ್ಷಿಗಳು ಸೇರಿವೆ. ಇದರ ಜೊತೆಗೆ ಪ್ರವಾಸಿಗರು 51 ಬಗೆಯ ಕುರುಚಲು ಗಿಡಗಳನ್ನು, 30 ಬಗೆಯ ಬಿದಿರುಗಳನ್ನು ಮತ್ತು 110 ಬಗೆಯ ಮರಗಳನ್ನು ಈ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಬಹುದು.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ನೈಜತೆಯನ್ನು ಆಸ್ವಾದಿಸಲು ಬಯಸುವ ಪ್ರವಾಸಿಗರು ಇಲ್ಲಿಗೆ ಸಮೀಪದ ಧಿಕಲಗೆ ಭೇಟಿಕೊಡಬಹುದು. ಇದು ಪಾಟ್ಲಿ ಡುನ್ ಕಣಿವೆಯ ತುದಿಯಲ್ಲಿ ನೆಲೆಗೊಂಡಿದೆ. ಧಿಕಲವು ಇಡೀ ಕಣಿವೆಯ ವಿಹಂಗಮ ನೋಟವನ್ನು ಹಾಗು ಹಿನ್ನಲೆಯಲ್ಲಿ ಕಂಡದ ಪರ್ವತ ಶ್ರೇಣೀಯನ್ನು ಕಾಣಬಹುದು. ಧಿಕಲ ಚೌರ್ ನ ಅಸಂಖ್ಯಾತ ಕಾಲು ಹಾದಿಗಳ ಪ್ರಯಾಣವು ನಿಮಗೆ ಕಾಡಿನ ಆನೆಗಳನ್ನು, ಚಿತಲ್, ಕಡವೆ ಮತ್ತು ಅಸಂಖ್ಯಾತ ಪಕ್ಷಿ ಪ್ರಭೇದಗಳನ್ನು ನೋಡುವ ಭಾಗ್ಯವನ್ನು ಒದಗಿಸುತ್ತವೆ. ಅನುಭವಿ ಮಾರ್ಗದರ್ಶಿಗಳ ನೇತೃತ್ವದಲ್ಲಿ ಕೈಗೊಳ್ಳುವ ಚಾರಣಗಳು ಇಲ್ಲಿನ ಮತ್ತೊಂದು ಪ್ರಮುಖ ಚಟುವಟಿಕೆಯಾಗಿದೆ. ಈ ರಾಷ್ಟ್ರೀಯ ಉದ್ಯಾನವನದ ವಾಯುವ್ಯಕ್ಕೆ ನೆಲೆಗೊಂಡಿರುವ ಕಾಲಾಘಡ್ ಜಲಾಶಯವು ಇಲ್ಲಿನ ಮತ್ತೊಂದು ಪ್ರಸಿದ್ಧ ಸ್ಥಳವಾಗಿದೆ. ಈ ಸ್ಥಳವು ಪಕ್ಷಿ ವೀಕ್ಷಕರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ನೀರುಕೋಳಿ ಸೇರಿದಂತೆ ಹಲವಾರು ವಲಸೆ ಬಂದ ಹಕ್ಕಿಗಳನ್ನು ಕಾಣಬಹುದಾಗಿದೆ.
ಪ್ರವಾಸಿಗರು ಇಲ್ಲಿ ಕಾರ್ಬೆಟ್ ಜಲಪಾತವನ್ನು ಸಹ ನೋಡಬಹುದು. ಇದು ಸುಮಾರು 60 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಈ ಸ್ಥಳವು ಶಿಬಿರಗಳಿಗೆ ಮತ್ತು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಈ ರಾಷ್ಟ್ರೀಯ ಉದ್ಯಾನವನದ ಬಿಜ್ರಾನಿ ಮತ್ತು ಧಿಕಲ ಪ್ರಾಂತ್ಯದಲ್ಲಿ ಆನೆ ಸಫಾರಿಯು ಸಹ ಲಭಿಸುತ್ತದೆ. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಕೋಸಿ ನದಿಯು ರಾಫ್ಟಿಂಗ್ ಅವಕಾಶವನ್ನು ಒದಗಿಸುತ್ತದೆ. ಈ ಉದ್ಯಾನವನದಲ್ಲಿ ಹಲವಾರು ರೆಸಾರ್ಟುಗಳಿದ್ದು, ಪ್ರವಾಸಿಗರಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸುತ್ತವೆ. ಜೊತೆಗೆ ರಿವರ್ ರಾಫ್ಟಿಂಗ್ ಮತ್ತು ಕಾಡಿನಲ್ಲಿ ಜಂಗಲ್ ಸಫಾರಿ, ಜೀಪ್ ಸಫಾರಿಯಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶಗಳನ್ನು ಒದಗಿಸುತ್ತವೆ. ಇದಲ್ಲದೆ ಪ್ರವಾಸಿಗರು ಕೋಸಿ ನದಿಯಲ್ಲಿ ಮಹಶೀರ್ ಮೀನುಗಳನ್ನು ಹಿಡಿಯಲು ಸಹ ಹೋಗಬಹುದು. ಮೀನು ಹಿಡಿಯಲು ಇಲ್ಲಿ ಒಂದು ಸ್ಥಳವನ್ನು ನಿಗದಿಪಡಿಸಿದ್ದಾರೆ. ಹಲವು ರೆಸಾರ್ಟುಗಳು ಮೀನುಗಾರಿಕೆಗೆ ಬೇಕಾಗುವ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತವೆ.
ಕಾರ್ಬೆಟ್ ವಸ್ತುಸಂಗ್ರಹಾಲಯವು ಕಾಲಧುಂಗಿಯಲ್ಲಿ ನೆಲೆಗೊಂಡಿದ್ದು, ಪ್ರವಾಸಿಗರು ತಪ್ಪದೆ ನೋಡಬೇಕಾದ ಪ್ರವಾಸಿ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿದೆ. ಇದು ಬ್ರಿಟೀಷ್ ಬೇಟೆಗಾರನಾದ ಜಿಮ್ ಕಾರ್ಬೆಟ್ ವಾಸಿಸುತ್ತಿದ್ದ ಒಂದು ಪಾರಂಪರಿಕ ಬಂಗಲೆಯಾಗಿದೆ. ಈ ಬಂಗಲೆಯಲ್ಲಿ ಕೆಲವು ಅಪರೂಪದ ಛಾಯಾಚಿತ್ರಗಳು ಮತ್ತು ಜಿಮ್ ಕಾರ್ಬೆಟ್ರವರಿಗೆ ಸೇರಿದ ಕೆಲವು ವಸ್ತುಗಳನ್ನು ನಾವು ಕಾಣಬಹುದು. ಪ್ರವಾಸಿಗರು ಕುಮಾವೂನ್ ಪರ್ವತದ ತಪ್ಪಲಿನಲ್ಲಿರುವ ಕ್ಯಾರಿ ಶಿಬಿರದಲ್ಲಿ ಉಳಿದುಕೊಳ್ಳಬಹುದು. ಸೋನಾನದಿ ವನ್ಯಧಾಮವು ಏಶಿಯಾದ ಕಾಡಾನೆಗಳನ್ನು ಮತ್ತು ಹುಲಿಗಳನ್ನು ಅವುಗಳ ನೈಜ ವಾತಾವರಣದಲ್ಲಿ ನೋಡುವ ಅವಕಾಶವನ್ನು ಒದಗಿಸುತ್ತದೆ.
ರಾಮ್ ಗಂಗಾ ನದಿ, ಮಂಡಲ್ ನದಿ ಮತ್ತು ಸೋನಾನದಿಗಳು ಈ ರಾಷ್ಟ್ರೀಯ ಉದ್ಯಾನವನದ ಪರಿಸರದ ಮೇಲೆ ತಮ್ಮದೆ ಆದ ಪ್ರಭಾವವನ್ನು ಬೀರಿವೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ "ಸೊಟ್ಸ್"ಗಳನ್ನು ನೋಡಬಹುದು. ಸೋಟ್ಸ್ ಎಂದರೆ ಸ್ಥಳೀಯ ಭಾಷೆಯಲ್ಲಿ ಸೀಮಿತ ಋತುವಿನಲ್ಲಿ ಹರಿಯುವ ತೊರೆಗಳು ಎಂದರ್ಥ. ಸೀತಾಬನಿ ದೇವಾಲಯ ಮತ್ತು ರಾಮ್ನಗರ್ ಈ ಉದ್ಯಾನವನದಲ್ಲಿರುವ ಇನ್ನಿತರ ಪ್ರಮುಖ ಆಕರ್ಷಣೆಗಳಾಗಿವೆ. ಇವುಗಳೆಲ್ಲದರ ಹೊರತಾಗಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಉತ್ತಮವಾದ ವಿಮಾನ ಮಾರ್ಗ, ರೈಲು ಮಾರ್ಗ ಮತ್ತು ರಸ್ತೆ ಮಾರ್ಗಗಳನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಗೆ ಪ್ರವಾಸ ಹೋಗಲು ಬಯಸಿದರೆ ಬೇಸಿಗೆ ಮತ್ತು ಚಳಿಗಾಲಗಳು ಉತ್ತಮವಾಗಿವೆ.