ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ವನ ಭದ್ರಕಾಳಿ ಅಮ್ಮನ್ ದೇವಾಲಯವು ಮೇಟ್ಟುಪಾಳಯಂ ಬಳಿ ನೆಲೆಸಿದೆ. ಇದು ಭದ್ರಕಾಳಿಗಾಗಿ ನಿರ್ಮಿಸಲಾಗಿರುವ ದೇವಾಲಯವಾಗಿದೆ. ಈ ದೇವಾಲಯವು ಕೊಯಮತ್ತೂರಿನಿಂದ 53 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
ದಂತ ಕತೆಗಳ ಪ್ರಕಾರ ಪಾಗಸುರನ್ ಎಂಬ ರಾಕ್ಷಸನು ಈ ದೇವಾಲಯದ ಪಶ್ಚಿಮ ಭಾಗದಲ್ಲಿ ನೆಲೆಸಿದ್ದನಂತೆ. ಅವನು ಈ ಇಡೀ ಪ್ರಾಂತ್ಯದಲ್ಲಿಯೇ ಅತ್ಯಂತ ಭಯ ಭೀತಿಯನ್ನು ಸೃಷ್ಟಿಸಿ ಜನರಿಗೆ ಕಂಟಕನಾಗಿದ್ದನಂತೆ. ಇವನ ಉಪಟಳವನ್ನು ತಾಳಲಾರದ ಜನರು ಪಾಂಡವರಲ್ಲಿ ಒಬ್ಬನಾದ ಭೀಮನ ಬಳಿ ಹೋಗಿ ಇವನ ಅಂತ್ಯವನ್ನು ಮಾಡುವಂತೆ ಕೋರಿಕೊಂಡರಂತೆ. ಈ ರಾಕ್ಷಸನನ್ನು ಸಂಹರಿಸಲು ಭೀಮನು ಕಾಳಿ ದೇವಿಯನ್ನು ಪ್ರಾರ್ಥಿಸಿ, ರಾಕ್ಷಸ ಸಂಹಾರಕ್ಕೆ ಬೇಕಾದ ಶಕ್ತಿಯನ್ನು ಸಂಪಾದಿಸಿದನಂತೆ. ನಂತರ ಭೀಮನು ಆ ರಾಕ್ಷಸನೊಂದಿಗೆ ಯುದ್ಧ ಮಾಡಿದನಂತೆ. ಈ ಹೋರಾಟವು ಹಲವು ಗಂಟೆಗಳವರೆಗೆ ನಡೆಯಿತಂತೆ. ಕೊನೆಗೆ ಭೀಮನು ಆ ರಾಕ್ಷಸನ ಸಂಹಾರ ಮಾಡಿದನಂತೆ.
ಮರಣ ಶಯ್ಯೆಯಲ್ಲಿರುವಾಗ ಈ ರಾಕ್ಷಸನು ಕಾಳಿ ದೇವಿಯನ್ನು ತನ್ನೆಲ್ಲ ತಪ್ಪುಗಳನ್ನು ಮನ್ನಿಸುವಂತೆ ಕೋರಿಕೊಂಡನಂತೆ. ಆಗ ಅವನ ಪಶ್ಚಾತ್ತಾಪ ಕಂಡು ದೇವಿಯು ಅವನನ್ನು ದೇವಾಲಯದ ಕಾವಲ್ ಭೂದಂ ಅಥವಾ ಕಾವಲು ಭೂತವಾಗಿ ಪರಿವರ್ತಿಸಿದಳಂತೆ. ಇಲ್ಲಿಗೆ ಆಗಮಿಸುವ ಭಕ್ತಾಧಿಗಳು ಕೇವಲ ಕಾಳಿ ಮಾತೆಯನ್ನಷ್ಟೇ ಅಲ್ಲದೆ, ಭೀಮ ಮತ್ತು ಪಾಗಸುರನ್ರವರನ್ನು ಸಹ ಇಲ್ಲಿ ಪೂಜಿಸುತ್ತಾರೆ.