ಕರಮಡೈ ರಂಗನಾಥ ದೇವಾಲಯವು ಕೊಯಮತ್ತೂರ್ ನಗರದಿಂದ 30 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮೇಟ್ಟುಪಾಳಯಂ ಹೆದ್ದಾರಿಯಲ್ಲಿ ಕಾಣಸಿಗುವ ಈ ದೇವಾಲಯಕ್ಕೆ ತಲುಪುವುದು ಸುಲಭ. ಈ ದೇವಾಲಯವು ನೀಲ ವರ್ಣದ ಬೆಟ್ಟಗಳ ಹಿನ್ನಲೆಯಲ್ಲಿ ಅದ್ಭುತವಾಗಿ ಕಂಗೊಳಿಸುತ್ತದೆ. ಈ ದೇವಾಲಯವನ್ನು ತಿರುಮಲೈ ನಾಯಕರ್ ನಿರ್ಮಿಸಿದನು. ಅಸಂಖ್ಯಾತ ಗೋಡೆಗಳು ಮತ್ತು ಮಂಟಪಗಳನ್ನು ಈ ದೇವಾಲಯದಲ್ಲಿ ನಾವು ಕಾಣಬಹುದು. ನಂಬಿಕೆಗಳ ಪ್ರಕಾರ ಕರಿಕಾಲ ಚೋಳನ್ ಮತ್ತು ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ರವರು ಈ ದೇವಾಲಾಯದ ಉನ್ನತಿಗಾಗಿ ದೇಣಿಗೆಗಳನ್ನು ನೀಡಿದರೆಂದು ನಂಬಲಾಗುತ್ತದೆ.
ಸ್ಥಳೀಯ ದಂತ ಕತೆಗಳ ಪ್ರಕಾರ ಬ್ರಿಟೀಷ್ ಇಂಜಿನಿಯರ್ ಒಬ್ಬರು ಈ ದೇವಾಲಯವನ್ನು ಒಡೆದು ರೈಲು ಹಾದಿಯನ್ನು ನಿರ್ಮಾಣ ಮಾಡಬೇಕೆಂದು ಕಾರ್ಯ ಆರಂಭಿಸಿದನಂತೆ. ಇದರಿಂದ ಅಸಂತುಷ್ಟರಾದ ಸ್ಥಳೀಯರು ಮತ್ತು ಭಕ್ತಾಧಿಗಳು ರಂಗನಾಥ ಸ್ವಾಮಿಗೆ ತಮ್ಮ ಅಳಲನ್ನು ತೋಡಿಕೊಂಡು ಭಕ್ತಿಯಿಂದ ಪ್ರಾರ್ಥಿಸಿದರಂತೆ. ಆಗ ರಂಗನಾಥ ಸ್ವಾಮಿಯು ದೇವಾಲಯವನ್ನು ಒಡೆಯಲು ಬಯಸಿದ್ದ ಇಂಜಿನಿಯರನ ಕನಸಿನಲ್ಲಿ ಬಿಳಿಯ ಕುದುರೆ ಮೇಲೆ ಕಾಣಿಸಿಕೊಂಡನಂತೆ. ಆಗ ಇಂಜಿನಿಯರ್ ತನ್ನ ಯೋಜನೆಯನ್ನು ಕೈಬಿಟ್ಟು ಸ್ವಾಮಿಯ ಸೇವಾರ್ಥವಾಗಿ ಒಂದು ಮರದಲ್ಲಿ ತಯಾರಿಸಿದ ಬಿಳಿಯ ಕುದುರೆಯನ್ನು ನಿರ್ಮಿಸಿ ದೇವಾಲಯಕ್ಕೆ ನೀಡಿದನಂತೆ. ಅದು ಈ ದೇವಾಲಯದ ಹೊರಭಾಗದಲ್ಲಿದೆ.