ಭಾರತದ ಅತ್ಯಂತ ಪೂರ್ವಭಾಗದಲ್ಲಿರುವ ಪುಟ್ಟರಾಜ್ಯವಾದ ಮಣಿಪುರದ ಅತಿದೊಡ್ಡ ಜಿಲ್ಲೆ ಚುರಾಚಂದ್ಪೂರ್. ಮಣಿಪುರದ ರಾಜಧಾನಿ ಇಂಫಾಲದಿಂದ 59 ಕಿ.ಮೀ ದೂರವಿರುವ ಇದೇ ಹೆಸರಿನ ನಗರ ಜಿಲ್ಲಾಕೇಂದ್ರವೂ ಹೌದು. ಸ್ಥಳೀಯವಾಗಿ " ಲಮ್ಕಾ" (ಲಮ್ ಅಂದರೆ ರಸ್ತೆ ಕಾ ಅಂದರೆ ರಸ್ತೆಗಳು ಕೂಡುವ ಸ್ಥಳ) ಎಂದು ಕರೆಯಲ್ಪಡುವ ಈ ನಗರ ಹರಿದ್ವರ್ಣದ ಬೆಟ್ಟಗುಡ್ಡಗಳಿಂದ, ಆಳವಾದ ಕಣಿವೆಗಳಿಂದ ಸುತ್ತುವರೆದಿದೆ. ಸಮುದ್ರಮಟ್ಟದಿಂದ 915 ಮೀಟರ್ ಎತ್ತರವಿರುವ ಈ ಸ್ಥಳ ಭಾರತದ ಪ್ರಮುಖ ಗಿರಿಧಾಮವಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಬಾಂಬ್ ಧಾಳಿಗೆ ತುತ್ತಾಗಿ ಹೆಚ್ಚೂ ಕಡಿಮೆ ನೆಲಸಮವಾದ ಬಳಿಕ ಸುಮಾರು ಐವತ್ತು ವರ್ಷಗಳವರೆಗೆ ಹೆಚ್ಚಿನ ಅಭಿವೃದ್ದಿಯನ್ನೇ ಕಾಣಲಿಲ್ಲ. ಆದರೆ 70-80ನೇ ದಶಕದಲ್ಲಿ ಪ್ರಾರಂಭವಾದ ವಾಣಿಜ್ಯ ವಹಿವಾಟುಗಳು ನಗರದ ಹಣೆಬರಹವನ್ನೇ ಬದಲಾಯಿಸಿತು. ಇಂಫಾಲದ ಬಳಿಕ ಮಣಿಪುರದ ಎರಡನೇ ದೊಡ್ಡ ಪಟ್ಟಣವಾದರೂ ಚುರಾಚಂದ್ಪೂರ್ ನಲ್ಲಿ ಅತಿಹೆಚ್ಚಿನ ಮೊತ್ತದ ವಾಣಿಜ್ಯ ವಹಿವಾಟು ನಡೆಯುತ್ತದೆ. ಅಂತೆಯೇ ಇಲ್ಲಿ ಆಗಮಿಸಿದ ದೇಶದ ವಿಭಿನ್ನ ಸಂಸ್ಕೃತಿಯ, ವಿವಿಧ ಧರ್ಮಗಳ, ವಿವಿಧ ಭಾಗಗಳಿಂದ ಆಗಮಿಸಿದ ಜನರು ಇಲ್ಲಿ ನೆಲೆಸಿ ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದಾರೆ. ಇಂದು ನಗರದಲ್ಲಿ ಪ್ರವಾಸಿಗರಿಗಾಗಿ ಹಲವಾರು ಹೋಟೆಲುಗಳು ಮತ್ತು ಆಧುನಿಕ ಸೌಕರ್ಯಗಳು ಲಭ್ಯವಿವೆ.
ಜನತೆ ಮತ್ತು ಜೀವನ;
ಮಹಾಯುದ್ದಕ್ಕೂ ಮುನ್ನ ಚುರಾಚಂದ್ಪುರ್ ಕೆಲವು ಹಳ್ಳಿಗಳ ಒಂದು ಸಮೂಹವಾಗಿತ್ತು. ಕೃಷಿಯೇ ಜೀವನದ ಮೂಲಾಧಾರವಾಗಿತ್ತು. ಆದರೆ ಇಂದು ಕೃಷಿ ಜೀವಂತವಾಗಿದ್ದರೂ ನಗರಕ್ಕೆ ಪ್ರಮುಖ ಆದಾಯವಿರುವುದು ಇಲ್ಲಿನ ವಾಣಿಜ್ಯ ವಹಿವಾಟುಗಳಿಂದ. ನೇಯ್ಗೆ ಮತ್ತು ಪಶುಸಂಗೋಪನೆ ಇಲ್ಲಿನ ಇತರ ಪ್ರಮುಖ ಚಟುವಟಿಕೆಗಳು. ಹಲವು ಬುಡಕಟ್ಟು ಜನಾಂಗಳಾದ ಸಿಮ್ಟೆ, ಪಾಯ್ಟೆ, ಗ್ಯಾಂಗ್ಟೆ, ಹಮಾರ್, ಝೌ, ವಾಯ್ಫೇಯಿ, ಟೆಡಿಮ್ ಚಿನ್, ಥಾಡೌ, ಮೀಝೋ, ಕೋಮ್ ಹಾಗೂ ಚಿನ್-ಕುಕಿ-ಮಿಜ಼ೋ-ಜ಼ೋಂ ಜನಾಂಗಗಳು ಇಂದಿಗೂ ಅಸ್ತಿತ್ವದಲ್ಲಿದ್ದು ಒಂದೇ ಪ್ರದೇಶದಲ್ಲಿ ವಾಸಿಸುತ್ತಿರುವುದು ವಿಶೇಷವಾಗಿದೆ. ಪ್ರತಿ ಬುಡಕಟ್ಟಿಗೂ ಒಂದು ಗ್ರಾಮವಿದ್ದು, ಒಬ್ಬ ನಾಯಕನ ನಾಯಕತ್ವ ಹಾಗೂ ಪ್ರತ್ಯೇಕ ಕಾನೂನುಗಳಿವೆ. ವಾಣಿಜ್ಯಕೇಂದ್ರವಾದ ಬಳಿಕ ನಗರಕ್ಕೆ ಆಗಮಿಸಿದ ಕ್ರೈಸ್ತ ಮಿಷನರಿಗಳ ಮೂಲಕ ಹಲವು ಬುಡಕಟ್ಟು ಜನಾಂಗದ ಜನರು ಕ್ರೈಸ್ತರಾಗಿ ಪರಿವರ್ತಿತರಾಗಿದ್ದಾರೆ. ಈ ಮಿಷನರಿಗಳು ಪ್ರಾರಂಭಿಸಿದ ಆಂಗ್ಲ ಮಾಧ್ಯಮ ಶಾಲೆಗಳ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ದೊರಕಿದೆ. ನಗರದಲ್ಲಿ ಇಂದಿಗೂ ಬುಡಕಟ್ಟು ಜನಾಂಗದವರು ತಮ್ಮೊಂದಿಗೆ ಹಲವು ಸಂಸ್ಕೃತಿಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಅವರಿಂದ ತಯಾರಾದ ಕಲಾಕೃತಿಗಳು ನಗರದಲ್ಲಿ ಯಥೇಚ್ಛವಾಗಿ ದೊರಕುತ್ತವೆ.