ರಾಜಸ್ಥಾನದ ಚಿತ್ತೋರಗಢವು ಸುಮಾರು 700 ಎಕರೆಯಷ್ಟು ವಿಶಾಲವಾಗಿದೆ. ಇದು ಗಮನಾರ್ಹ ಕೋಟೆಗಳು, ದೇವಸ್ಥಾನಗಳು, ಗೋಪುರಗಳು ಮತ್ತು ಅರಮನೆಗಳಿಗೆ ಜನಪ್ರಿಯವಾಗಿದೆ.
ಪುರಾಣದಲ್ಲಿ ಚಿತ್ತೋರಗಢ
ಭಾರತದ ಇತಿಹಾಸದಲ್ಲಿ ಚಿತ್ತೋರಗಢಕ್ಕೆ ಮಹತ್ವದ ಸ್ಥಾನವಿದೆ. ಜಾನಪದ ಕಥೆಗಳ ಪ್ರಕಾರ ಪಾಂಡವರಲ್ಲೊಬ್ಬನಾದ ಭೀಮ, ಮಹರ್ಷಿಗಳಲ್ಲಿ ಧ್ಯಾನವನ್ನು ಕಲಿಯಲೆಂದು ಈ ಪ್ರದೇಶಕ್ಕೆ ಬಂದಿದ್ದನಂತೆ. ಆದರೆ ಭೀಮನಲ್ಲಿ ಸಹನೆ ಇಲ್ಲದ್ದರಿಂದ ಕಲಿಯಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಾದ ಭೀಮ, ಕಾಲಿನಿಂದ ಭೂಮಿಯನ್ನು ಗುದ್ದಿದನಂತೆ. ಹೀಗೆ ಗುದ್ದಿದ ರಭಸಕ್ಕೆ ಇಲ್ಲೊಂದು ಕೆರೆಯೇ ಉದ್ಭವಿಸಿತು, ಇದನ್ನು ಈಗ ಭೀಮ್ ಲಾತ್ ಎಂದು ಕರೆಯಲಾಗುತ್ತಿದೆ.
ಚಿತ್ತೋರಗಢದ ಸುತ್ತಮುತ್ತ
ನಗರದ ಪ್ರಮುಖ ಆಕರ್ಷಣೆಯೆಂದರೆ ಚಿತ್ತೋರಗಢ ಕೋಟೆ. ಇದು ಸುಮಾರು 180 ಮೀಟರು ಎತ್ತರದಲ್ಲಿದೆ. ಕೋಟೆಯಲ್ಲಿ ಹಲವಾರು ಸ್ಮಾರಕಗಳಿವೆ. ಪ್ರತಿಯೊಂದು ಸ್ಮಾರಕಕ್ಕೂ ಒಂದು ಐತಿಹ್ಯವಿದೆ. ಫತೇಹ್ ಪ್ರಕಾಶ ಅರಮನೆಯು ಮಹಾರಾಣ ಫತೇಹ್ ಸಿಂಗ್ರಿಂದ ನಿರ್ಮಾಣಗೊಂಡಿತು. ಇದು ಸುಂದರವಾದ ಐತಿಹಾಸಿಕ ತಾಣ. ಅರಮನೆಯ ಒಳಗೆ ಗಣೇಶನ ಸುಂದರವಾದ ಮೂರ್ತಿಯನ್ನು ನೋಡಬಹುದು. ದೊಡ್ಡದಾದ ಕಾರಂಜಿ ಮತ್ತು ಸುಂದರವಾದ ಶಿಲಾಚಿತ್ರಗಳನ್ನೂ ಕೂಡಾ ನೋಡಬಹುದು. ಜೊತೆಗೆ, ಇಲ್ಲಿ ಹಲವು ಧಾರ್ಮಿಕ ಕೇಂದ್ರಗಳೂ ಇವೆ, ಅವುಗಳಲ್ಲಿ ಪ್ರಮುಖವಾದದ್ದೆಂದರೆ ಸಂವಾರಿಯಾಜಿ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನ, ಜೋಗ್ನಿಯಾ ಮಾತಾಜಿ ದೇವಸ್ಥಾನ ಮತ್ತು ಮಾತ್ರಿ ಕುಂಡಿಯಾ ದೇವಸ್ಥಾನ.
ಸಂಪೂರ್ಣವಾಗಿ ಪರಿಸರವನ್ನು ನೋಡಬೇಕೆಂದರೆ ಪ್ರವಾಸಿಗರು ಬಸ್ಸಿ ವನ್ಯಧಾಮಕ್ಕೆ ಭೇಟಿ ನೀಡಬಹುದು. ಇದು ಸುಮಾರು 50 ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ. ಸೀತಾಮಾತಾ ವನ್ಯಧಾಮ ಮತ್ತು ಭೈನ್ಸ್ರೋರ್ಗಾಹ್ ವನ್ಯಧಾಮವೂ ಕೂಡಾ ಪ್ರವಾಸಿಗರಿಗೆ ಅತ್ಯಂತ ಇಷ್ಟವಾಗುವ ಪ್ರದೇಶ. ನಗರದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯಬಯಸುವ ಪ್ರವಾಸಿಗರು ಆರ್ಕಿಯಲಾಜಿಕಲ್ ಮ್ಯೂಸಿಯಂನ್ನು ಭೇಟಿ ನೀಡಬಹುದು. ಇಲ್ಲಿ ಸುಂದರವಾದ ಕಲಾಕೃತಿಗಳು, ಅಪರೂಪದ ಪೇಂಟಿಂಗ್ಗಳು, ಮೂರ್ತಿಗಳು ಮತ್ತು ಪುರಾತನ ಕಾಲದ ಚಿತ್ರಗಳಿವೆ. ಮ್ಯೂಸಿಯಂನಲ್ಲಿರುವ ಕೆಲವು ಕಲಾಕೃತಿಗಳು ಗುಪ್ತ ಮತ್ತು ಮೌರ್ಯರ ಕಾಲದ್ದು.
ಸಮಯ ಸಿಕ್ಕಲ್ಲಿ, ಪ್ರವಾಸಿಗರು ಬಿಜೈಪುರದಲ್ಲಿರುವ ಹಳೆಯ ಕೋಟೆಗೆ ಭೇಟಿ ನೀಡಬಹುದು. ಇದನ್ನು ಈಗ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಡಿಯೋಗ್ರಾನಲ್ಲಿರುವ 16 ನೇ ಶತಮಾನದ ಕೋಟೆಯು ಪ್ರತಾಪಗಢದ ಸಮೀಪವಿದೆ. ಇದು ಪ್ರಮುಖವಾದ ಪ್ರವಾಸಿ ತಾಣ. ಈ ಪ್ರದೇಶವು ಹಲವು ದೇವಸ್ಥಾನ ಮತ್ತು ಅರಮನೆಗಳಿಗೆ ಪ್ರಸಿದ್ಧವಾಗಿದೆ.
ಮೆನಾಲ್, ಒಂದು ಸಣ್ಣ ಪಟ್ಟಣ. ಚಿತ್ತೋರಗಢದಿಂದ 90 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಅರಮನೆಯು ಮಿನಿ ಖುಜರಾಹೋ ಎಂದೇ ಪ್ರಸಿದ್ಧ. ಖುಜರಾಹೋದ ಶೈಲಿಯಲ್ಲೇ ಇಲ್ಲಿನ ವಾಸ್ತುಶಿಲ್ಪವಿದೆ. ಈ ಅರಮನೆಯಲ್ಲಿ, ಉತ್ಖನನದ ನಂತರ ಹಲವು ಬೌದ್ಧ ದೇವಾಲಯಗಳ ಅವಶೇಷಗಳು ಸಿಕ್ಕಿವೆ. ಅವುಗಳಲ್ಲಿ 12 ನೇ ಶತಮನಾದ ದೇವಸ್ಥಾನವು ಪ್ರಮುಖವಾದದ್ದು. ಈ ಪ್ರದೇಶವು ಸುಂದರ ನೋಟದಿಂದಾಗಿ ಪ್ರಮುಖ ಪ್ರವಾಸಿತಾಣವಾಗಿದೆ.
ಇದರ ಜೊತೆಗೆ, ಪ್ರವಾಸಿಗರು ಗೋಮುಖ ಕುಂಡಕ್ಕೂ ಭೇಟಿ ನೀಡಲು ಯೋಜಿಸಬಹುದು. ಇದು ಗೋವಿನ ಮುಖದ ರಚನೆಯನ್ನು ಹೊಂದಿದೆ. ಇದಕ್ಕೆ ಸಮೀಪದಲ್ಲೇ ಇರುವ ರಾಣಿ ಬಿಂದಾರ್ ನಾಲೆಯೂ ಕೂಡಾ ಪ್ರಮುಖ ಪ್ರವಾಸಿ ತಾಣ.
ಚಿತ್ತೋರಗಢಕ್ಕೆ ಹೋಗುವುದು
ಚಿತ್ತೋರಗಢದ ಸಮೀಪದಲ್ಲಿರುವ ವಿಮಾನ ನಿಲ್ದಾಣವು ಡಬೋಕ್ ವಿಮಾನ ನಿಲ್ದಾಣ, ಇದನ್ನು ಮಹಾರಾಣ ಪ್ರತಾಪ್ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಇದು ಚಿತ್ತೋರಗಢದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಚಿತ್ತೋರಗಢದ ರೈಲ್ವೆ ನಿಲ್ದಾಣವು ಅಜ್ಮೇರ್, ಜೈಪುರ, ಉದಯಪುರ, ಕೋಟಾ ಮತ್ತು ನವದೆಹಲಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಸರ್ಕಾರಿ ಮತ್ತು ಖಾಸಗಿ ಬಸ್ಗಳ ಮೂಲಕ ಚಿತ್ತೋರಗಢಕ್ಕೆ ಸುಲಭವಾಗಿ ತಲುಪಬಹುದು.
ಚಿತ್ತೋರಗಢದ ವಾತಾವರಣ
ಬೇಸಿಗೆಕಾಲದಲ್ಲಿ ಈ ಪ್ರದೇಶದ ವಾತಾವರಣವು ಅತ್ಯಂತ ಉಷ್ಣವಾಗಿರುತ್ತದೆ. ತಾಪಮಾನವು ಈ ಅವಧಿಯಲ್ಲಿ 44 ಡಿಗ್ರಿ ಇರುತ್ತದೆ. ಮಳೆಗಾಲದಲ್ಲಿ ವಾತಾವರಣವು ತೇವವಾಗಿರುತ್ತದೆ ಮತ್ತು ಮಧ್ಯಮ ಪ್ರಮಾಣದಲ್ಲಿ ಮಳೆಯಾಗುತ್ತದೆ. ಪ್ರತಿವರ್ಷ ಮಧ್ಯಮ ಪ್ರಮಾಣದಲ್ಲಿ ಮಳೆಯನ್ನು ಕಾಣುತ್ತದೆ, ಅಂದರೆ ಸುಮಾರು 69 ಸೆಂ.ಮೀಯಿಂದ 80 ಸೆಂ.ಮೀ ತನಕ ಮಳೆಯಾಗುತ್ತದೆ. ಚಿತ್ತೋರಗಢಕ್ಕೆ ಪ್ರವಾಸ ಮಾಡಲು ಉತ್ತಮ ವಾತಾವರಣವು ಚಳಿಗಾಲ. ಈ ಅವಧಿಯಲ್ಲಿ ತಾಪಮಾನವು 11 ಡಿಗ್ರಿಯಿಂದ 28 ಡಿಗ್ರಿ ಇರುತ್ತದೆ.