ಚಿದಂಬರಂ ತಮಿಳುನಾಡು ರಾಜ್ಯದ ಕಡಲೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ದೇವಾಲಯನಗರಿಯಾಗಿದೆ. ಇದು ತನ್ನಲ್ಲಿರುವ ಸುಂದರವಾದ ದ್ರಾವಿಡ ಶೈಲಿಯವಾಸ್ತುಶಿಲ್ಪವನ್ನು ಮತ್ತು ಎದ್ದು ಕಾಣುವಂತಹ ಗೋಪುರಗಳನ್ನು ಹೊಂದಿರುವ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಮುಂಜಾನೆ ಎದ್ದೊಡನೆ ಕೇಳುವ ದೇಗುಲಗಳ ಘಂಟಾ ನಿನಾದ, ಪರಿಶುದ್ಧವಾದ ಫಿಲ್ಟರ್ ಕಾಫಿಯ ಜೊತೆಗೆ ಚಿದಂಬರಂನಲ್ಲಿರುವ ಪ್ರತಿಯೊಂದು ಅಂಶವು ಸಹ ತಮಿಳುನಾಡಿನ ತಾಜಾತನವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ.
ಈ ದೇಗುಲಗಳ ನಗರಿಯನ್ನು ನೆನೆದೊಡನೆ ಹಲವಾರು ಅಂಶಗಳು ಕಣ್ಮುಂದೆ ಬರುತ್ತವೆ. ಅದರಲ್ಲಿಯೂ ಚಿದಂಬರಂನ ನಟರಾಜ ದೇವಾಲಯವು ಇಲ್ಲಿನ ಪ್ರಸಿದ್ಧ ದೇವಾಲಯವಾಗಿದೆ. ಈ ಶಿವನ ದೇವಾಲಯವು ಶೈವರ ಪಾಲಿಗೆ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವು ತಮಿಳುನಾಡಿನಲ್ಲಿರುವ ಪಂಚಭೂತ ಸ್ಥಳಗಳಲ್ಲಿ ( ವಾಯು,ಪೃಥ್ವಿ,ಜಲ,ಅಗ್ನಿ ಮತ್ತು ಅಪ್ಪು) ಒಂದಾಗಿದೆ. ಇಲ್ಲಿ ಕಾಳಹಸ್ತಿನಾಥರ್ ದೇವಾಲಯವು ಅಪ್ಪುವನ್ನು, ತಿರುವಣ್ಣಾಮಲೈ ಅರುಣಾಚಲೇಶ್ವರ ಅಗ್ನಿಯನ್ನು, ಕಂಚಿ ಏಕಾಂಬರೇಶ್ವರ ದೇವಾಲಯವು ಪೃಥ್ವಿಯನ್ನು ಮತ್ತು ತಿರುವನೈಕಾವಲ್ ಜಂಬುಕೇಶ್ವರ ದೇವಾಲಯವು ಜಲವನ್ನು ಪ್ರತಿನಿಧಿಸುತ್ತದೆ.
ಈ ದೇವಾಲಯವು ಶಿವನನ್ನು "ನಟರಾಜ"ನ ರೂಪದಲ್ಲಿ ಪೂಜಿಸಲ್ಪಡುವ ಏಕೈಕ ದೇವಾಲಯವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಕುತೂಹಲಕಾರಿ ವಿಚಾರವೆಂದರೆ ಶಿವನನ್ನು ಇತರೆಡೆಗಳಲ್ಲಿ "ಶಿವಲಿಂಗ"ದ ರೂಪದಲ್ಲಿ ಪೂಜಿಸಿದರೆ ಇಲ್ಲಿ ನಟರಾಜನ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ಶಿವನನ್ನು ಮತ್ತು ಮಹಾವಿಷ್ಣು ಇಬ್ಬರನ್ನು ಪೂಜಿಸುವ ಕೆಲವೇ ಕೆಲವು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಮಹಾವಿಷ್ಣುವನ್ನು ಗೋವಿಂದರಾಜ ಪೆರುಮಾಳ್ ಎಂಬ ರೂಪದಲ್ಲಿ ಪೂಜಿಸಲಾಗುತ್ತದೆ. ಅದೇ ಸಂಕೀರ್ಣದಲ್ಲಿ ಚಿದಂಬರಂ ನಟರಾಜ ದೇವಾಲಯವು ಸಹ ನೆಲೆಗೊಂಡಿದೆ. ಇಲ್ಲಿ ಶೈವರು ಮತ್ತು ವೈಷ್ಣವರು ಇಬ್ಬರು ಪೂಜೆ ಸಲ್ಲಿಸುವುದು ವಿಶೇಷ. ವಿಶ್ವದ ಯಾವುದೇ ಭಾಗದಲ್ಲಿ ಈ ಇಬ್ಬರು ದೇವರುಗಳನ್ನು ಒಂದೇ ಸ್ಥಳದಲ್ಲಿ ಪೂಜಿಸುವ ಪರಿಪಾಠವಿಲ್ಲ.
ದೇವಾಲಯಗಳ ಮತ್ತು ಶಿಕ್ಷಣ ಸಂಸ್ಥೆಗಳ ಪಟ್ಟಣ
ಚಿದಂಬರಂ ಕೇವಲ ಚಿದಂಬರಂ ನಟರಾಜ ದೇವಾಲಯಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ. ಅದರ ಜೊತೆಗೆ ಇಲ್ಲಿ ಹಲವಾರು ದೇವಾಲಯಗಳು ಇಲ್ಲಿ ನೆಲೆಗೊಂಡಿವೆ. ಇವುಗಳು ತಮ್ಮ ಗಾತ್ರ , ಕಾಲಗಳಿಂದಾಗಿ ವಿಭಿನ್ನತೆಯನ್ನು ತಮ್ಮಲ್ಲಿ ಒಳಗೊಂಡಿವೆ. ಇಲ್ಲಿನ ಚಿದಂಬರಂ ನಟರಾಜ ದೇವಾಲಯದ ಜೊತೆಗೆ ಹಲವಾರು ದೇವಾಲಯಗಳು ಹಲವಾರು ಪುನರ್ ನಿರ್ಮಾಣಗಳನ್ನು ಮತ್ತು ನವೀಕರಣಗಳನ್ನು ಕಂಡಿವೆ. ಇದು ಅಣ್ಣಾಮಲೈ ವಿಶ್ವವಿದ್ಯಾನಿಲಯದ ತವರೂರು ಸಹ ಹೌದು. ಇದು ದೇಶದ ಅತ್ಯಂತ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಈ ವಿವಿಗೆ ಹಲವಾರು ಕಾಲೇಜುಗಳು ಸಂಯೋಜನೆಗೊಂಡಿವೆ. ಈ ಪಟ್ಟಣವು ಆಭರಣ ತಯಾರಿಕೆಯ ಉದ್ಯಮವನ್ನು ಸಹ ಹೊಂದಿದೆ. ಇಲ್ಲಿನ ಹಲವಾರು ತಲೆಮಾರುಗಳು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತಯಾರಿಸುವ ಕಲೆಯನ್ನು ಮುಂದಿನ ತಲೆಮಾರಿಗೆ ಬಳುವಳಿಯಾಗಿ ನೀಡುತ್ತ ಬಂದಿವೆ.
ಈ ಪಟ್ಟಣವು ಕೈಗಾರಿಕಾ ನಗರವಾದ ನೈವೇಲಿಗೆ ಸಮೀಪದಲ್ಲಿ ನೆಲೆಗೊಂಡಿದೆ. ಇಲ್ಲಿನ ಲಿಗ್ನೈಟ್ ಗಣಿಗಳು ಮತ್ತು ಶಾಖೋತ್ಪನ್ನ ಸ್ಥಾವರಗಳು ಹಲವರಿಗೆ ಉದ್ಯೋಗಾವಕಾಶವನ್ನು ಒದಗಿಸಿವೆ. ಇವು ಚಿದಂಬರಂನಿಂದ ಕೇವಲ 30 ಕಿ.ಮೀ ದೂರದಲ್ಲಿ ನೆಲೆಗೊಂಡಿವೆ.
ಚಿದಂಬರಂಗೆ ವರ್ಷದ ಯಾವುದೇ ಭಾಗದಲ್ಲಿ ಹವಾಮಾನದ ಕುರಿತಾಗಿ ಚಿಂತಿಸದೆ ಭೇಟಿ ನೀಡಬಹುದಾದ ನಗರವಾಗಿದೆ. ಅದೂ ಬೇಸಿಗೆ ಕಾಲವಾಗಲಿ ಅಥವಾ ಚಳಿಗಾಲವಾಗಲಿ ಚಿದಂಬರಂ ತನ್ನ ನೈಜ ಸೌಂದರ್ಯವನ್ನು ಸದಾ ಪ್ರವಾಸಿಗರಿಗೆ ತೆರೆದಿಡುತ್ತದೆ. ಆದರೂ ಸಹ ಈ ಪಟ್ಟಣಕ್ಕೆ ಉಷ್ಣಾಂಶವು ಕಡಿಮೆ ಇರುವ ಸಮಯದಲ್ಲಿ ಭೇಟಿ ನೀಡುವುದು ಉತ್ತಮ.
ಚಿದಂಬರಂಗೆ ತಮಿಳು ನಾಡಿನ ಎಲ್ಲಾಭಾಗಗಳಿಂದ ರಸ್ತೆ ಸಂಪರ್ಕವಿದೆ. ಇದು ಚೆನ್ನೈಗೆ ಸಮೀಪವಿರುವುದರಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲಕರವಾಗಿರುತ್ತದೆ. ಚಿದಂಬರಂ ಶಾಪ್ಪಿಂಗ್ ಮಾಡುವವರಿಗೆ ವಿಪುಲವಾದ ಅವಕಾಶಗಳನ್ನು ತೆರೆದಿಡುತ್ತದೆ. ಅದರಲ್ಲೂ ಈ ನಗರವು ದೇಶೀಯ ಕರಕುಶಲ ವಸ್ತುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ನೀವು ಖರೀದಿಸುವ ವಸ್ತುವು ಇತಿಹಾಸದ ಮತ್ತು ಪರಂಪರೆಯ ಒಂದು ತುಣುಕಾಗಿರುತ್ತದೆ. ಇಂತಹ ವಿಶೇಷತೆಯು ನಿಮಗೆ ವಿಶ್ವದ ಯಾವುದೇ ಭಾಗದಲ್ಲಿ ದೊರೆಯುವುದಿಲ್ಲ. ಈ ಕೊಳ್ಳುವ ಪ್ರಕ್ರಿಯೆಯಲ್ಲಿ ನೀವು ಸಹ ಸಂಸ್ಕೃತಿಯ ಒಂದು ಭಾಗವಾಗಿ ಹೋಗುತ್ತೀರಿ. ನೀವು ಚಿದಂಬರಂನಲ್ಲಿ ಅಲಂಕಾರಿಕ ವಸ್ತುಗಳಿಗಾಗಿ ಹುಡುಕಾಡಬೇಡಿ. ಬದಲಿಗೆ ಯಾವುದೇ ಹೋಲಿಕೆಗೆ ನಿಲುಕದ ಕಲಾವಸ್ತುಗಳನ್ನು ಕೊಂಡು ಕೊಳ್ಳಿ.