ಚೆನ್ನೈನ ಪಶ್ಚಿಮ ಭಾಗದಲ್ಲಿ ನೆಲೆಸಿರುವ ತಿರುವೆರ್ಕಾಡು ಎಂಬ ಸ್ಥಳದಲ್ಲಿ ನೆಲೆಸಿದೆ ದೇವಿ ಕುಮಾರಿಅಮ್ಮನ್ ದೇವಾಲಯ. ತಮಿಳು ಭಾಷೆಯಲ್ಲಿ ತಿರುವೆರ್ಕಾಡು ಎಂಬ ಶಬ್ದದ ಅರ್ಥ ಪವಿತ್ರ ಗಿಡ ಮೂಲಿಕೆಗಳ ಕಾಡು ಎಂದಾಗುತ್ತದೆ. ಅದಲ್ಲದೆ ಹಿಂದೆ ಈ ಪ್ರದೇಶದ ಸುತ್ತಮುತ್ತಲಿರುವ ಕಾಡು ತನ್ನಲ್ಲಿದ್ದ ಔಷಧೀಯ ಗುಣಗಳ ಗಿಡ ಮೂಲಿಕೆಗಳಿಂದಾಗಿ ಹೆಸರುವಾಸಿಯಾಗಿತ್ತು ಎಂದು ನಂಬಲಾಗುತ್ತದೆ. ಸಾಕಷ್ಟು ಜನರು ಔಷಧೀಯ ಸಸ್ಯಗಳನ್ನು ಸಂಗ್ರಹಿಸಲು ತಿರುವೆರ್ಕಾಡು ಕಾಡಿಗೆ ಭೇಟಿ ನೀಡುತ್ತಾರೆ. ಆದರೆ ಇಂದು ಈ ಪ್ರದೇಶವು ದೇವಿ ಕುಮಾರಿಅಮ್ಮನ್ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ.
ಹಳೆಯ ದಂತಕಥೆಯೊಂದರ ಪ್ರಕಾರ, ಒಂದೊಮ್ಮೆ ಕುಮಾರಿಅಮ್ಮನ್ ದೇವಿಯು ವೃದ್ಧ ಅಲೆಮಾರಿಯ ವೇಷ ಧರಿಸಿ ಸೂರ್ಯ ದೇವನ ಭವಿಷ್ಯ ನುಡಿಯಲು ತೆರಳಿದಳು. ಸೂರ್ಯ ದೇವನು ಆ ವೃದ್ಧೆಯ ನೈಜತ್ವವನ್ನು ತಿಳಿಯಲಾರದೆ ಅವಳಿಗೆ ಸಿಗಬೇಕಾಗಿದ್ದ ಗೌರವವನ್ನು ಸಲ್ಲಿಸಲಿಲ್ಲ. ಇದರಿಂದ ಕುಪಿತಳಾದ ದೇವಿಯು ಆ ಕ್ಷಣವೆ ಅಲ್ಲಿಂದ ತೆರಳಿದಳು. ಅವಳು ತೆರಳುತ್ತಿದ್ದ ಹಾಗೆಯೆ ಸೂರ್ಯದೇವ ತನ್ನ ಪ್ರಕಾಶತ್ವವನ್ನು ಕಳೆದುಕೊಂಡು, ಭೂಮಿಯಲ್ಲಿ ಕತ್ತಲೆ ಆವರಿಸಿತು. ಇಷ್ಟಾದ ಮೇಲೆ ಸೂರ್ಯದೇವನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ, ದೇವಿಯ ಮುಂದೆ ಬಂದು ನಿಂತು ಕ್ಷಮೆಯನ್ನು ಬೇಡಿದನು. ಅಲ್ಲದೆ ವಾರದ ಪ್ರತಿ ಏಳನೇಯ ದಿನವನ್ನು ದೇವಿಕುಮಾರಿ ದಿನವನ್ನಾಗಿ ಆಚರಿಸುವುದಾಗಿಯೂ, ವರ್ಷದಲ್ಲಿ ಎರಡು ಬಾರಿ ಸೂರ್ಯ ರಷ್ಮಿಯು ದೇವಿಯ ವಿಗ್ರಹದ ಮೇಲೆ ಬೀಳುವದಾಗಿಯೂ ಎಂಬ ಕೋರಿಕೆಗಳನ್ನು ಮುಂದಿಟ್ಟು ಅದಕ್ಕೆ ಅನುಮತಿಯನ್ನು ನೀಡಬೇಕೆಂದು ಪ್ರಾರ್ಥಿಸಿದನು. ಅಂದಿನಿಂದಲೂ ಇಲ್ಲಿ ವಾರದ ಪ್ರತಿ ರವಿವಾರವನ್ನು ದೇವಿಕುಮಾರಿ ದಿನವನ್ನಾಗಿ ಆಚರಿಸಲಾಗುತ್ತಿದೆ ಮತ್ತು ವರ್ಷದಲ್ಲಿ ಎರಡು ಬಾರಿ ಸೂರ್ಯ ರಷ್ಮಿಯು ದೇವಿಯ ವಿಗ್ರಹದ ಮೇಲೆ ಬೀಳುತ್ತದೆ. ಆ ಎರಡು ತಿಂಗಳುಗಳೆಂದರೆ ಪಂಗುನಿ(ಫಾಲ್ಗುಣ) ಹಾಗು ಪುರಟ್ಟಾಸಿ(ಭಾದೃಪದ).