ಸಮುದ್ರ ಮಟ್ಟದಿಂದ ಸುಮಾರು 1615 ಮೀ ಎತ್ತರದಲ್ಲಿರುವ ಚಂಪಾವತ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. 1997 ರಲ್ಲಿ ಉತ್ತರಾಖಂಡದ ಒಂದು ಪ್ರತ್ಯೇಕ ಜಿಲ್ಲೆಯಾಗಿ ವಿಂಗಡಿಸಲಾದ ಇದು ಇಲ್ಲಿರುವ ದೇವಾಲಯಗಳು ಮತ್ತು ಅತ್ಯದ್ಭುತವಾದ ಪ್ರಕೃತಿ ಸೌಂದರ್ಯದಿಂದ ಪ್ರಸಿದ್ಧವಾಗಿದೆ. ಇದು 1613 ಚದರ ಕಿಲೋಮಿಟರ್ ವಿಸ್ತಾರವಾಗಿದ್ದು ನೇಪಾಳ, ಉಧಮ್ ಸಿಂಗ್ ನಗರ್, ನೈನಿತಾಲ್ ಜಿಲ್ಲೆ ಮತ್ತು ಅಲ್ಮೋರಾ ಜಿಲ್ಲೆಯೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ. ದಾಖಲೆಗಳ ಪ್ರಕಾರ, ಈ ಜಿಲ್ಲೆ ಚಂದ ರಾಜವಂಶದ ರಾಜಧಾನಿ ನಗರ ಆಗಿತ್ತು.
ಇದರ ಹೆಸರು ರಾಜ ಅರ್ಜುನನ ಮಗಳಾದ ಚಂಪಾವತಿಯಿಂದ ವ್ಯುತ್ಪತ್ತಿಯಾಗಿದೆ. ಇಲ್ಲಿನ ಜನರು ಹೇಳುವಂತೆ ವಿಷ್ಣುವಿನ ಕೂರ್ಮಾವತಾರ ಇಲ್ಲೇ ಆಗಿತ್ತು. ಪ್ರಸಿದ್ಧ ಪ್ರಕೃತಿವಾದಿ ಮತ್ತು ಬ್ರಿಟೀಷ್ ಬೇಟೆಗಾರ ಜಿಮ್ ಕಾರ್ಬೆಟ್ ಇಲ್ಲಿ ಹುಲಿಗಳನ್ನು ಬೇಟೆಯಾಡಿದ ನಂತರ ಈ ಸ್ಥಳ ಪ್ರಸಿದ್ಧವಾಯಿತು. ಅವನ ಪ್ರಸಿದ್ಧ ಪುಸ್ತಕ 'ಮ್ಯಾನ್ ಇಟರ್ಸ್ ಆಫ್ ಕುಮಾವೂನ್' ನಲ್ಲಿ ಆತ ಹುಲಿ ಬೇಟೆಯ ಬಗ್ಗೆ ವಿವರವಾಗಿ ಬರೆದಿದ್ದಾನೆ.
ಕ್ರಾಂತೇಶ್ವರ ಮಹಾದೇವ ದೇವಾಲಯ, ಬಲೇಶ್ವರ ದೇವಸ್ಥಾನ, ಪೂರ್ಣಗಿರಿ ದೇವಾಲಯ, ಗ್ವಾಲ್ ದೇವತಾ, ಆದಿತ್ಯ ದೇವಾಲಯ, ಚೌಮು ದೇವಾಲಯ ಮತ್ತು ಪತಾಲ್ ರುದ್ರೇಶ್ವರ ದೇವಾಲಯ ಇಲ್ಲಿನ ಕೆಲವು ಪ್ರಸಿದ್ಧವಾದ ದೇವಾಲಯಗಳಾಗಿವೆ. ಇಲ್ಲಿನ ನಾಗನಾಥ್ ದೇವಸ್ಥಾನ ಹಳೆಯ ಕಾಲದ ಕುಮಾವೂನ್ ಪ್ರದೇಶ ಹೇಗಿತ್ತು ಎಂಬ ಬಗ್ಗೆ ಸುಂದರವಾಗಿ ಚಿತ್ರಿಸುತ್ತದೆ. ಇದರ ಜೊತೆಗೆ ಇಲ್ಲಿ ಪ್ರವಾಸಿಗಳು ‘ಏಕ್ ಹಾಥಿಯಾ ಕಾ ನೌಲಾ’ ದ ಸುಂದರ ಕೆತ್ತನೆಯನ್ನು ಕಾಣಬಹುದಾಗಿದೆ. ಇದನ್ನು ಕೇವಲ ಒಂದೇ ರಾತ್ರಿಯಲ್ಲಿ ಕಟ್ಟಲಾಗಿದೆ ಎಂಬ ಕಥೆ ಇಲ್ಲಿ ಪ್ರಚಲಿತದಲ್ಲಿದೆ. ಮಾಯಾವತಿ ಆಶ್ರಮ ಇಲ್ಲಿನ ಇನ್ನೊಂದು ಆಕರ್ಷಣೆ. ಇದು ಸಮುದ್ರ ಮಟ್ಟದಿಂದ 1940 ಮೀ ಎತ್ತರದಲ್ಲಿದೆ.
ಇಲ್ಲಿಂದ ಕೇವಲ 14 ಕಿ.ಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಲೋಹಾಘಾಟ್ ಗೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ಇದನ್ನು ಪಿ.ಬಾರನ್ ಅವರು ಕಾಶ್ಮೀರದ ನಂತರದ ಸ್ವರ್ಗ ಎಂದು ಕರೆದಿದ್ದಾರೆ. ಇದು ಹಲವಾರು ಹಳೆಯ ಕಾಲದ ದೇವಾಲಯಗಳಿಂದ ಕೂಡಿದೆ. ಇಲ್ಲಿನ ಬರಾಹಿ ದೇವಾಲಯ ಬಂಗವಾಲ್ ಉತ್ಸವಕ್ಕಾಗಿ ಪ್ರಸಿದ್ದವಾಗಿದೆ. ಈ ಉತ್ಸವ ರಕ್ಷಾ ಬಂಧನದ ಸಮಯದಲ್ಲಿ ನಡೆಯುತ್ತದೆ. ಈ ದೇವಾಲಯ ದೇವಿರುರಾಹ್ ನಲ್ಲಿ ಇದ್ದು, ಇದು ಲೋಹಘಾಟ್ ನಿಂದ 45 ಕಿ.ಮೀ ದೂರದಲ್ಲಿದೆ. ಲೋಹಘಾಟ್ ನಲ್ಲಿರುವ ಇನ್ನೊಂದು ಪ್ರಖ್ಯಾತ ಸ್ಥಳ ಖಡಿ ಬಜಾರ್. ಹೆಸರೇ ಹೇಳುವಂತೆ ಇಲ್ಲಿ ಖರೀದಿಗಾಗಿ ಜನ ಮುಗಿಬಿದ್ದು ಬರುತ್ತಾರೆ. ಇಲ್ಲೇ ಸಮೀಪದಲ್ಲಿ ಬಾಣಾಸುರ್ ಕಾ ಕಿಲಾ ಕೂಡ ಇದೆ. ಸ್ಥಳೀಯರ ನಂಬಿಕೆಯಂತೆ ಬಾಣಾಸುರ ಎಂಬ ರಾಕ್ಷಸನನ್ನು ಹಿಂದೂ ದೇವತೆ ಕೃಷ್ಣ ಈ ಸ್ಥಳದಲ್ಲಿ ಕೊಂದಿದ್ದನು. ಈ ಕೋಟೆಯನ್ನು ಮಧ್ಯಯುಗದಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ.
ಚಂಪಾವತ್ ಚಾರಣ ಪ್ರಿಯರಿಗೂ ಹೇಳಿ ಮಾಡಿಸಿದ ತಾಣ. ಪಂಚೇಶ್ವರ, ಲೋಹಾಘಾಟ್, ವನ್ಸೂರ್, ಟಂಕಾಪುರ್, ವ್ಯಾಸ್ಥುರಾ, ಪೂರ್ಣಗಿರಿ ಮತ್ತು ಕಾಂತೇಶ್ವರ ಮಂಚ್ ನಿಂದ ಚಂಪಾವತ್ ಗೆ ಚಾರಣ ಮಾರ್ಗಗಳಿವೆ. ಪ್ರವಾಸಿಗರು ಚಂಪಾವತ್ ಅನ್ನು ಪಿಥೋರಾಗಡದ ನೈನಿ ಸೈನಿ ವಿಮಾನ ನಿಲ್ದಾಣ ಅಥವಾ ಪಂತನಗರ್ ವಿಮಾನ ನಿಲ್ದಾಣದಿಂದ ಟಾಕ್ಸಿಯ ಮೂಲಕ ತಲುಪಬಹುದು. ಇಲ್ಲಿಗೆ ಅತ್ಯಂತ ಸಮೀಪವಿರುವ ರೈಲ್ವೆ ನಿಲ್ದಾಣ ಕಥ್ಗೊಡಂ ರೈಲ್ವೆ ನಿಲ್ದಾಣ. ಈ ರೈಲ್ವೆ ನಿಲ್ದಾಣದಿಂದ ಕ್ಯಾಬ್ ಗಳು ಲಭ್ಯವಿವೆ. ಇಲ್ಲೇ ಸಮೀಪವಿರುವ ಸ್ಥಳಗಳಿಂದ ಬಸ್ ಸೌಲಭ್ಯಗಳೂ ಇವೆ.
ಬೇಸಿಗೆ ಮತ್ತು ಚಳಿಗಾಲ ಚಂಪಾವತ್ ಭೇಟಿಗೆ ಅತ್ಯಂತ ಸೂಕ್ತವಾದ ಸಮಯವಾಗಿದೆ.