ಬೈಂದೂರ ಪಟ್ಟಣವು ಸುಂದರ ಸಮುದ್ರತೀರ ನಯನ ಮನೋಹರ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ದೃಶ್ಯಗಳಿಂದ ಪ್ರಸಿದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಪಟ್ಟಣ ಬಳಿ ಇರುವ ಬೈಂದೂರ ನಗರವು ಇಲ್ಲಿರುವ ಸೋಮೇಶ್ವರ ದೇವಸ್ಥಾನದಿಂದಲೂ ಹೆಸರಾಗಿದೆ.
ಶಿವನು ಉದ್ಭವಿಸಿದ ಪುಣ್ಯಸ್ಥಳವೆಂದು ಪ್ರತೀತಿ ಹೊಂದಿರುವ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ಶಿಲಾಮೂರ್ತಿಯನ್ನು ಪೂಜಿಸಲಾಗುತ್ತಿದೆ. ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಬೈಂದೂರು ನಗರವು ತೀರ ನಗರವೆಂದೇ ಕರೆಯಲ್ಪಡುತ್ತದೆ.
ಏನೇನು ನೋಡಬಹುದು?
ಬೈಂದೂರು ಹತ್ತಿರದ ಗುಡ್ಡದಲ್ಲಿ ಬೈಂದು ಎಂಬ ಸಂತನು ತಪಸ್ಸಿಗೆ ಕುಳಿತಿದ್ದನೆಂಬ ಪ್ರತೀತಿ ಇದೆ. ಇದರಿಂದಲೇ ಈ ನಗರಕ್ಕೆ ಬೈಂದೂರು ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಒತ್ತಿನೇನಿ ಎಂಬ ಹೆಸರಿನ ಗುಡ್ಡದಿಂದ ಇಡೀ ಬೈಂದೂರು ನಗರವನ್ನು ನಾವು ನೋಡಬಹುದಾಗಿದೆ. ಅಲ್ಲದೇ ಈ ಸುಂದರ ಸಮುದ್ರತೀರ, ಸೂರ್ಯೋದಯ, ಸೂರ್ಯಾಸ್ತವನ್ನು ನೋಡಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪ್ರವಾಸಿಗರು ಬೈಂದೂರಿಗೆ ಸಮೀಪವಿರುವ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಾದ ಕೊಲ್ಲೂರು ಶ್ರೀ ಮೂಕಾಂಬಿಕೆ, ಮರವಂತೆ, ಮುರ್ಡೇಶ್ವರ ಮತ್ತಿತರೆಡೆ ಹೋಗಬಹುದು. ಮುರ್ಡೇಶ್ವರ ದೇವಸ್ಥಾನವು ಅರಬ್ಬೀ ಸಮುದ್ರದಿಂದ ಸುತ್ತುವರಿದಿದ್ದರೆ, ಮರವಂತೆಯಲ್ಲಿ ಸುಂದರ ಬೀಚ್ ಇದೆ.
ಸಮುದ್ರ ತೀರದಲ್ಲಿರುವುದರಿಂದ ಇಲ್ಲಿನ ಹವಾಮಾನವು ಹೆಚ್ಚಿನ ತಾಪಮಾನದಾಗಿದ್ದರೂ, ಅಗಸ್ಟ್ ನಿಂದ ಮಾರ್ಚ್ ತಿಂಗಳಿನ ಅವಧಿಯಲ್ಲಿ ಇಲ್ಲಿ ಭೇಟಿ ನೀಡಬಹುದಾಗಿದೆ. ಕೊಂಕಣ ರೈಲು ಮಾರ್ಗ ಬೈಂದೂರು ನಗರದಿಂದಲೇ ಹಾಯ್ದು ಹೋಗಿದೆ. ಬೆಂಗಳೂರಿನಿಂದ 480 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಮತ್ತು ಮಂಗಳೂರುಗಳಿಂದ ಖಾಸಗಿ ಬಸ್ ಗಳು ಬೈಂದೂರಿಗೆ ಸಂಚರಿಸುತ್ತವೆ.