ಬಿಳಿಗಿರಿರಂಗನ ಬೆಟ್ಟದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿರುವ ವನ್ಯಜೀವಿ ನಿಸರ್ಗಧಾಮ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಇರುವ ಈ ಬೆಟ್ಟವು ತುಂಗಭದ್ರಾ ಮತ್ತು ಕಾವೇರಿ ನದಿಗಳಿಂದ ಆವೃತ್ತವಾಗಿದೆ. ಸುಮಾರು 540 ಕಿ.ಮೀ. ವ್ಯಾಪ್ತಿಯ ವಿಸ್ತೀರ್ಣ ಹೊಂದಿರುವ ಈ ನಿಸರ್ಗಧಾಮ, ಸಮುದ್ರಮಟ್ಟದಿಂದ 5,091 ರಷ್ಟು ಎತ್ತರದಲ್ಲಿದೆ.ಬಿಳಿಗಿರಿರಂಗನ ಬೆಟ್ಟವನ್ನು 1972 ರಲ್ಲಿ ಸಂರಕ್ಷಿತ ಅರಣ್ಯವೆಂದು ಘೋಷಿಸಲಾಯಿತು. ಈ ಅರಣ್ಯದಲ್ಲಿ ಅನೇಕ ವಿಧದ ಗಿಡ,ಮರಗಳು, ವಿವಿಧ ಪ್ರಾಣಿ ಪಕ್ಷಿ ಸಂಕುಲಗಳನ್ನು ನೋಡಬಹುದು. ಕಾಡಾನೆ, ಜಿಂಕೆ,ಹುಲಿ, ಚಿರತೆ, ಕಾಡುಕೋಲಿ, ಕಾಡೆಮ್ಮೆ ಸೇರಿದಂತೆ ಅನೇಕ ಪ್ರಾಣಿಸಂಕುಲಗಳಿಗೆ ಆಶ್ರಯ ನೀಡಿದೆ. 116 ಕ್ಕೂ ಹೆಚ್ಚು ತಳಿಯ ಪಾತರಗಿತ್ತಿ, 22 ಕ್ಕೂ ಹೆಚ್ಚು ಬಗೆಯ ಹಾವುಗಳು ಇಲ್ಲಿ ನೆಲೆಸಿವೆ.ಸುಮಾರು 225 ತಳಿಯ ವಿವಿಧ ಪಕ್ಷಿಸಂಕುಲಗಳನ್ನು ಇಲ್ಲಿನ ಅರಣ್ಯದಲ್ಲಿ ಕಾಣಬಹುದು. ಕೋಗಿಲೆ, ಬುಲ್ ಬುಲ್, ಗೂಗೆ, ಕಾಡು ಕೋಳಿ, ಮೈನಾ, ಗಿಳಿ ಮುಂತಾದ ಪಕ್ಷಿಗಳು ಇಲ್ಲಿವೆ. ಈ ಬೆಟ್ಟವು ದಟ್ಟವಾದ ಅರಣ್ಯ, ವಿಶಾಲವಾದ ಮೈದಾನ, ಸುಂದರ ಕಣಿವೆಗಳು ಹಾಗೂ ನದಿ ದಂಡೆಗಳಲ್ಲಿ ಎಲ್ಲ ಪ್ರಾಣಿಗಳು ನೆಲೆಸಲು ಅನುಕೂಲಕರವಾಗಿವೆ.ಈ ಕಾಡಿನಲ್ಲಿ ಜೀಪ್ ಮೂಲಕ ಮತ್ತು ಆನೆ ಮೇಲಿಂದ ಸಫಾರಿ ಮಾಡಬಹುದಾಗಿದೆ. ಅಲ್ಲದೇ ಇಲ್ಲಿ ಪ್ರಕೃತಿಯ ನೋಟ ಸವಿಯುದರೊಂದಿಗೆ ಮೀನುಗಾರಿಕೆ, ಟ್ರೆಕ್ಕಿಂಗ್, ಬೋಟಿಂಗ್ ಹಾಗೂ ಇನ್ನಿತರ ಸಾಹಸಕ್ರೀಡೆಗಳನ್ನೂ ಪ್ರವಾಸಿಗರು ಇಲ್ಲಿ ಆನಂದಿಸಬಹುದು. ಈ ಪ್ರದೇಶಕ್ಕೆ ಅಕ್ಟೋಬರ್ ನಿಂದ ಮೇ ತಿಂಗಳಿನಲ್ಲಿ ಪ್ರವಾಸಿಗರು ಬರಬಹುದು. ಬೆಟ್ಟದ ಮೇಲಿರುವ ಬಿಳಿಗಿರಿ ರಂಗಸ್ವಾಮಿಯ ದೇವಸ್ಥಾನದಲ್ಲಿರುವ ಮೂರ್ತಿಯು ವೆಂಕಟೇಶ್ವರನ ಅವತಾರವೆಂದೇ ನಂಬಲಾಗಿದೆ. ಪತ್ರಿನಿತ್ಯ ಪೂಜೆ ನೆರವೇರುವ ಈ ದೇವಸ್ಥಾನದಲ್ಲಿ ಶುಕ್ರವಾರದಂದುವಿಶೇಷ ಪೂಜೆ ನಡೆಯುತ್ತದೆ. ಈ ದೇವಸ್ಥಾನದಲ್ಲಿ ಪ್ರತಿವರ್ಷ ಏಪ್ರಿಲ್ ಜರುಗುವ ರಥಯಾತ್ರೆಗೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ರಂಗಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ.