ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಬರುವ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸುಂದರ ದೇವಸ್ಥಾನ ನೋಡಲು ಹಲವಾರು ಪ್ರವಾಸಿಗರು ಬರುತ್ತಾರೆ. ಈ ಪ್ರದೇಶವು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಮಧ್ಯ ಇರುವುದರಿಂದ ಮಹತ್ವದ ಪ್ರಾಕೃತಿಕ ಹಿನ್ನೆಲೆಯನ್ನೂ ಕೂಡ ಹೊಂದಿದೆ.
ಈ ಬೆಟ್ಟದಲ್ಲಿ ರಂಗಸ್ವಾಮಿಯ ದೇವಸ್ಥಾನವಿದ್ದು ಇದು ಬಿಳಿ ಗುಡ್ಡದ ಮೇಲಿದೆ. ಆದ್ದರಿಂದಲೇ ಇದನ್ನು ಬಿಳಿಗಿರಿ ರಂಗನ ಬೆಟ್ಟ ಎಂದು ಕರೆಯುತ್ತಾರೆ. ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬಿಳಿಗಿರಿ ರಂಗನ ಬೆಟ್ಟವು ಕರ್ನಾಟಕದ ಆಗ್ನೇಯ ಪ್ರದೇಶದಲ್ಲಿದೆ. ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಈ ಬೆಟ್ಟವು ಮಹತ್ವದ ದೈವಿಕ ಸ್ಥಾನವೂ ಆಗಿದೆ. ಕಾರಣ ಹಲವಾರು ಭಕ್ತರು ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದು ರಂಗಸ್ವಾಮಿಯ ದರ್ಶನಕ್ಕಾಗಿ ಆಗಮಿಸುತ್ತಾರೆ.
ಬೆಟ್ಟದ ಮೇಲಿರುವ ದೇವಸ್ಥಾನ
ರಂಗನಾಯಕಿಯೊಂದಿಗೆ ರಂಗಸ್ವಾಮಿ ಮೂರ್ತಿಯು ನಿಂತ ಭಂಗಿಯಲ್ಲಿ ಈ ದೇವಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ಜಾತ್ರೆ ಮತ್ತು ವಿವಿಧ ಧಾರ್ಮಿಕ ಕಾರ್ಯಗಳು ಈ ಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗುತ್ತವೆ. ಈ ಸಮಯದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರೂ ಕೂಡ ಇಲ್ಲಿಗೆ ಬರುತ್ತಾರೆ.
ಇಲ್ಲಿ ಬಿಳಿಗಿರಿರಂಗ ವನ್ಯಜೀವಿ ನಿಸರ್ಗಧಾಮವೂ ಇದ್ದು ಪ್ರವಾಸಿಗರು ಇಲ್ಲಿ ಸುಂದರ ಕಾಡಿನ ಪರಿಸರದಲ್ಲಿ ಪ್ರವಾಸದ ಮಜ ಅನುಭವಿಸಬಹುದು. ಇತ್ತೀಚೆಗೆ ಘೋಷಿಸಲಾದ ಈ ನಿಸರ್ಗಧಾಮವು ಸುಮಾರು 539 ಸ್ಕೇ.ಕಿ.ಮೀ. ನಷ್ಟು ವಿಸ್ತೀರ್ಣ ಹೊಂದಿದ್ದು, ಸಮುದ್ರ ಮಟ್ಟದಿಂದ 5091 ಅಡಿಗಳಷ್ಟು ಎತ್ತರವಿದೆ.
ವನ್ಯಜೀವ ವೈವಿಧ್ಯತೆಯನ್ನು ಹೊಂದಿದ ಪ್ರದೇಶ
ಈ ಬೆಟ್ಟದಲ್ಲಿ ಹಲವಾರು ವನಸ್ಪತಿ ಗಿಡಗಳು, ಹಣ್ಣು,ಹಂಪಲುಗಳ ಗಿಡಗಳಿವೆ. ಈ ಕಾರಣದಿಂದಲೇ ವಿವಿಧ ಬಗೆಯ ಪ್ರಾಣಿ, ಪಕ್ಷಿಗಳು ಇಲ್ಲಿ ನೆಲೆಸಿವೆ. ತಮಿಳುನಾಡಿನ ಸತ್ಯಮಂಗಲಂ ವನ್ಯಜೀವಿ ನಿಸರ್ಗಧಾಮವೂ ಬಿಳಿಗಿರಿರಂಗನ ಬೆಟ್ಟಕ್ಕೆ ಹೊಂದಿಕೊಂಡಿದೆ.
ಬಿಳಿಗಿರಿರಂಗನ ಬೆಟ್ಟಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ಕರಡಿ, ಕಾಡೆಮ್ಮೆ,ಸಾಂಬಾರ, ಹುಲಿ, ಚಿರತೆ, ಕಾಡುನಾಯಿ, ಕಾಡಾನೆ ಸೇರಿದಂತೆ ಮುಂತಾದ ಪ್ರಾಣಿಗಳು ಇಲ್ಲಿ ನೆಲೆಸಿವೆ. ಅಲ್ಲದೇ ಸುಮಾರು 200 ಕ್ಕೂ ವಿವಿಧ ಬಗೆಯ ಪಕ್ಷಿಗಳ ತಳಿಗಳೂ ಕೂಡ ಇಲ್ಲಿವೆ.
ಸಾಹಸಕ್ಕಾಗಿ..
ಇನ್ನು ಸಾಹಸಕ್ರೀಡೆಗೆಂದೇ ಬರುವ ಸಾಹಸಪ್ರಿಯರಿಗೆ ಇಲ್ಲಿ ಚಾರಣ ಬಹಳ ಇಷ್ಟವಾಗುತ್ತದೆ. ಇಲ್ಲಿ ಕಾವೇರಿ ಮತ್ತು ಕಪಿಲಾ ನದಿ ನೀರಿನ ಸೆಳುವಿನಲ್ಲಿ ಸಾಹಸ ಜಲಕ್ರೀಡೆ, ಬೋಟಿಂಗ್, ಮೀನುಗಾರಿಕೆ ಕೂಡ ಮಾಡಬಹುದಾಗಿದ್ದರಿಂದ ಪ್ರವಾಸಿಗರಿಗೆ ಬಿಳಿಗಿರಿರಂಗನ ಬೆಟ್ಟ ಸಂತಸ ತರುತ್ತದೆ.
ಬಿಳಿಗಿರಿರಂಗನ ಬೆಟ್ಟಕ್ಕೆ ಬರುವವರಲ್ಲಿ ಭಕ್ತಾದಿಗಳು ಮತ್ತು ಬೆಟ್ಟದಲ್ಲಿ ಸುಂದರ ಕ್ಷಣಗಳನ್ನೂ ಕಳೆಯುವ ಪ್ರವಾಸಿಗರು ಬರುತ್ತಾರೆ.
ನೀವು ಇಲ್ಲಿರುವ ನಿಸರ್ಗಧಾಮ ನೋಡಲು ಬರುವವರಾಗಿದ್ದರೆ ಜೂನ್ ನಿಂದ ಅಕ್ಟೋಬರ್ ತಿಂಗಳಿನಲ್ಲಿ ಬರುವುದು ತುಂಬಾ ಒಳ್ಳೆಯದು.