ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ಐ.ಎನ್.ಎ ಸ್ಮಾರಕ ಭವನ. ಇದನ್ನು ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಹೆಸರಿಗೆ ಸಮರ್ಪಿಸಲಾಗಿದೆ. ಮಣಿಪುರದಲ್ಲಿರುವ ’ಮೊರಾಂಗ್’ ಪ್ರದೇಶವು, ಸುಭಾಷ್ಚಂದ್ರ ಬೋಸ್ ಅವರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿಯ ಕೇಂದ್ರ ಕಾರ್ಯಾಲಯವಾಗಿತ್ತು. ಆಜಾದ್ ಹಿಂದ್ ಫೌಜ್ ಮೊದಲಬಾರಿಗೆ ಭಾರತೀಯ ನೆಲದಲ್ಲಿ ತನ್ನ ಧ್ವಜವನ್ನು ಹಾರಿಸಿದಂತಹ ತಾಣ ಕೂಡಾ ಹೌದು. ಹೀಗಾಗಿ ಇದರ ಸವಿನೆನಪಿಗಾಗಿ ಈ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ. ಈ ಭವನವು ಒಂದು ಉತ್ತಮ ವಸ್ತುಸಂಗ್ರಹಾಲಯವನ್ನು ಹೊಂದಿದ್ದು, ಎರಡನೇ ವಿಶ್ವಯುದ್ಧ ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಭೀಕರ ಸನ್ನಿವೇಶಗಳಿಗೆ ಸಾಕ್ಷಿಯನ್ನು ಒದಗಿಸುತ್ತದೆ.
ಹಿಂದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳನ್ನು ಈ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಸುಭಾಷ್ಚಂದ್ರ ಬೋಸ್ ಅವರ ಕಂಚಿನ ಪ್ರತಿಮೆಯನ್ನು ಕೂಡಾ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹಗಲಿರುಳು ದಿಟ್ಟ ಹೋರಾಟ ನಡೆಸಿ, 1945 ರಲ್ಲಿ ವೀರಮರಣವನ್ನಪ್ಪಿದ ಸುಭಾಷ್ಚಂದ್ರ ಬೋಸ್ ಅವರ ಬ್ಯಾಡ್ಜ್ಗಳು, ಪತ್ರಗಳು, ಮತ್ತು ಅವರು ಬರೆದಂತಹ ಲೇಖನಗಳನ್ನು ನಾವು ಈ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ.
ಸಮಯದ ಹೊಡೆತಕ್ಕೆ ಸಿಲುಕಿ ಈ ಸ್ಮಾರಕ ಭವನವು ಇದೀಗ ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ ಈ ಅಪೂರ್ವ ತಾಣವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಸ್ಮಾರಕದ ಅಭಿವೃದ್ಧಿಗಾಗಿ ಹಲವಾರು ಅನುದಾನಗಳನ್ನು ಬಿಡುಗಡೆ ಮಾಡಿದೆ. ಶಿಥಿಲಾವಸ್ಥೆ ತಲುಪಿದ್ದರೂ ಕೂಡಾ ಪ್ರವಾಸಿಗರ ಭೇಟಿಗೆ ಏನೂ ಕೊರತೆಯಿಲ್ಲ. ಪ್ರವಾಸಿಗರು ಆರಾಮವಾಗಿ ಬಂದು, ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳ ಸಾಕ್ಷಿಗಳ ಪ್ರತಿರೂಪವಾದ ವಸ್ತುಸಂಗ್ರಹಾಲಯವನ್ನು ನೋಡಿ ಆನಂದಿಸಬಹುದು.