ಭಾರತವು ಅತ್ಯಂತ ಸಂಪದ್ಭರಿತ ನಾಡು. ಭಾರತದಲ್ಲಿರುವಷ್ಟು ನೈಸರ್ಗಿಕ ಸಂಪತ್ತನ್ನು, ಜೀವವೈವಿಧ್ಯತೆಯನ್ನು ಬಹುಶಃ ನಾವು ಪ್ರಪಂಚದ ಯಾವ ಭಾಗದಲ್ಲೂ ಕಾಣಲಾರೆವು. ಭಾರತದಲ್ಲಿರುವ ಪ್ರತಿಯೊಂದು ಮೂಲೆಯಲ್ಲೂ, ಪ್ರತಿ ರಾಜ್ಯಗಳು ಕೂಡಾ ಒಂದಿಲ್ಲೊಂದು ವಿಶಿಷ್ಟತೆಯನ್ನು ಹೊಂದಿವೆ. ಹೀಗೆ ತನ್ನಲ್ಲಿ ನೂರಾರು ವೈವಿಧ್ಯತೆಯನ್ನು ಹೊಂದಿ, ಭಾರತದ ನೈಸರ್ಗಿಕ ಸೌಂದರ್ಯವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಭಾರತದ ರಾಜ್ಯಗಳಲ್ಲಿ ಮಣಿಪುರ ಕೂಡಾ ಒಂದು. ಉತ್ತಮ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಮಣಿಪುರದಲ್ಲಿ ಮುಕುಟಪ್ರಾಯವಾಗಿ ನಮಗೆ ಗೋಚರಿಸುವುದೆಂದರೆ ’ಬಿಷ್ಣುಪುರ’.
’ಬಿಷ್ಣುಪುರವು ಮಣಿಪುರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ರಾಜಧಾನಿ ಎಂದೇ ಪ್ರಖ್ಯಾತಿ ಪಡೆದಿದೆ. ಮಣಿಪುರದ ರಾಜಕೀಯ, ವಾಣಿಜ್ಯ ರಾಜಧಾನಿಯಾದ ಇಂಫಾಲ್ನಿಂದ 27ಕಿ. ಮೀ ದೂರದಲ್ಲಿ ವಿರಾಜಮಾನವಾಗಿರುವುದೇ ಬಿಷ್ಣುಪುರ. ಮೊದಲಿಗೆ ಬಿಷ್ಣುಪುರವನ್ನು ’ಲುಮ್ಲಾಂಗ್ಡಂಗ್’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಬಿಷ್ಣುಪುರದ ಜಿಲ್ಲಾ ಕೇಂದ್ರ ಕೂಡಾ ಹೌದು. ಈ ಬಿಷ್ಣುಪುರ ಜಿಲ್ಲೆಯು ಉತ್ತರದಲ್ಲಿ ಸೇನಾಪತಿ ಮತ್ತು ಪಶ್ಚಿಮ ಇಂಫಾಲ್ ಜಿಲ್ಲೆಗಳ ಗಡಿಭಾಗವನ್ನು ಹೊಂದಿದ್ದರೆ, ಪಶ್ಚಿಮದಲ್ಲಿ ಚುರಾಚಂದ್ಪುರ್ ಜಿಲ್ಲೆಯಿಂದ ಸುತ್ತುವರಿಯಲ್ಪಟ್ಟಿದೆ. ಆಗ್ನೇಯ ಭಾಗದಿಂದ ಚಂಡೇಲ್ ಹಾಗೂ ಪೂರ್ವದಿಂದ ತೌಬಾಲ್ ಜಿಲ್ಲೆಗಳು ಬಿಷ್ಣುಪುರವನ್ನು ಸುತ್ತುವರೆದಿವೆ.
ಇನ್ನು ಪಟ್ಟಣದ ಮೂಲಕ ತಂಗ್ಜರೋಕ್ ಎನ್ನುವ ನದಿ ಕೂಡಾ ಹರಿಯುತ್ತಿದೆ. ಬಿಷೇನ್ಪುರ್ ಎನ್ನುವುದು ಬಿಷ್ಣುಪುರದ ಪರ್ಯಾಯ ನಾಮ. ಬಿಷ್ಣುಪುರವು ಶ್ರೀ ವಿಷ್ಣು ಭಗವಾನ್ ವಾಸವಾಗಿರುವ ತಾಣವೆಂದೇ ಪ್ರಸಿದ್ಧಿಯಾಗಿದೆ. ಹಲವಾರು ಗುಮ್ಮಟ ಶೈಲಿಯ ಸುಂದರ ಟೆರಕೋಟಾ ದೇವಾಲಯಗಳನ್ನು ಬಿಷ್ಣುಪುರವು ತನ್ನ ಒಡಲಿನಲ್ಲಿ ಹೊಂದಿದೆ. ಇಲ್ಲಿನ ಐತಿಹಾಸಿಕ ಚರಿತ್ರೆ ಕೂಡಾ ಬಹಳ ಕುತೂಹಲಕರವಾಗಿದೆ. ಈ ಪ್ರದೇಶಕ್ಕೆ ’ಬಿಷ್ಣುಪುರ’ ಎಂಬ ಹೆಸರು ಬರಲು ಕಾರಣವಾದ ಕತೆ ಬಹಳ ಆಸಕ್ತಿದಾಯಕವಾಗಿದೆ. ಕ್ರಿ.ಶ 1467ರ ಸುಮಾರಿಗೆ ಈ ಪ್ರದೇಶವನ್ನು ಆಳುತ್ತಿದ್ದಂತಹ ಖ್ಯಾಮರಾಜನು ಪಾಂಗ್ ರಾಜರೊಂದಿಗೆ ಉತ್ತಮ ಸಂಬಂಧವನ್ನು ಇರಿಸಿಕೊಂಡಿದ್ದ.
ಈ ಪಾಂಗ್ ರಾಜರ ಸಹಾಯದೊಂದಿಗೆ ಖ್ಯಾಮರಾಜನು ಶ್ಯಾನರ ಸಾಮ್ರಾಜ್ಯ ಖ್ಯಾಂಗ್ ಅನ್ನು ಗೆದ್ದನು. ಇದರಿಂದ ಸಂತುಷ್ಟನಾದ ಪಾಂಗ್ರಾಜನು ಖ್ಯಾಮರಾಜನಿಗೆ ವಿಷ್ಣುದೇವರ ಒಂದು ಪ್ರತಿಮೆಯನ್ನು ಉಡುಗೊರೆಯಾಗಿ ಕೊಟ್ಟನು. ಖ್ಯಾಮರಾಜನು ಈ ಪ್ರತಿಮೆಯನ್ನು ಲುಮ್ಲಾಂಗ್ಡಂಗ್ನಲ್ಲಿ ಇರಿಸಿ ಪೂಜಿಸಲಾರಂಭಿಸಿದ. ಇದರಿಂದಾಗಿ ಈ ಪ್ರದೇಶಕ್ಕೆ ’ವಿಷ್ಣುವಿನ ಪುರ ಅರ್ಥಾತ್ ಬಿಷ್ಣುಪುರ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.
ಇನ್ನು ಬಿಷ್ಣುಪುರದ ಪ್ರಮುಖ ಆಕರ್ಷಣೆಯೆಂದರೆ ಕೇವಲ ಮಣಿಪುರ ರಾಜ್ಯದಲ್ಲಿ ಮಾತ್ರ ಕಂಡುಬರುವಂತಹ ಸಾಂಗಾಯ್ ಜಿಂಕೆಗಳು. ಕುಣಿದಾಡುವ ಜಿಂಕೆಗಳೆಂದೇ ಪ್ರಸಿದ್ಧಿ ಪಡೆದಿರುವಂತಹ ಸಾಂಗಾಯ್ ಜಿಂಕೆಗಳ ತವರು ಬಿಷ್ಣುಪುರ. ಇಂದು ನಾವು ಎಲ್ಲಾದರೂ ಅಪರೂಪದ ಈ ಜಿಂಕೆಗಳ ಸಂತತಿಯನ್ನು ನೋಡಬಹುದೆಂದರೆ ಅದು ಬಿಷ್ಣುಪುರದಲ್ಲಿ ಮಾತ್ರ. ಇಲ್ಲಿರುವ ಲೋಕ್ತಾಕ್ ಸರೋವರದ ಆಸುಪಾಸಿನ ತಾಣಗಳೇ ಈ ಮುಗ್ಧ ಜೀವಿಗಳ ಆಶ್ರಯಧಾಮ. ಕೇವಲ ಇಷ್ಟು ಮಾತ್ರವಲ್ಲದೆ ಉತ್ತಮ ಜೀವಸಂಕುಲ, ಪವಿತ್ರ ನದಿಗಳು, ಪ್ರಾಕೃತಿಕ ತಾಣಗಳ ಮೂಲಕ ಬಿಷ್ಣುಪುರ ವಿಶ್ವವಿಖ್ಯಾತಿಯನ್ನು ಪಡೆದಿದೆ.
ಬಿಷ್ಣುಪುರದ ಸಂಸ್ಕೃತಿ ಮತ್ತು ಜನತೆ
ಮಣಿಪುರವು ಉತ್ತಮ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವಂತಹ ರಾಜ್ಯ. ತನ್ನದೇ ಆದ ಪರಂಪರೆ, ಸಂಸ್ಕೃತಿ, ಇತಿಹಾಸದ ಮೂಲಕ ಮಣಿಪುರವು ಪ್ರಸಿದ್ಧಿಯಾಗಿದೆ. ಹಲವಾರು ಜನಾಂಗಗಳ, ಸಮುದಾಯಗಳ ಜನರನ್ನು ನಾವು ಬಿಷ್ಣುಪುರದಲ್ಲಿ ಕಾಣಬಹುದು. ಇಲ್ಲಿ ಪ್ರಮುಖವಾಗಿ ಕಂಡುಬರುವ ಸಮುದಾಯವೆಂದರೆ ’ಮೇಟಿ’ ಸಮುದಾಯ. ಈ ಸಮುದಾಯವು ಅತ್ಯಂತ ನೈತಿಕ ಸಮುದಾಯವೆಂದೇ ಇವರು ಪ್ರಸಿದ್ಧಿ ಪಡೆದಿದ್ದಾರೆ. ಹಿಂದೂ ಮತ್ತು ವೈಷ್ಣವಮತಗಳನ್ನು ಇವರು ಅನುಸರಿಸುತ್ತಾರೆ. ಇನ್ನು ಮಣಿಪುರದಲ್ಲಿರುವ ಇತರ ಜನಾಂಗ ಮತ್ತು ಸಮುದಾಯಗಳೆಂದರೆ ಮಣಿಪುರಿ ಮೇಟೀಸ್. ಇವರನ್ನು ಮಣಿಪುರದ ಮುಸ್ಲಿಂ ಜನರು ಎಂದು ಕೂಡಾ ಕರೆಯಲಾಗುತ್ತದೆ. ಇನ್ನು ನಾಗ, ಕಾಬುಯಿ, ಗಾಂಗ್ಟೆ, ಕೋಂ ಮುಂತಾದ ಸಮುದಾಯಗಳಿಗೆ ಸೇರಿದ ಜನರು ಕೂಡಾ ಇಲ್ಲಿ ಕಂಡುಬರುತ್ತಾರೆ. ಕೃಷಿ ಇಲ್ಲಿನ ಪ್ರಧಾನ ಉದ್ಯೋಗ. ಇನ್ನು ಸಂಸ್ಕೃತಿಯತ್ತ ಗಮನ ಹರಿಸುವುದಾದರೆ ಇಲ್ಲಿ ಬಹಳಷ್ಟು ಹಬ್ಬ ಹರಿದಿನಗಳ ಆಚರಣೆಯನ್ನು ಕಾಣಬಹುದಾಗಿದೆ. ಈ ಹಬ್ಬಗಳ ಪೈಕಿ ಹೆಚ್ಚು ಪ್ರಚಲಿತ ಹಬ್ಬವೆಂದರೆ ’ಲಾಯ್ ಹರೋಬಾ’ ಹಬ್ಬ.
’ಲಾಯ್ ಹರೋಬಾ’ ಹಬ್ಬವು ಪೂರ್ವ ಹಿಂದೂ ದೇವತೆಯಾದ ತಾಂಗ್ಜಿಂಗ್ ದೇವತೆಯ ಹಬ್ಬವೆಂದೇ ಪ್ರಸಿದ್ಧಿ. ಇಲ್ಲಿರುವ ಎಬುದೌ ತಾಂಗ್ಜಿಂಗ್ ದೇವಾಲಯದಲ್ಲಿ ಪಾರಂಪರಿಕ ದೇವರಾದ ತಾಂಗ್ಜಿಂಗ್ ದೇವತೆಯನ್ನು ಆರಾಧಿಸಲಾಗುತ್ತದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ’ಲಾಯ್ ಹರೋಬಾ’ ಹಬ್ಬವನ್ನು ಆಚರಿಸಲಾಗುತ್ತದೆ. ಮಣಿಪುರದ ನಾನಾ ಭಾಗಗಳಿಂದ ನೂರಾರು ಜನರು ಬಂದು ಸಂಭ್ರಮದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಮಣಿಪುರದಲ್ಲಿ ಆಚರಿಸಲ್ಪಡುತ್ತಿರುವ ಇನ್ನೊಂದು ಮುಖ್ಯ ಹಬ್ಬವೆಂದರೆ ’ಚೈರಬೋವಾ ಹಬ್ಬ’. ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಆಚರಿಸಲ್ಪಡುವ ಈ ಹಬ್ಬವು ಮೇಟಿ ಸಮುದಾಯದ ಜನರ ಹೊಸ ವರ್ಷಾಚರಣೆಯ ಸಂದರ್ಭದಲ್ಲೇ ಬರುತ್ತದೆ. ಇದರಿಂದಾಗಿ ಈ ಹಬ್ಬದ ಸಂಭ್ರಮ ಇಮ್ಮಡಿಗೊಳ್ಳುತ್ತದೆ. ಈ ಸಂದರ್ಭದಲ್ಲಿ ಈ ಪ್ರದೇಶದ ಎಲ್ಲಾ ಮನೆಗಳನ್ನು ದೀಪಗಳಿಂದ ಬೆಳಗಲಾಗುತ್ತದೆ. ಕುಟುಂಬದ ಸದಸ್ಯರು ಬಹಳ ಸಂಭ್ರಮದಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ಇನ್ನು ದೇಶದ ವಿವಿಧೆಡೆ ಹೋಳಿ ಹಬ್ಬವನ್ನು ಆಚರಿಸಿದರೆ, ಮಣಿಪುರಿ ಸಂಸ್ಕೃತಿಯಲ್ಲಿ ಹೋಳಿಗೆ ಪರ್ಯಾಯವಾಗಿ ’ಯಾವೊಶಂಗ್’ ಎನ್ನುವ ಹಬ್ಬವನ್ನು ಆಚರಿಸಲಾಗುತ್ತದೆ. ಸಂಭ್ರಮದ ಈ ಹಬ್ಬವನ್ನು ಫೆಬ್ರವರಿ/ಮಾರ್ಚ್ ತಿಂಗಳ ಅವಧಿಯಲ್ಲಿ ಸುಮಾರು ೫ ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಿಷ್ಣುಪುರದಲ್ಲಿರುವ ಮಣಿಪುರಿ ಜನಾಂಗ ಆಚರಿಸುವಂತಹ ಹಬ್ಬಗಳಲ್ಲಿ ’ಯಾವೊಶಂಗ್’ ಹಬ್ಬಕ್ಕೆ ಮುಖ್ಯ ಸ್ಥಾನವಿದೆ.