ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿದೆ ಭುಂತರ್. ಸಮುದ್ರ ಮಟ್ಟದಿಂದ ಸುಮಾರು 2050 ಮೀಟರ್ ಎತ್ತರದಲ್ಲಿ ಈ ಪ್ರದೇಶವಿದ್ದು, ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ ಹಾಗೂ ಕುಲು ಕಣಿವೆಯ ಪ್ರವೇಶದ್ವಾರ ಎಂದೂ ಇದನ್ನು ಪರಿಗಣಿಸಲಾಗಿದೆ. ಈ ನಗರಕ್ಕೆ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವಿದೆ.
ಭುಂತರ್ಗೆ ಇರುವ ಪ್ರಾಮುಖ್ಯತೆಯು ಕ್ರಿಶ್ಚಿಯನ್ರ ಧರ್ಮಗ್ರಂಥ ಬೈಬಲ್ನಲ್ಲಿ ನೋವಾಹ್ಗಿರುವಷ್ಟೇ ಪವಿತ್ರವಾದದ್ದು. ಹಿಂದೂ ಧರ್ಮದಲ್ಲಿ ನಾಗರಿಕತೆಯನ್ನು ಹುಟ್ಟುಹಾಕಿದ ಮನು ಕೂಡಾ ಇಲ್ಲೇ ವಾಸವಾಗಿದ್ದ ಎಂದು ಹೇಳಲಾಗುತ್ತದೆ. ಬಾಶೇಶ್ವರ್ ಮಹಾದೇವ ದೇವಸ್ಥಾನ, ಜಗನ್ನಾಥ ದೇವಸ್ಥಾನ, ಆದಿ ಬ್ರಹ್ಮ ದೇವಸ್ಥಾನ ಮತ್ತು ಬಿಜಲಿ ಮಹಾದೇವ ದೇವಸ್ಥಾನಗಳಂತಹ ಪ್ರಮುಖ ಹಿಂದೂ ಧಾರ್ಮಿಕ ತಾಣಗಳು ಇಲ್ಲಿವೆ. ಇನ್ನೊಂದು ಜನಪ್ರಿಯ ದೇವಸ್ಥಾನವೆಂದರೆ ತ್ರಿಯುಗ ನಾರಾಯಣ ದೇವಸ್ಥಾನ. ವಿಷ್ಣುವಿನ ಇನ್ನೊಂದು ಅವತಾರವಾದ ನಾರಾಯಣನಿಗೆ ಅರ್ಪಿತವಾದ ದೇವಸ್ಥಾನವಿದು. 800 ನೇ ಎ.ಡಿಯಲ್ಲಿ ಸ್ಥಾಪಿತವಾದ ಅತ್ಯಂತ ಪುರಾತನ ದೇವಸ್ಥಾನ. ಭುಂತರಿನಿಂದ ಸುಮಾರು 12 ಕಿ.ಮೀ ದೂರದಲ್ಲಿ ಈ ಮಂದಿರವಿದೆ.
ಸುಮ್ಮನೆ ಸುತ್ತಾಡುವುದರ ಜೊತೆಗೆ ಇಲ್ಲಿ ಹತ್ತುವುದು, ಕಲ್ಲು ಬಂಡೆ ಏರುವುದು ಮತ್ತು ಕಯಕಿಂಗ್ಗಳನ್ನು ಮಾಡಿ ಖುಷಿಪಡಬಹುದು. ಇನ್ನೊಂದು ಪ್ರಮುಖ ಆಕರ್ಷಕ ತಾಣ ಎಂದರೆ ಭುಂತರ್ ಮೇಳ. ಇದು ವರ್ಷಕ್ಕೊಮ್ಮೆ ನಡೆಯುತ್ತಲಿದ್ದು, ಉತ್ತರ ಭಾರತದಲ್ಲೇ ಅತ್ಯಂತ ಜನಪ್ರಿಯ ಮೇಳ. ಪ್ರತಿವರ್ಷ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಮೂರು ದಿನಗಳವರೆಗೆ ಈ ಮೇಳವನ್ನು ನಡೆಸಲಾಗುತ್ತದೆ.
ಭುಂತರ್ ವಿಮಾನ ನಿಲ್ದಾಣದ ಮೂಲಕ ಭುಂತರ್ಗೆ ಪ್ರಯಾಣಿಸಬಹುದು. ಚಂಡೀಗಢ ರೈಲ್ವೆ ಸ್ಟೇಷನ್ ಇಲ್ಲಿಗೆ ಸಮೀಪದ ರೈಲ್ವೆ ನಿಲ್ದಾಣವಾಗಿದ್ದು ಸುಮಾರು 320 ಕಿ.ಮೀ ದೂರದಲ್ಲಿದೆ. ನವದೆಹಲಿ ಮತ್ತು ಚಂಡೀಗಢದಿಂದ ನಿರಂತರ ಬಸ್ ಸೇವೆಗಳು ಲಭ್ಯವಿದೆ.