ಪ್ರವಾಸಿಗರ ಪಾಲಿಗೆ ಧೌಲಿ ಗಿರಿಯು ಮಹತ್ವದ ತಾಣವಾಗಿದೆ. ಈ ಸ್ಥಳದ ವಿಶೇಷತೆಯೇನೆಂದರೆ, ಇಲ್ಲಿ ಮೌರ್ಯ ಸಾಮ್ರಾಜ್ಯದ ಸಾರ್ವಭೌಮನಾದ ಅಶೋಕ ಚಕ್ರವರ್ತಿಯು ನಿರ್ಮಿಸಿರುವ ಬೃಹತ್ ಬಂಡೆಯಿದೆ. ಈ ಪ್ರಶಾಸನಾತ್ಮಕ ಬಂಡೆಯು ಸುಮಾರು 3 ನೆಯ ಶತಮಾನದ ಕಾಲಾವಧಿಯಲ್ಲಿ ಸ್ಥಾಪಿತವಾಯಿತು. ಇದರ ಕುರಿತ ಕುತೂಹಲಕರ ಸಂಗತಿಯೇನೆಂದರೆ, ಇಂದಿಗೂ ಕೂಡ ಇದು ವಿರೂಪಗೊಳ್ಳದೇ ಹಾಗೆಯೇ ಇದೆ. ಇತಿಹಾಸ ಪ್ರಿಯರಿಗೆ ಧೌಲಿ ಗಿರಿಯು ಅನ್ವೇಷಣೆ ಕೈಗೊಳ್ಳಲು ಅತ್ಯುತ್ತಮ ತಾಣವಾಗಿದೆ. ಈ ಪ್ರದೇಶವು ಪ್ರಶಾಂತವಾದ ವಾತಾವರಣವನ್ನು ಹೊಂದಿದ್ದು, ಮನೋಹರವಾದ ನೋಟವನ್ನು ಒದಗಿಸುತ್ತದೆ.
ಸಂದರ್ಶಕರು ಇಲ್ಲಿ ಗಂಟೆಗಟ್ಟಲೆ ಕುಳಿತು ವಿಶ್ರಾಂತಿಯನ್ನು ಪಡೆಯಪಹುದು. ನಂಬಿಕೆಯೊಂದರ ಪ್ರಕಾರ, ಕಳಿಂಗ ಯುದ್ಧವು ನಡೆದದ್ದು ಧೌಲಿ ಗಿರಿಯಲ್ಲಿಯೇ. ಭೌದ್ಧ ಧರ್ಮದ ಅನೇಕ ಕುರುಹುಗಳನ್ನು ಈ ಸ್ಥಳದಲ್ಲಿ ಕಾಣಬಹುದು. ಈ ಬೆಟ್ಟದ ತುದಿಯಲ್ಲಿ ಸುಂದರವಾದ ಶ್ವೇತ ಪಗೋಡವಿದೆ. ಈ ಪಗೋಡಾವು ಬೆಟ್ಟದ ತುದಿಭಾಗದ ಇತ್ತೀಚಿಗಿನ ಸೇರ್ಪಡೆಯಾಗಿದ್ದು, ಇದನ್ನು 1970 ರಲ್ಲಿ ನಿರ್ಮಿಸಲಾಗಿತ್ತು. ಈ ಪಗೋಡವು, ಈ ಪ್ರದೇಶದ ಸೌಂದರ್ಯ ಮತ್ತು ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.