ಕಾವೇರಿ ನದಿ ತೀರದಲ್ಲಿರುವ ಭೀಮೇಶ್ವರಿ ಮೀನುಗಾರಿಕಾ ತರಬೇತಿ ಶಿಬಿರವು ಪ್ರವಾಸಿಗರಿಗೆ ಮನರಂಜನಾ ತಾಣದೊಂದಿಗೆ ಕ್ರೀಡಾ ಸ್ಫೂರ್ತಿ ನೀಡುತ್ತದೆ. ಕಾವೇರಿ ನದಿಯ ದಂಡೆಯಲ್ಲಿ ನಡೆಯುವ ಈ ಶಿಬಿರದಲ್ಲಿ ಪ್ರವಾಸಿಗರು ವಿವಿಧ ಜಾತಿ, ಬಣ್ಣ, ಗಾತ್ರದ ಮೀನುಗಳನ್ನು ಹಿಡಿದು ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದು.ಇಲ್ಲಿರುವ ಪಕ್ಷಧಾಮದಲ್ಲಿ ಸುಮಾರು 200 ಕ್ಕೂ ಹೆಚ್ಚು ತಳಿಯ ವಿವಿಧ ಪಕ್ಷಿ ಸಂಕುಲನವನ್ನು ಕಾಣಬಹುದು. ಅಲ್ಲದೇ ಕಾಡಾನೆ, ಸಂಬಾರ, ನರಿ, ಚಿರತೆ, ಕಾಡೆಮ್ಮೆ, ಜಿಂಕೆ ಮುಂತಾದವುಗಳು ಇಲ್ಲಿರುವ ಕಾಡಿನಲ್ಲಿ ವಾಸಿಸುತ್ತಿವೆ.ಕಾವೇರಿ ನದಿ ತೀರದಲ್ಲಿನ ಪ್ರವಾಸದಿಂದ ದಣಿದವರಿಗೆ ಇಲ್ಲಿ ಹಲವಾರು ಹೊಟೆಲ್ ಗಳಿವೆ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ಬಯಸುವವರಿಗೆ ಇಲ್ಲಿರುವ ಕಾಟೇಜ್, ರೆಸ್ಟೋರೆಂಟ್ ಗಳು ಸಹಕಾರಿಯಾಗುತ್ತವೆ. ಇಲ್ಲಿ ರಾತ್ರಿ ವಸತಿ ಮಾಡುವವರಿಗೆಂದೇ ಕ್ಯಾಂಪ್ ಫೈರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹಗಲಿಡೀ ದಣಿದು ಕಾಡಿನಲ್ಲಿ ಪ್ರವಾಸ ಮಾಡಿದವರು ರಾತ್ರಿಯಲ್ಲಿ ಕ್ಯಾಂಪ್ ಫೈರ್ ನಲ್ಲಿ ಭಾಗವಹಿಸಿ ಆನಂದಿಸಬಹುದು.ಇಲ್ಲಿ ಮೀನುಗಾರಿಕಾ ತರಬೇತಿ ಶಿಬಿರದ ವಿಶೇಷವೆಂದರೆ ಹಿಡಿದ ಮೀನುಗಳನ್ನು ಕಾವೇರಿ ನದಿಯಲ್ಲೇ ಬಿಡಬೇಕು. ಮೀನುಗಳನ್ನು ಎಲ್ಲಿಗೂ ಒಯ್ಯುವಂತಿಲ್ಲ. ಕಾರಣವೆಂದರೆ ಇಲ್ಲಿರುವ ಮೀನುಗಳ ಸಂತತಿ ಬರಿದಾಗದಿರಲಿ ಎಂಬುದು ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮವೆನ್ನಬಹುದು.ಜೂನ್ ನಿಂದ ಆಗಸ್ಟ್ ಹಾಗೂ ಸೆಪ್ಟೆಂಬರ್ ನಿಂದ ಫೆಬ್ರವರಿ ತಿಂಗಳಲ್ಲಿ ಭೀಮೇಶ್ವರಿ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳಬಹುದು.