ಶ್ರೀ ಸೀತಾ ರಾಮಚಂದ್ರ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಶ್ರೀ ರಾಮ ಹಾಗೂ ಆತನ ಧರ್ಮ ಪತ್ನಿ ಸೀತಾ ದೇವಿಗೆ ಮೀಸಲಾಗಿದೆ. ಶ್ರೀ ರಾಮನು ಭಗವಾನ್ ವಿಷ್ಣುವಿನ ಏಳನೇ ಅವತಾರ ಎಂದು ನಂಬಲಾಗಿದೆ.
ಈ ದೇವಾಲಯವು ಪವಿತ್ರ ಪಟ್ಟಣ ಎಂದೇ ಹೆಸರುವಾಸಿಯಾಗಿರುವ ಭದ್ರಾಚಲಂ ಪಟ್ಟಣದಲ್ಲಿದೆ ಹಾಗೂ ಶ್ರೀ ರಾಮಚಂದ್ರನು ಸಪತ್ನಿ ಸಮೇತನಾಗಿ ತನ್ನ ಅಜ್ಞಾತವಾಸದ ವೇಳೆ ಸ್ವಲ್ಪ ಸಮಯ ತಂಗಿದ್ದನು ಎನ್ನಲಾದ ಪರ್ನಶಾಲಾ ಪ್ರದೇಶದಿಂದ 35 ಕೀ.ಮಿ ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ, ರಾಕ್ಷಸ ರಾಜ ರಾವಣನ ಲಂಕೆಯಲ್ಲಿದ್ದ ಸೀತಾ ಮಾತೆಯನ್ನು ರಕ್ಷಿಸಲು, ಶ್ರೀ ರಾಮನು ಗೋದಾವರಿ ನದಿಯನ್ನು ದಾಟಿ ಮುಂದೆ ಸಾಗಿದನು ಎಂದು ಹೇಳಲಾಗುತ್ತದೆ. ಆದ್ದರಿಂದ ಎಲ್ಲಿ ಶ್ರೀ ರಾಮನು ಗೋದಾವರಿ ನದಿಯನ್ನು ದಾಟಿದನೋ ಅದೇ ಜಾಗದಲ್ಲಿ ಅಂದರೆ ಗೋದಾವರಿ ನದಿಯ ತಟದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಈ ದೇವಾಲಯಕ್ಕೆ ಸಂಬಂಧಿಸಿದ ಇನ್ನೊಂದು ಪುರಾಣ ನಂಬಿಕೆ ಎಂದರೆ, ಜನ್ಮತಃ ಮುಸ್ಲಿಂ ಧರ್ಮದವನಾದ ಆದರೆ ಶ್ರೀ ರಾಮನ ಮಹಾನ್ ಭಕ್ತ ಕಬೀರನ ಸುತ್ತ ಹೆಣೆದುಕೊಂಡಿದೆ. ಕಬೀರನಿಗೆ ದೇವಾಲಯದ ಒಳಗೆ ಪ್ರವೇಶಿಸಲು ಧರ್ಮಾಂಧರಿಂದ ಅನುಮತಿಯಿರಲಿಲ್ಲ. ಇದರ ಪರಿಣಾಮವಾಗಿ ದೇವಾಲಯದಲ್ಲಿದ್ದ ವಿಗ್ರಹವು ಇದ್ದಕ್ಕಿದ್ದಂತೆ ನಿಗೂಢವಾಗಿ ಕಣ್ಮರೆಯಾಯಿತು. ನಂತರ ಕಬೀರನು ದೇವಾಲಯನ್ನು ಪ್ರವೇಶಿಸುತ್ತಿದ್ದಂತೆ ವಿಗ್ರಹವು ಮತ್ತೆ ದೇವಾಲಯದಲ್ಲಿ ಕಾಣಿಸಿಕೊಂಡಿತು. ಹೀಗೆ ಇನ್ನೂ ಹಲವಾರು ವೈವಿದ್ಯಮಯ ಪುರಾಣಗಳು ಶ್ರೀ ಸೀತಾ ರಾಮಚಂದ್ರ ದೇವಾಲಯದ ಸುತ್ತ ಪ್ರಚಲಿತದಲ್ಲಿದ್ದು ಪ್ರವಾಸಿಗರಿಗೆ ಹಾಗೂ ಶ್ರೀ ರಾಮನ ಭಕ್ತಾದಿಗಳಿಗೆ ಅತ್ಯಂತ ಜನಪ್ರಿಯ ಧಾರ್ಮಿಕ ಗಮ್ಯಸ್ಥಾನವಾಗಿದೆ.