ಬಡೇಶ್ವರ ನಾಥ್, ಬಸ್ತಿಯಿಂದ ಸುಮಾರು ಐದು ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಬ್ರಾಹ್ಮಣರು ಮತ್ತು ಗೋಸ್ವಾಮಿಗಳು ಬಹು ಸಂಖ್ಯೆಯಲ್ಲಿರುವ ಈ ಗ್ರಾಮವು ಕೇವಲ ಐದರಿಂದ ಆರು ನೂರು ರಷ್ಟು ಜನಸಂಖ್ಯೆಯನ್ನು ಮಾತ್ರ ಹೊಂದಿದೆ. ಆದಾಗ್ಯೂ,ಈ ಸಣ್ಣ ಹಳ್ಳಿಯು ಪ್ರವಾಸಿ ಹೆಗ್ಗುರುತಾಗಿದೆ. ಇದು ಶಿವನನ್ನು ಪೂಜಿಸುವ ಬಡೇಶ್ವರ್ ನಾಥ್ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಶಿವನ ಮಹಾಭಕ್ತನಾಗಿದ್ದ ರಾವಣನಿಂದ ಈ ದೇವಾಲಯವು ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ.
ಕುವಾನಾ ನದಿಯ ದಡದಲ್ಲಿ ನೆಲೆಸಿರುವ ಈ ದೇವಾಲಯ, ಕಂಪನಿ ಬಾಗ್ ಚೌರಾಹ-ಕ್ರಾಸಿಂಗ್ನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದು, ಮತ್ತು ಬಸ್ತಿ ರೈಲ್ವೆ ನಿಲ್ದಾಣದಿಂದ ಸುಮಾರು ಹನ್ನೆರಡು ಕಿಲೋಮೀಟರ್ ಅಂತರದಲ್ಲಿದೆ. ಬಡೇಶ್ವರ ನಾಥ್ ದ್ವಾರದ ಎಡ ತಿರುವಿನ ಹಾದಿಯ ಮೂಲಕ ಈ ದೇವಾಲಯವನ್ನು ತಲುಪಬಹುದು. ಈ ದೇವಸ್ಥಾನವು ಪವಿತ್ರವಾದ ಶಿವ ಲಿಂಗಕ್ಕೆ ನೆಲೆಯಾಗಿದೆ. ಈ ದೇವಾಲಯವನ್ನು ಕುರಿತು ಶಿವ ಮಹಾಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ. ಶಿವ ರಾತ್ರಿಯಂದು ಇಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ದೂರ ಹಾಗೂ ಸಮೀಪದ ಸ್ಥಳಗಳಿಂದ ಬಹುಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.