ಜಮ್ಮು ಕಾಶ್ಮೀರದ 22 ಜಿಲ್ಲೆಗಳಲ್ಲಿ ಬಾರಾಮುಲ್ಲಾ ಕೂಡ ಒಂದು. ಸರಿಸುಮಾರು 4190 ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿಯ 8 ತೆಹಸಿಲ್ ವಿಭಾಗಗಳು ಮತ್ತು 16 ಬ್ಲಾಕ್ ಗಳನ್ನು ಒಳಗೊಂಡಿದೆ. ಬಾರಾಮುಲ್ಲಾ ಜಿಲ್ಲೆಯ ಪಶ್ಚಿಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿಭಾಗವಿದೆ. ಕುಪ್ವಾರಾ ನಗರವು ದಕ್ಷಿಣಕ್ಕಿದ್ದರೆ, ಪೂಚ್-ಬದ್ಗಮ್ ನಗರಗಳು ಉತ್ತರಕ್ಕೆ ಮತ್ತು ಶ್ರೀನಗರ, ಲಡಾಖ್ ಗಳು ಪೂರ್ವ ಗಡಿಯಲ್ಲಿ ನೆಲೆನಿಂತಿವೆ.
ಈ ಪುರಾತನ ನಗರವನ್ನು ರಾಜಾ ಭೀಮಸೇನನು ಕ್ರಿ.ಪೂ 2306 ರಲ್ಲಿ ಅನ್ವೇಷಿಸಿದ. ಈ ಪ್ರಾಂತ್ಯಕ್ಕೆ ಮೊಘಲ್ ದೊರೆ ಅಕ್ಬರ್ 1508 ರಲ್ಲಿ ಭೇಟಿ ನೀಡಿದ್ದ. ಕಾಶ್ಮೀರ ಕಣಿವೆಗೆ ಪ್ರಯಾಣಿಸುವಾಗ ದೊರೆ ಜಹಾಂಗೀರ್ ಇಲ್ಲಿನ ಸೌಂದರ್ಯವನ್ನು ಮೆಚ್ಚಿ ಇಲ್ಲಿಯೇ ನೆಲೆ ನಿಲ್ಲುವ ಮನಸ್ಸು ಮಾಡಿದ್ದ. ಚೀನಾದ ಪ್ರಸಿದ್ದ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಮನಸ್ಸಿಗೂ ಕೂಡ ಬಾರಾಮುಲ್ಲಾ ಮೋಡಿ ಮಾಡಿತ್ತು.
'ವರಾಹ' ಮತ್ತು 'ಮುಲ್' ಎಂಬೆರಡು ಸಂಸ್ಕೃತ ಶಬ್ದಗಳಿಂದ ಬಾರಾಮುಲ್ಲ ಉತ್ಪತ್ತಿಯಾಗಿದೆ. ವರಾಹ್ ಎಂದರೆ ಬೋರ್ (ಹಂದಿ) ಮತ್ತು ಮುಲ್ ಎಂದರೆ ಮೋಲಾರ್ (ದವಡೆ). ಎರಡೂ ಸೇರಿ ಬಾರಾಮುಲ್ಲ. ಕಾಶ್ಮೀರದ ಪುರಾಣ ಕಥೆ ನಿಲ್ಮತ್ ಪೂರ್ಣದಲ್ಲಿ ಈ ಸ್ಥಳದ ಹೆಸರಿನ ಹಿಂದಿನ ಐತಿಹ್ಯವನ್ನು ಉಲ್ಲೇಖಿಸಲಾಗಿದೆ. ಮಹಾಕಾವ್ಯದಲ್ಲಿ ವಿವರಿಸಿರುವಂತೆ ಮೂಲತಃ ಕಾಶ್ಮೀರಕ್ಕೆ ಸತಿಸಾರ ಸರೋವರ ಎಂಬ ಹೆಸರಿತ್ತು. ಇದು ರಕ್ಕಸ ಜಲೋದ್ಬವ ಎಂಬುವವನ ಸುಪರ್ದಿಯಲ್ಲಿತ್ತು. ಈ ರಕ್ಕಸನ ಕಾಟವನ್ನು ನಿಗ್ರಹಿಸಲು, ಮಹಾವಿಷ್ಣು ವರಾಹದ ರೂಪವನ್ನು ತಾಳಿ ತನ್ನ ದವಡೆಯ ಸಹಾಯದಿಂದ ಪರ್ವತದಲ್ಲಿ ರಂಧ್ರವನ್ನು ಕೊರೆಯುವ ಮೂಲಕ ನೀರು ಹರಿಯಲು ಅನುವು ಮಾಡಿಕೊಟ್ಟ.
ಬಾರಾಮುಲ್ಲಾ ಪ್ರಸಿದ್ದವಾಗಿರುವುದು ಇಲ್ಲಿನ ಗುರುದ್ವಾರಗಳು, ಮಂದಿರಗಳು, ಪವಿತ್ರ ಸ್ಥಳಗಳು, ದೇವಸ್ಥಾನಗಳು ಮತ್ತು ಸ್ಮಾರಕಗಳಿಂದ. ಈ ಭಾಗಕ್ಕೆ ಪ್ರವಾಸ ಬಂದಾಗ ಪ್ರವಾಸಿಗರು, ಸಮುದ್ರಮಟ್ಟದಿಂದ 2730 ಮೀಟರ್ ಎತ್ತರದಲ್ಲಿರುವ ಗುಲ್ಮಾರ್ಗ್ ನಗರವನ್ನು ಭೇಟಿ ಮಾಡಲೇಬೇಕು. ಗುಲ್ಮಾರ್ಗ್ ನಗರಕ್ಕೆ ಇದ್ದ ಮೂಲ ಹೆಸರು ಗೌರಿಮಾರ್ಗ್ ಅಂತ. 16 ನೇ ಶತಮಾನದಲ್ಲಿ ಈ ಪ್ರದೇಶಕ್ಕೆ ಈ ಹೆಸರು ಬಂದಿದ್ದು, ಇದರರ್ಥ 'ಹೂವುಗಳ ಮಾರ್ಗ' ಎಂದು. ಗುಲ್ಮಾರ್ಗ್ ನಲ್ಲಿ ಗಾಲ್ಫ್ ಕೋರ್ಸ್ ಅಂಗಣವಿದ್ದು ವಿಶ್ವದ ಅತಿ ಎತ್ತರದ ಹಸಿರು ಗಾಲ್ಫ್ ಕೋರ್ಸ್ ಅಂಗಣವೆಂಬ ಖ್ಯಾತಿ ಇದಕ್ಕಿದೆ. ಈ ಗಾಲ್ಫ್ ಕ್ಲಬ್ ನ ನಿರ್ವಹಣೆಯನ್ನು ಜಮ್ಮು ಕಾಶ್ಮೀರ ಪ್ರವಾಸೋದ್ಯಮ ಅಭಿವೃದ್ದಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಗಾಲ್ಫ್ ಕೋರ್ಸ್ ಹೊರತಾಗಿ ಖಿಲನ್ ಮಾರ್ಗ್, ಅಚ್ಚಬಲ್, ಗೊಂಡೋಲಾ ಲಿಫ್ಟ್, ತಂಗಮಾರ್ಗ್, ವೆರಿನಾಗ್ ಮತ್ತು ಗುಲ್ಮಾರ್ಗ್ ಬಯೋಸ್ಪಿಯರ್ ರಿಸರ್ವ್ ಗಳನ್ನು ನೋಡಬಹುದು.
ಪರಿಹಸ್ಪೋರಾ ಕೂಡ ಜಿಲ್ಲೆಯ ಮತ್ತೊಂದು ಆಕರ್ಷಣೆ. ರಾಜಾ ಶಂಕರವರ್ಮನ ಕಾಲದಲ್ಲಿ ಇದು ಕಾಶ್ಮೀರದ ರಾಜಧಾನಿಯಾಗಿತ್ತು. ಪರಿಹಸ್ಪೋರಾ ಪಟ್ಟಣ ಮತ್ತು ಪಟ್ಟಣ ಬಝಾರ್ ಗಳಂತಹ ಸ್ಮಾರಕಗಳನ್ನು ನೋಡುವುದಕ್ಕೆ ಪ್ರವಾಸಿಗರು ಭೇಟಿ ನೀಡುತ್ತಾರೆ. 1914 ರಲ್ಲಿ ನಡೆದ ಭೂ ಅನ್ವೇಷಣೆಯ ಸಮಯದಲ್ಲಿ ಹೊರಬಿದ್ದ ಮಹಾವಿಷ್ಣುವಿನ ಪೂಜಾ ಸನ್ನಿಧಿಗಳಾದ ರಾಜ ಭವನ ಮತ್ತು ಚೈತ್ಯಗಳನ್ನೂ ನೋಡಬಹುದು.
ಸಮಯಾವಕಾಶವಿದ್ದರೆ ಪ್ರವಾಸಿಗರು, ವೂಲರ್ ಸರೋವರ, ಮಾನಸ್ಬಲ್ ಸರೋವರ ಮತ್ತು ಅಲ್ಪಥೇರ ಸರೋವರಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.
ತಂಗಮಾರ್ಗ್ ನಲ್ಲಿ ಜೆಯಾರತ್ ಬಾಬಾ ರೆಷಿ, ಸೋಪೋರ್ ನಲ್ಲಿ ಜೆಯಾರತ್ ತುಜ್ಜರ್ ಷರೀಫ್, ಅಹ್ಮದಪುರದಲ್ಲಿ ಇಮಾಮ್ ಬಾರಾ ಗೂಮ್ ಮತ್ತು ಜೆಯಾರತ್ ಜನ್ಬಜ್ ವಾಲಿ ಗಳಂತ ಧಾರ್ಮಿಕ ಸ್ಥಳಗಳನ್ನೂ ಸಂದರ್ಶಿಸಬಹುದು. ಜೆಯಾರತ್ ದಸ್ತಗೀರ್ ಸಾಹೇಬ್, ಜೆಯಾರತ್ ಬಾಬಾ ಶಕೂರ್ ಉದ್ದೀನ್, ಜೆಯಾರತ್ ಅಹಿಮ್ ಷರೀಫ್ ಗಳು ಬಂಡೀಪೋರದ ಬಳಿಯಿರುವ ಪ್ರಸಿದ್ದ ಧಾರ್ಮಿಕ ಸಂದರ್ಶನ ಕ್ಷೇತ್ರಗಳು. ಸಮಯ ಸಿಕ್ಕಿದರೆ ಮಹಾರಾಣಿ ಅಥವಾ ಮೋಹಿನೇಶ್ವರ ಶಿವಾಲಯ ದೇವಸ್ಥಾನವನ್ನೂ ಸಂದರ್ಶಿಸಬಹುದು. ಈ ದೇವಸ್ಥಾನವನ್ನು 1915 ರಲ್ಲಿ ಕಶ್ಮೀರದ ಮಹಾರಾಜ ಹರಿಸಿಂಗ್ ಪತ್ನಿ ಮೋಹಿನಿ ಬಾಲ್ ಸಿಸೋಧಿಯಾ ಕಟ್ಟಿಸಿದ್ದು. ಶಿವ ಪರಮಾತ್ಮ ಮತ್ತು ಪಾರ್ವತಿ ದೇವಿಯ ಮೂರ್ತಿಗಳಿಗೆ ಇಲ್ಲಿ ಪೂಜೆ ನಡೆಯುತ್ತದೆ. ಹಿಂದೂ ದೇವಸ್ಥಾನಗಳ ಜೊತೆಗೆ ಸಿಖ್ ಮಂದಿರವಾದ ಚಟ್ಟಿ ಪಡಶಾಹಿಯನ್ನೂ ಭೇಟಿ ಮಾಡುಬಹುದು.
ಹರಿಯುವ ತೊರೆಗಳು, ಪರ್ವತಗಳು, ಕಣಿವೆಗಳು, ಸರೋವರಗಳು, ಚಳಿ ಮತ್ತು ಜಲಪಾತಗಳು ಬಾರಾಮುಲ್ಲಾವನ್ನು ನಿಸರ್ಗದ ಮಡಿಲಿನಲ್ಲಿ ಸಮಯ ಕಳೆಯುವುದಕ್ಕೆ ಸೂಕ್ತ ಗಮ್ಯಸ್ಥಾನವನ್ನಾಗಿ ಮಾಡಿದೆ. ವಿಮಾನ, ರೈಲು ರಸ್ತೆ ಯಾವುದೇ ಮಾರ್ಗದ ಮೂಲಕವೂ ಬಾರಾಮುಲ್ಲ ತಲುಪಬಹುದು. ಏಪ್ರಿಲ್ ನಿಂದ ಜುಲೈ ವರೆಗಿನ ಬೇಸಿಗೆಯ ನಡುವಿನಲ್ಲಿ ಬಾರಾಮುಲ್ಲಾಕ್ಕೆ ಭೇಟಿ ನೀಡಲು ಪ್ರಶಸ್ತ ಕಾಲ. ಚಳಿಗಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು.