1969ರಲ್ಲಿ ಉತ್ತರ ಪ್ರದೇಶದ ಅಂದಿನ ರಾಜ್ಯಪಾಲರಾದ ಶ್ರೀ ವಿಶ್ವನಾಥ್ ದಾಸ್ ಜಿ ಅವರು ಸಂತ ಕವಿ ಹಾಗೂ ರಾಮಾಯಣವನ್ನು ಪುನರ್ ಬರೆದಿದ್ದ ಗೋಸ್ವಾಮಿ ತುಳಸಿ ದಾಸ್ ಅವರ ಸ್ಮರಣೆಗಾಗಿ ತುಳಸಿ ಸ್ಮಾರಕ ಭವನ ನಿರ್ಮಿಸಿದ್ದರು. ರಾಜ್ ಗಂಗಾ ಕ್ರಾಸಿಂಗ್ ನ ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದ 300 ಅಡಿಯಲ್ಲಿ ಈ ಭವನವನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲೇ ಕುಳಿತುಕೊಂಡು ಸಂತ ತುಳಸಿದಾಸ್ ರಾಮಾಯಣ ಬರೆದಿದ್ದರು ಎಂದು ನಂಬಲಾಗಿದೆ.
ಸ್ಮಾರಕದಲ್ಲಿ ಒಂದು ಸಂಶೋಧನಾ ಕೇಂದ್ರವಿದ್ದು, ಇದನ್ನು ಅಯೋಧ್ಯಾ ಶೋಧ ಸಂಸ್ಥಾನ್ ಎಂದು ಕರೆಯಲಾಗುತ್ತದೆ. ಇತಿಹಾಸಕಾರರು ಮತ್ತು ವಿಧ್ವಾಂಸರ ಅಪಾರ ಮೌಲ್ಯದ ಒಂದು ದೊಡ್ಡ ಗ್ರಂಥಾಲಯ ಇಲ್ಲಿದೆ. ಈ ಸ್ಮಾರಕದಲ್ಲಿ ರಾಮಕಥಾ ಸಂಗ್ರಹಾಲಯವಿದೆ. ಈ ಮ್ಯೂಸಿಯಂನ್ನು 1988ರಲ್ಲಿ ಸ್ಥಾಪಿಸಲಾಯಿತು. ಶ್ರೀರಾಮನಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸುವುದು ಮತ್ತು ಪ್ರದರ್ಶಿಸುವುದು ಈ ಮ್ಯೂಸಿಯಂನ ಮುಖ್ಯ ಉದ್ದೇಶವಾಗಿದೆ.
ಕಲಾ ಪ್ರದರ್ಶನಕ್ಕೆ ಸಾಂಸ್ಕೃತಿಕ ವೇದಿಕೆಯೂ ಈ ಸ್ಮಾರಕದಲ್ಲಿದೆ. 2004ರ ಮೇ 20ರ ಬಳಿಕ ಇಲ್ಲಿ ಪ್ರತೀದಿನ ರಾಮ ಲೀಲಾವನ್ನು ಪ್ರದರ್ಶಿಸಲಾಗುತ್ತಿದೆ. ಸ್ಮಾರಕದಲ್ಲಿ ಪ್ರಾರ್ಥನೆ, ಧಾರ್ಮಿಕ ಚರ್ಚೆ, ಧರ್ಮೋಪದೇಶ, ಭಕ್ತಿಗೀತೆ, ಸಂಗೀತ ಮತ್ತು ಕೀರ್ತನೆಗಳನ್ನು ಹಾಡಲಾಗುತ್ತದೆ. ಶ್ರಾವಣ ಮಾಸದ ಏಳನೇ ದಿನದಂದು ಬರುವ ತುಳಸಿ ಜಯಂತಿಯನ್ನು ಇಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.