ಸುಖವರ್ಮನ್ ಪುತ್ರ ಉತ್ಪಲದ ರಾಜ ಅವಂತಿವರ್ಮನ್ ಈ ಅವಂತಿಸ್ವಾಮಿ ವಿಷ್ಣು ದೇವಸ್ಥಾನವನ್ನು ನಿರ್ಮಿಸಿದ್ದ. ಸಿಂಹಾಸನಕ್ಕೇರುವ ಮೊದಲು ಈತ ದೇವಸ್ಥಾನ ಕಟ್ಟಿಸಿದ್ದ ಎಂದು ಹೇಳಲಾಗುತ್ತದೆ. ಶಿವ ಅವಂತೀಶ್ವರ ದೇವಸ್ಥಾನದಿಂದ ಇದು ಕೇವಲ 1 ಕಿ.ಮೀ ದೂರದಲ್ಲಿದೆ. ಇನ್ನು ಹೆಸರೇ ಹೇಳುವಂತೆ ಇದು ವಿಷ್ಣುವಿಗೆ ಅರ್ಪಿಸಲ್ಪಟ್ಟ ದೇವಸ್ಥಾನ. ಶಿವ ಅವಂತೀಶ್ವರ ದೇವಸ್ಥಾನಕ್ಕೆ ಹೋಲಿಸಿದರೆ ಇದು ಸ್ವಲ್ಪ ಪುಟ್ಟ ದೇವಸ್ಥಾನ.
ಆದರೆ ಶಿವ ಅವಂತೀಶ್ವರ ದೇವಸ್ಥಾನಕ್ಕಿಂತ ಸಣ್ಣದಾಗಿದ್ದರೂ ಅವಂತಿಸ್ವಾಮಿ ದೇಗುಲವು ಉತ್ತಮ ಸ್ಥಿತಿಯಲ್ಲಿದೆ. ಎರಡೂ ದೇವಸ್ಥಾನಗಳು ಒಂದೇ ರೀತಿಯ ಕಚ್ಚಾ ಸಾಮಗ್ರಿಯಿಂದ ನಿರ್ಮಾಣವಾದರೂ ಅವಂತಿಸ್ವಾಮಿ ದೇವಸ್ಥಾನ ಸ್ವಲ್ಪ ಉತ್ತಮ ಸ್ಥಿತಿಯಲ್ಲಿದೆ.
ಎರಡೂ ದೇವಸ್ಥಾನಗಳ ನಿರ್ಮಾಣಕ್ಕೆಂದು ರಾಜ ಅವಂತೀವರ್ಮನ್ ಕೆಲವು ನಿಪುಣ ವೃತ್ತಿಪರರನ್ನು ನೇಮಿಸಿದ್ದ ಎಂದು ಹೇಳಲಾಗುತ್ತದೆ. ಹೀಗಾಗಿ ದೇವಸ್ಥಾನ ಶಿಥಿಲಗೊಂಡಿದ್ದರೂ, ಸೂಕ್ಷ್ಮ ಕೆತ್ತನೆ ಮತ್ತು ಕಲಾತ್ಮಕತೆಯ ಸೊಬಗನ್ನು ಸ್ವಲ್ಪ ಮಟ್ಟಿಗೆ ನೋಡಬಹುದು.
ಈ ತಾಣದ ಜೀರ್ಣೋದ್ಧಾರದ ಜವವಾಬ್ದಾರಿಯನ್ನು ಡಿ.ಆರ್.ಸಾಹನಿಯವರಿಗೆ ವಹಿಸಲಾಗಿತ್ತು. ಪುನರುಜ್ಜೀವನ ಪ್ರಕ್ರಿಯೆಯಲ್ಲಿ ಪುರಾತತ್ವ ಶಾಸ್ತ್ರಜ್ಞರು ಹಲವು ನಾಣ್ಯಗಳನ್ನು ಮತ್ತು ಚೀನೀಯರಿಗೆ, ಮುಸ್ಲಿಮರಿಗೆ ಮತ್ತು ಭಾರತೀಯರಿಗೆ ಸಂಬಂಧಿಸಿದ ಪುರಾತನ ಕಾಲದ ಸಾಮಗ್ರಿಗಳನ್ನು ಪತ್ತೆಹಚ್ಚಿದ್ದಾರೆ.