ಅವಂತೀಪುರದ ಪ್ರಮುಖ ಆಕರ್ಷಣೆಯೆಂದರೆ ಅವಂತೀಶ್ವರ ದೇವಸ್ಥಾನ, ಇಲ್ಲಿರುವ ದಪ್ಪನೆಯ, ಎತ್ತರದ ಪ್ರಾಕಾರಗಳು ಪ್ರವಾಸಿಗರ ಗಮನವನ್ನು ತನ್ನೆಡೆಗೆ ಸೆಳೆಯುತ್ತವೆ. ಅವಂತೀಪುರದ ಎರಡು ಪ್ರಮುಖ ಮತ್ತು ದೊಡ್ಡ ದೇವಸ್ಥಾನಗಳೆಂದರೆ ಅವಂತೀಶ್ವರ ಮತ್ತು ಅವಂತಿಸ್ವಾಮಿ ದೇವಸ್ಥಾನ. ಇದನ್ನು ರಾಜ ಸುಖವರ್ಮ ಪುತ್ರ ಅವಂತಿವರ್ಮನ್ ಕಟ್ಟಿಸಿದ್ದ ಎಂದು ಹೇಳಲಾಗಿದೆ. ಈತ ಉತ್ಪಲ ರಾಜನಾಗಿದ್ದ. ಈ ಹಿಂದೂ ದೇವಸ್ಥಾನವನ್ನು ಮಹಾದೇವ ದೇವಸ್ಥಾನ ಎಂದೂ ಕರೆಯಲಾಗುತ್ತದೆ .
ಹಲವು ವರ್ಷಗಳವರೆಗೆ ಇದು ಭೂಮಿಯಲ್ಲಿ ಹುದುಗಿಹೋಗಿತ್ತು. ನಂತರ ಬ್ರಿಟೀಷರ ಕಾಲದಲ್ಲಿ ಅಂದರೆ 18ನೇ ಶತಮಾನದಲ್ಲಿ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲಾಯಿತು. ಹೀಗಾಗಿ ಒಂದಷ್ಟು ಮೂರ್ತಿಗಳನ್ನು ಬ್ರಿಟೀಷರು ಹೊತ್ತೊಯ್ದಿದ್ದಾರೆ. ಇನ್ನೂ ಕೆಲವು ಮೂರ್ತಿಗಳು ಮತ್ತು ಪಳೆಯುಳಿಕೆಗಳಿದ್ದು, ಅವಂತೀಶ್ವರ ಮತ್ತು ಅವಂತಿಸ್ವಾಮಿ ದೇವಸ್ಥಾನದಿಂದ ತೆಗೆಯಲ್ಪಟ್ಟ ಪುರಾತನ ಕಲಾಕೃತಿಗಳನ್ನು ಶ್ರೀನಗರದ ಶ್ರೀ ಪ್ರತಾಪ ಸಿಂಗ್ ಮ್ಯೂಸಿಯಂನಲ್ಲಿ ಇಡಲಾಗಿದೆ.
ಪುರಾತನದ ಕಾಲದಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿದ್ದ ವಾಸ್ತುಶಿಲ್ಪ ಶೈಲಿಯನ್ನು ಈ ದೇವಸ್ಥಾನ ಹೊಂದಿದೆ. ಆದರೆ ಕಾಲಕಳೆದಂತೆ ಶಿವ ಅವಂತೀಶ್ವರ ದೇವಸ್ಥಾನವು ಕಳೆಗುಂದಿದೆ. ಸುಲ್ತಾನ್ ಸಿಕಂದರ್ ಈ ದೇಗುಲದ ಮೇಲೆ ದಾಳಿ ಮಾಡಿದ ನಂತರ ಇದನ್ನು ಬುತ್ಶಿಕೆನ್ ಎಂದು ಕರೆಯಲಾಯಿತು. ದೇವಸ್ಥಾನ ಮತ್ತು ಸುತ್ತಲಿನ ಪ್ರದೇಶದ ನಿರ್ಮಾಣಗಳು ನಾಶವಾಗಿದ್ದು ಈ ರಾಜನ ಕಾಲದಲ್ಲಿ. ದೇವಸ್ಥಾನ ಶಿಥಿಲಗೊಳ್ಳಲು ಇನ್ನೊಂದು ಪ್ರಮುಖ ಕಾರಣವೆಂದರೆ, ದೇವಸ್ಥಾನದ ನಿರ್ಮಾಣಕ್ಕೆ ಗಟ್ಟಿಮುಟ್ಟಾದ ಕಚ್ಚಾವಸ್ತುಗಳನ್ನು ಬಳಸದೆ ಇದ್ದದ್ದು. ಹೀಗಾಗಿ ದೇಗುಲಗಳು ದಾಳಿಗಳಿಂದ ಮತ್ತು ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿ ಶಿಥಿಲಾವಸ್ಥೆಯನ್ನು ತಲುಪಿವೆ.
ವಿವಿಧ ರೂಪದಲ್ಲಿ ಹಲವು ದೇವ-ದೇವತೆಗಳ ಮೂರ್ತಿಗಳು ಈ ದೇವಸ್ಥಾನದಲ್ಲಿ ಕಾಣಸಿಗುತ್ತವೆ. ತೀರಾ ಸೂಕ್ಷ್ಮವಾಗಿ ನೋಡಿದರೆ ಮಾತ್ರ ದೇವಸ್ಥಾನದ ಸಾಂಸ್ಕೃತಿಕ ವೈಭವವನ್ನು ನೋಡಲು ಸಾಧ್ಯ. ಇಲ್ಲಿನ ಪ್ರಾಕಾರಗಳು ಪ್ಲಾಸ್ಟರಿನ ಒಂದು ತೆಳು ಲೇಯರಿನ ಮೂಲಕ ಶೃಂಗರಿಸಲಾಗಿತ್ತು ಎಂಬುದನ್ನು ಗಮನಿಸಬಹುದು.